ಸಾಹಿತ್ಯಕ್ಕೆ ಪರ್ಯಾಯವಾದ ಶಕ್ತಿ ಇನ್ನೊಂದಿಲ್ಲ: ಡಾ.ಮಹಾಲಿಂಗ ಭಟ್
ಸಂತ ಅಲೋಶಿಯಸ್ ಪರಿಗಣಿತ ವಿವಿಯಲ್ಲಿ 3 ದಿನಗಳ ಸಾಹಿತ್ಯ ಅಕಾಡಮಿ ಪುಸ್ತಕ ಪ್ರದರ್ಶನಕ್ಕೆ ಚಾಲನೆ
ಮಂಗಳೂರು, ಆ.12: ಸಾಹಿತ್ಯಕ್ಕೆ ಪರ್ಯಾಯ ಶಕ್ತಿ ಇನ್ನೊಂದಿಲ್ಲ ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಭಾಷಾ ನಿಖಾಯದ ಮುಖ್ಯಸ್ಥ ಪ್ರೊ.ಡಾ.ಮಹಾಲಿಂಗ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಕೊಂಕಣಿ ಸಾಹಿತಿ ವಿ.ಜೆ.ಪಿ.ಸಲ್ಡಾನ ಜನ್ಮಶತಾಬ್ದಿಯ ಅಂಗವಾಗಿ ಹೊಸದಿಲ್ಲಿ ಸಾಹಿತ್ಯ ಅಕಾಡಮಿ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕೊಂಕಣಿ ಸಂಸ್ಥೆ ವಿಶನ್ ಕೊಂಕಣಿ ಆ.13-14ರಂದು ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಪ್ರಯುಕ್ತ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಅಕಾಡಮಿ ಪುಸ್ತಕ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
24 ಭಾಷೆಗಳಲ್ಲಿನ ಉತ್ತಮ ಸಾಹಿತ್ಯ ಗುರುತಿಸಿ ಪ್ರಕಟಿಸುವುದು, ಒಂದು ಭಾಷೆಯಿಂದ ಇನ್ನೊಂದಕ್ಕೆ ಅನುವಾದ ಮಾಡಿ ಪ್ರಕಟಿಸುವುದು ಸುಲಭದ ಕೆಲಸವಲ್ಲ. ಕೇಂದ್ರ ಸಾಹಿತ್ಯ ಅಕಾಡಮಿಯು ಇದನ್ನು ಹಲವಾರು ದಶಕಗಳಿಂದ ಮಾಡುತ್ತಾ ಬಂದಿದೆ. ಭಾರತೀಯ ಸಾಹಿತ್ಯದ ನಿರ್ಮಾತೃರು ಎಂಬ ಸರಣಿ ಪುಸ್ತಕಗಳನ್ನು ಓದಿದರೆ ಕಾಲಮಾನದ ಆಚೆಗಿನ ಸಾಮಾಜಿಕ ಪರಿಸ್ಥಿತಿಗಳನ್ನು ಯೋಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾಹಿತ್ಯ ಅಕಾಡಮಿ, ದಿಲ್ಲಿಯ ಕೊಂಕಣಿ ಭಾಷಾ ಸಮಿತಿಯ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಕೇಂದ್ರ ಸಾಹಿತ್ಯ ಅಕಾಡಮಿ ವಿಶ್ವದ ಅತಿದೊಡ್ಡ ಸಾಹಿತ್ಯ ಸಂಸ್ಥೆಯಾಗಿದೆ. ಸಾಹಿತ್ಯ ಅಕಾಡಮಿಯಿಂದ 19 ಗಂಟೆಗೆ ಒಂದು ಪುಸ್ತಕ ಹೊರಬರುತ್ತದೆ ಎಂದರು.
ಸಾಹಿತ್ಯ ಅಕಾಡಮಿ ಬೆಂಗಳೂರು ಪ್ರಾದೇಶಿಕ ಸಮಿತಿಯ ರಂಗನಾಥ್, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ, ಕೊಂಕಣಿ ಸಂಸ್ಥೆ ಕಾರ್ಯಕ್ರಮ ಸಂಯೋಜಕ ಜೋಕಿಮ್ ಪಿಂಟೊ, ಕೇಂದ್ರ ಸಾಹಿತ್ಯ ಅಕಾಡಮಿ ಭಾಷಾ ಸಲಹಾ ಸಮಿತಿ ಸದಸ್ಯ ಸ್ಟ್ಯಾನಿ ಬೇಳ ಉಪಸ್ಥಿತರಿದ್ದರು.
ಭಾಷಾ ಸಲಹಾ ಸಮಿತಿಯ ಸದಸ್ಯ ಎಚ್.ಎಂ. ಪೆರ್ನಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
*ಪುಸ್ತಕ ಪ್ರದರ್ಶನ ಮಾರಾಟ: ಮಂಗಳವಾರ ಆಗಸ್ಟ್ 12ರಿಂದ ಗುರುವಾರ 14ರ ವರೆಗೆ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ವಿಶೇಷ ರಿಯಾಯತಿ ದರದಲ್ಲಿ ಪುಸ್ತಕಗಳು ಮಾರಾಟಕ್ಕಿವೆ. ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆ, ಸಂಘ - ಸಂಸ್ಥೆಗಳ ಗ್ರಂಥಾಲಯಗಳಿಗೆ ವಿಶೇಷ ರಿಯಾಯತಿ ಇದೆ ಎಂದು ಪ್ರಕಟನೆ ತಿಳಿಸಿದೆ.