×
Ad

ಶಿಕ್ಷಣಕ್ಕೆ ಬ್ಯಾರಿ ಸಮುದಾಯ ಹೆಚ್ಚಿನ ಆದ್ಯತೆ ನೀಡಬೇಕು: ಸ್ಪೀಕರ್ ಯು.ಟಿ. ಖಾದರ್

ಬ್ಯಾರಿ ಸಾಹಿತ್ಯ ಅಕಾಡಮಿಯ 2024ನೆ ಸಾಲಿನ ಗೌರವ ಪ್ರಶಸ್ತಿ ಪ್ರದಾನ

Update: 2025-08-10 21:18 IST

ಮೈಸೂರು: ಸ್ವಾಭಿಮಾನಕ್ಕೆ ಹೆಸರುವಾಸಿಯಾದ ಮತ್ತು ಶ್ರಮಜೀವಿಗಳಾದ ಬ್ಯಾರಿ ಸಮುದಾಯದ ಜನರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.

ಮೈಸೂರಿನ ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ತಿಲಕ್ ನಗರದ ಈದ್ಗಾ ಮೈದಾನದ ಎದುರಿನ ಎ.ಆರ್.ಕನ್ವೆನ್ಶನ್ ಸೆಂಟರ್‌ನಲ್ಲಿ ರವಿವಾರ ನಡೆದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಅವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯ, ಆ ನಿಟ್ಟಿನಲ್ಲಿ ಸಮುದಾಯದವರು ಎಚ್ಚೆತ್ತುಕೊಳ್ಳಬೇಕು. ನಾವು ಎಷ್ಟೇ ಹಣಗಳಿಸಿದರೂ ಕೂಡ ಶಿಕ್ಷಣ ಮುಖ್ಯವಾಗಿದೆ. ಹಾಗಾಗಿ ಎಂತಹ ಜಟಿಲ ಕಷ್ಟ ಬಂದರೂ ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಬಾರದು ಎಂದು ಯು.ಟಿ.ಖಾದರ್ ಹೇಳಿದರು.

ಬ್ಯಾರಿ ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಮರೆತರೆ ಇತಿಹಾಸ ಮರೆತಂತೆ. ಇತಿಹಾಸ ಮರೆತವರು ಯಾವತ್ತೂ ಇತಿಹಾಸ ಸೃಷ್ಟಿಸಲಾರರು. ಹಾಗಾಗಿ ಬ್ಯಾರಿ ಸಮುದಾಯದ ಸಂಸ್ಕೃತಿಯ ಇತಿಹಾಸವನ್ನು ನೆನಪು ಮಾಡಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಖಾದರ್ ಕರೆ ನೀಡಿದರು.

ಬ್ಯಾರಿ ಸಮುದಾಯದ ಏಳಿಗೆಗೆ ನಮ್ಮ ಹಿರಿಯರು ಸಾಕಷ್ಟು ಶ್ರಮಿಸಿದ್ದಾರೆ. ಅವರ ಶ್ರಮದ ಫಲ ನಾವು ಇಂದು ಇಂತಹ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗಿದೆ. ಹಾಗಾಗಿ ಇಂದಿನ ಯುವ ಪೀಳಿಗೆ ಹಿರಿಯರು ಹಾಕಿಕೊಟ್ಟ ಮಾರ್ಗವನ್ನು ಮುನ್ನಡೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಖಾದರ್ ಹೇಳಿದರು.

ಬ್ಯಾರಿ ಒಂದು ಭಾಷೆಗೆ ಸೀಮಿತಗೊಳ್ಳದೆ ತಮ್ಮಲ್ಲಿನ ಸಂಸ್ಕೃತಿ ಆಚಾರ ವಿಚಾರ, ಉಡುಗೆ ತೊಡುಗೆಗಳ ಮೂಲಕ ಸರ್ವರನ್ನು ಗೌರವದಿಂದ ಕಾಣುವ ಸಮಾಜ. ಹಾಗಾಗಿ ನಮ್ಮ ಆಚರಣೆಗಳೇ ಭಿನ್ನವಾಗಿದ್ದು, ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

*ಡಾ.ಮಕ್ಸೂದ್ ಅಹ್ಮದ್ ಮುಲ್ಕಿ (ಬ್ಯಾರಿ ಭಾಷೆ-ಸಂಘಟನೆ), ಪಿ.ಎಂ.ಹಸನಬ್ಬ ಮೂಡುಬಿದಿರೆ (ಬ್ಯಾರಿ ಕಲೆ-ಸಂಸ್ಕೃತಿ), ಹೈದರ್ ಕಾಟಿಪಳ್ಳ (ಬ್ಯಾರಿ ಸಾಹಿತ್ಯ) ಅವರಿಗೆ 2024ನೆ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬೆಂಗಳೂರಿನ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿ ಸದಸ್ಯ ಅತ್ತೂರು ಚೆಯ್ಯಬ್ಬ ಅಭಿನಂದನಾ ಭಾಷಣ ಮಾಡಿದರು.

ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಪೆರಿಮೆ (ದ್ವಿತೀಯ ಮುದ್ರಣ) ಮತ್ತು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್‌ಬೆಲ್ಕಿರಿ ದ್ವೈಮಾಸಿಕ ಪುಸ್ತಕ ಬಿಡುಗಡೆ ಮಾಡಿದರು.

ಮುಖ್ಯ ಅತಿಥಿಯಾಗಿ ದ.ಕ.ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯಸ್ ರೋಡ್ರಿಗಸ್, ಕರ್ನಾಟಕ ವಸ್ತು ಪ್ರದರ್ಶನದ ಮಾಜಿ ಅಧ್ಯಕ್ಷ ಅಬ್ದುಲ್ ಅಝೀಝ್ (ಅಬ್ದುಲ್ಲ) ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಕಾಡಮಿಯ ಸದಸ್ಯರಾದ ಹಮೀದ್ ಹಸನ್ ಮಾಡೂರು, ಶರೀಫ್ ಭಾರತ್ ಬಾಳಿಲ, ಹಫ್ಸಾ ಬಾನು ಬೆಂಗಳೂರು, ಸಾರಾ ಅಲಿ ಪರ್ಲಡ್ಕ, ಶಮೀರಾ ಜಹಾನ್, ತಾಜುದ್ದೀನ್ ಅಮ್ಮುಂಜೆ, ಅಬೂಬಕರ್ ಅನಿಲಕಟ್ಟೆ, ಶಮೀರ್ ಮುಲ್ಕಿ ಉಪಸ್ಥಿತರಿದ್ದರು.

ಅಕಾಡಮಿಯ ರಿಜಿಸ್ಟ್ರಾರ್ ರಾಜೇಶ್ ಸ್ವಾಗತಿಸಿದರು. ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ ಮೈಸೂರು ಪ್ರಧಾನ ಕಾರ್ಯದರ್ಶಿ ಎಂ.ಐ. ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಸೋಸಿಯೇಶನ್‌ನ ಅಧ್ಯಕ್ಷ ಹಾಜಿ ಯು.ಕೆ.ಹಮೀದ್ ವಂದಿಸಿದರು. ಅಕಾಡಮಿಯ ಸದಸ್ಯ ಯು.ಎಚ್.ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

"ನಾನು ವಿಧಾನಸಭೆ ಅಧ್ಯಕ್ಷನಾದಾಗ ಹಲವರು ನನ್ನನ್ನು ಟೀಕಿಸಿದ್ದರು. ಆದರೆ ನಿಮ್ಮೆಲ್ಲರ ಪ್ರೀತಿ, ಹಿರಿಯರ ಆಶೀರ್ವಾದದಿಂದ ಅದನ್ನು ಉತ್ತಮವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ನನಗೆ ಮುಖ್ಯಮಂತ್ರಿ ಯಾಗಬೇಕು ಎಂಬ ಆಸೆ ಇಲ್ಲ, ಮನಸ್ಸಿಗೆ ಸಂತೋಷ ಕೊಡುವ ನಾಲ್ಕಾರು ಜನರಿಗೆ ಅನುಕೂಲ ಮಾಡಿಕೊಡುವ ಹುದ್ದೆ ಸಿಕ್ಕಿದರೆ ಸಾಕು".

-ಯು.ಟಿ.ಖಾದರ್

ರಾಜ್ಯ ವಿಧಾನಸಭಾಧ್ಯಕ್ಷ

"ರಾಜ್ಯದಲ್ಲಿ ಬ್ಯಾರಿ ಸಮುದಾಯದ 15 ಲಕ್ಷ ಮಂದಿ ಇದ್ದಾರೆ. ಅವರ ಅಭಿವೃದ್ಧಿಗೆ ಬ್ಯಾರಿ ಡೆವಲಪ್ ಮೆಂಟ್ ಕಾರ್ಪೊರೇಷನ್‌ನ ಅಗತ್ಯವಿದೆ. ಇದನ್ನು ಮಾಡುವ ನಿಟ್ಟಿನಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮುಖ್ಯಮಂತ್ರಿಯ ಜೊತೆ ಮಾತನಾಡಬೇಕು. ಜೊತೆಗೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಜಾತಿಗಣತಿ ಬರುತ್ತಿದ್ದು, ಮುಸ್ಲಿಮ್ ಸಮುದಾಯ ಈ ವಿಚಾರದಲ್ಲಿ ಸ್ವಲ್ಪಗೊಂದಲದಲ್ಲಿದೆ. ಹಾಗಾಗಿ ಸಂಘ ಸಂಸ್ಥೆಗಳೊಟ್ಟಿಗೆ ಸಭೆ ನಡೆಸಿ ಗೊಂದಲ ನಿವಾರಣೆ ಮಾಡಬೇಕು".

-ಅಬ್ದುಲ್ ಮಜೀದ್, ಎಸ್‌ಡಿಪಿಐ ರಾಜ್ಯಾಧ್ಯಕ್ಷ




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News