×
Ad

ಚಂದ್ರಕಲಾ ನಂದಾವರ ರಚಿತ 'ಕಾಲ ಕಟ್ಟಿದ ಕನಸು" ಕೃತಿ ಬಿಡುಗಡೆ

Update: 2025-10-08 19:25 IST

ಕೊಣಾಜೆ: ರೋಗ,ರೋಗಿ,ರೋಗಿಯ ಆತ್ಮೀಯರ ಅನುಭವದ ಕಥನಗಳು ಕನ್ನಡದಲ್ಲಿ ಬಂದಿರುವುದು ಬಹಳ ವಿರಳ. ಚಂದ್ರಕಲಾ ಅವರು ಬರೆದಿರುವುದು ಕೇವಲ ಅನುಭವ ಕಥನ ಮಾತ್ರವಲ್ಲದೆ,ಅದೊಂದು ಸಾಹಿತ್ಯಿಕ ಕೃತಿಯಾಗಿದೆ ಎಂದು ಚಿತ್ರದುರ್ಗ ಬಿಎಂಸಿಎಚ್ ಮನೋವೈದ್ಯಕೀಯ ವಿಭಾಗದ ಪ್ರೊ.ಡಾ.ಕೆ.ಎಸ್.ಪವಿತ್ರಾ ಅಭಿಪ್ರಾಯಪಟ್ಟರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಅಧೀನದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ವತಿಯಿಂದ ಬುಧವಾರದಂದು ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಹಿರಿಯ ಚಿಂತಕಿ,ಖ್ಯಾತ ಲೇಖಕಿ ಚಂದ್ರಕಲಾ ನಂದಾವರ ಅವರು ತಮ್ಮ ಪತಿ ಪ್ರೊ.ವಾಮನ ನಂದಾವರರ ಡಿಮೆನ್ಶಿಯಾ ಅಲ್ಝೈಮರ್ಸ್ ಕಾಯಿಲೆಯ-ಅನುಭವ ಯಾನದ ಬಗ್ಗೆ ರಚಿಸಿದ "ಕಾಲ ಕಟ್ಟಿದ ಕನಸು"ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಸಭೆಗೆ ಪುಸ್ತಕದ ಬಗ್ಗೆ ಪರಿಚಯಿಸಿ ಮಾತನಾಡಿದರು.

ಕಲೆ,ಸಾಹಿತ್ಯ ಮತ್ತು ಆರೋಗ್ಯದ ಜಗತ್ತು ಪರಸ್ಪರ ಕೊಡುಕೊಳ್ಳುವಿಕೆಯನ್ನ ನಡೆಸಬೇಕೆಂಬುದಕ್ಕೆ ಈ ಪುಸ್ತಕವು ನಿದರ್ಶನವಾಗಿದೆ.ಬಿ.ವಿ ಭಾರತಿ ಅವರ "ಸಾಸಿವೆ ತಂದವಳು"ಎಂಬ ಕ್ಯಾನ್ಸರ್ ಗೆದ್ದ ಕಥಾನಕ ಕನ್ನಡದಲ್ಲಿ ಗುರುತಿಸವುವಂತದ್ದಾಗಿದೆ. ಚಂದ್ರಕಲಾ ಅವರ ಈ ಕೃತಿಯು ಗಮನಾರ್ಹ ಸ್ಥಾನ ಪಡೆಯುತ್ತದೆ.ಸೃಜನ‌ಶೀಲ ಕಥೆ,ಕೃತಿ ನಿರ್ಮಾಣ ಮಾಡಲು ತೀವ್ರವಾದ ಅನುಭವ ಇರಬೇಕು.ಅದರಲ್ಲಿರುವ ಸಂದೇಶವು ಬೇರೆಯವರಿಗೆ ತಲುಪುವ ಹಾಗೆ ಉತ್ಪನ್ನವನ್ನ ನಾವು ಮಾಡಬೇಕು.ಅವರ ಸೃಜನಶೀಲ ಮನಸು ಇಲ್ಲಿ ಕೆಲಸ ಮಾಡಿದೆ. ಅನುಭವವನ್ನು ಕೇವಲ ವೈಯಕ್ತಿಕ ಘಟನೆಯಾಗಿರಿಸದೆ ಸಮಷ್ಟಿ ಪ್ರಜ್ನೆ ತಲುಪುವ ಕೆಲಸವನ್ನು ಕೃತಿ ಮಾಡಿದೆ.

ಚಂದ್ರಕಲಾ ಅವರು ಡಿಮೆನ್ಶಿಯಾ (ಮರೆಗುಳಿತನ‌)ಕಾಯಿಲೆಯ ಬಗೆಗಿನ‌ ಸಾಕಷ್ಟು ಮಾಹಿತಿಯನ್ನು ಮೊದಲ ಪುಟದಲ್ಲೇ ನೀಡಿದ್ದಾರೆ.ಸಾವನ್ನ ಎದುರು ನೋಡಬೇಕಾದರೆ ಮನಸಿನ ನೋವಿನ ಭಿನ್ನ ಮುಖಗಳನ್ನ, ಯೋಚನೆಗಳನ್ನ ,ಭವಿಷ್ಯ,ಜಾತಕನೋಡಿದನ್ನೂ ಕೃತಿಯಲ್ಲಿ ದಾಖಲಿಸಿದ್ದಾರೆ.ಹಾಗಾಗಿ ಈ ಪುಸ್ತಕವನ್ನ ವೈದ್ಯರೂ ಓದಲೇ ಬೇಕಿದೆ.ಈ ಅನುಭವ ಕಥನವು ಬರೆದ ಲೇಖಕಿ ಮತ್ತು ಓದುಗನಿಗೆ ಏಕಕಾಲದ ಚಿಕಿತ್ಸಕವಾಗಿ ಕಾಣುತ್ತದೆ ಎಂದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಪ್ರೊ.ಡಾ.ಸುಮಲತಾ ಆರ್.ಶೆಟ್ಟಿ,ಯೆನೆಪೋಯ ವಿವಿಯ ಹಿರಿಯ ನಾಗರಿಕರ ವಿಭಾಗದ ಮುಖ್ಯಸ್ಥರು ಹಾಗೂ ಸಂಶೋಧಕರಾದ ಡಾ.ಪ್ರಭಾ ಅಧಿಕಾರಿ ಉಪಸ್ಥಿತರಿದ್ದರು.

ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಡಾ.ಶಿಶಿರ್ ಕುಮಾರ್ ಸ್ವಾಗತಿಸಿದರು. ಡಾ.ಉಂಡಾರು ಶ್ರೀನಿವಾಸ್ ಭಟ್ ಲೇಖಕಿಯನ್ನು ಪರಿಚಯಿಸಿದರು. ಶೃತಿ ಅಮೀನ್ ಮುಖ್ಯ ಅತಿಥಿಯನ್ನ ಪರಿಚಯಿಸಿದರು. ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಸಾಯಿಗೀತ ನಿರೂಪಿಸಿದರು.ಪ್ರೊ.ಆಗ್ನಿತ ಐಮನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News