×
Ad

ಸೇವಾ ಮನೋಭಾವದಿಂದಲೇ ದೇಶವನ್ನು ರೂಪಿಸಬಹುದು: ಡಾ. ಜಯಕರ ಶೆಟ್ಟಿ

Update: 2025-08-22 23:39 IST

ಕೊಣಾಜೆ: ಗುಣಮಟ್ಟದ ಶಿಕ್ಷಣ, ಜಾಗತಿಕ ಅವಕಾಶಗಳು ಹಾಗೂ ಸೇವಾ ಮನೋಭಾವದಿಂದಲೇ ದೇಶವನ್ನು ರೂಪಿಸಬಹುದು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜಯಕರ ಶೆಟ್ಟಿ ಹೇಳಿದರು.

ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ದೇರಳಕಟ್ಟೆಯ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ತನ್ನ 40 ವರ್ಷಗಳ ಶ್ರೇಷ್ಠತೆ ಸಂಭ್ರಮದ ಅಂಗವಾಗಿ ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಹಳೆಯ ವಿದ್ಯಾರ್ಥಿಗಳ ಕೂಟ – 2025 ಅನ್ನು ಅವಿಷ್ಕಾರ್ ಸಭಾಂಗಣದಲ್ಲಿ ಜರಗಿದ ಎರಡನೇ ದಿನದ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತವು ಸದಾ ಜ್ಞಾನ ಮತ್ತು ವಿದ್ಯೆಯ ನೆಲೆಯಾಗಿದೆ. ಇಂದಿಗೆ ದೇಶದಲ್ಲಿ 496 ಉನ್ನತ ಶಿಕ್ಷಣ ಸಂಸ್ಥೆಗಳು, 1200 ವಿಶ್ವವಿದ್ಯಾಲಯಗಳು ಮತ್ತು 50,000 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. 4 ಕೋಟಿ 30 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಪ್ರತಿವರ್ಷ 50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳುತ್ತಾರೆ, ಇದು ನಮ್ಮ ಶಿಕ್ಷಣ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ನೆನಪಿಸುತ್ತದೆ.

ಒಂದು ಕಾಲದಲ್ಲಿ ಗ್ರಾಮೀಣ ಜನರು 20-50 ಕಿಮೀ ದೂರ ಪ್ರಯಾಣಿಸಿ ದಂತ ಚಿಕಿತ್ಸೆಗೆ ಹೋಗಬೇಕಾಗುತ್ತಿತ್ತು. ಇಂದು ಸ್ಥಾಪಕರ ಪ್ರೇರಣೆಯಿಂದ ನಿರ್ಮಾಣವಾದ ಎ.ಬಿ. ಶೆಟ್ಟಿ ದಂತ ವಿಜ್ಞಾನ ಸಂಸ್ಥೆ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದೆ.

ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಟ್ಟೆ ವಿ.ವಿ.ಯ ಮುಖವಾಣಿಯೇ ಎ.ಬಿ ಶೆಟ್ಟಿ ದಂತ ಕಾಲೇಜಾಗಿದೆ. 1990 ರಲ್ಲಿ ಕಾಲೇಜಿನ 10 ಟಾಪರ್‌ ಗಳನ್ನು ಬೆಂಗಳೂರು ವಿ.ವಿ ಗುರುತಿಸಿತ್ತು. ಮಾರ್ಗದರ್ಶಕ ಡಾ. ಶ್ರೀಧರ್‌ ಶೆಟ್ಟಿ ಅವರಿಂದ ದಂತ ವೈದ್ಯಕೀಯ ಕಾಲೇಜು ಅಭಿವೃದ್ಧಿಗೆ ಸಾಧ್ಯವಾಗಿದೆ. ದೇಶದಲ್ಲೇ ವಿ.ವಿಗೆ ಗೌರವ ತರಲು ದಂತ ಕಾಲೇಜು ಒಂದು ಭಾಗವಾಗಿದೆ ಎಂದರು

ಸಹಕುಲಾಧಿಪತಿಗಳಾದ ಡಾ.ಎಂ.ಶಾಂತರಾಮ ಶೆಟ್ಟಿ, ಆಡಳಿತ ವಿಭಾಗದ ವಿಶಾಲ್‌ ಹೆಗ್ಡೆ, ಕುಲಪತಿ ಡಾ.ಎಂ.ಎಸ್‌ ಮೂಡಿತ್ತಾಯ, ದಂತ ಕಾಲೇಜಿನ ವಿಶ್ರಾಂತ ಡೀನ್ ಡಾ.ಎನ್‌ ಶ್ರೀಧರ್‌ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಪ್ರೊ. ಉಪಪ್ರಾಂಶುಪಾಲರು ಡಾ. ಎಂ.ಎಸ್. ರವಿ, ಡಾ. ಪೃಥೇಶ್ ಶೆಟ್ಟಿ ಉಪಸ್ಥಿತರಿದ್ದರು.

ಸಮ್ಮೇಳನ ಆಯೋಜನಾ ಅಧ್ಯಕ್ಷೆ ಹಾಗೂ ಡೀನ್‌ ಪ್ರೊ. ಮಿತ್ರಾ ಎನ್. ಹೆಗ್ಡೆ ಸ್ವಾಗತಿಸಿದರು. ಆಯೋಜನಾ ಕಾರ್ಯದರ್ಶಿ ಪ್ರೊ. ಶಿಶಿರ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News