ಮೂಡುಬಿದಿರೆ | ಫಾರ್ಚೂನ್ ಪ್ರಮೋಟರ್ಸ್ನ 9ನೇ ಯೋಜನೆ ʼಫಾರ್ಚೂನ್ ಔರಾ' ಯೋಜನೆ ಅನಾವರಣ
ಮೂಡುಬಿದಿರೆ: ಇಲ್ಲಿನ ನಾಲ್ವರು ಉದ್ಯಮಿಗಳ ಪಾಲುದಾರಿಕೆಯ ಫಾರ್ಚೂನ್ ಪ್ರಮೋಟರ್ಸ್ನ 9ನೇ ವಸತಿ ಮತ್ತು ವಾಣಿಜ್ಯ ಯೋಜನೆಯಾಗಿರುವ 'ಫಾರ್ಚೂನ್ ಔರಾ'ದ (Fortune Aura) ಯೋಜನೆ ಅನಾವರಣ ಸಮಾರಂಭವು ಶನಿವಾರ ಅಲಂಗಾರಿನಲ್ಲಿ ಯಶಸ್ವಿಯಾಗಿ ನಡೆಯಿತು.
ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಟ್ಟಡ ನಿರ್ಮಾಣದಲ್ಲಿ ವ್ಯವಸ್ಥಿತ ಯೋಜನೆ, ಗುಣಮಟ್ಟದ ಕಾಮಗಾರಿ ಹಾಗೂ ಗ್ರಾಹಕಸ್ನೇಹಿ ಮಾರುಕಟ್ಟೆ ನೀತಿಯನ್ನು ಪಾಲಿಸಿರುವುದರಿಂದ ಅದರ ಯೋಜನೆಗಳು ಯಶಸ್ವಿಯಾಗುತ್ತವೆ. ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ಫಾರ್ಚೂನ್ ಸಂಸ್ಥೆಯವರು ಯಶಸ್ವಿಯಾಗಿ ಎಂಟು ಯೋಜನೆಗಳನ್ನು ಪೂರೈಸಿದ್ದು, ಇದೀಗ ಒಂಬತ್ತನೇ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಸೌಹಾರ್ದಯುತವಾಗಿ ಮುನ್ನಡೆಸುವುದು ಅವರ ಯಶಸ್ಸಿನ ಗುಟ್ಟು, ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮುಂಬೈ, ಬೆಂಗಳೂರಿನಂತಹ ಮಹಾನಗರಗಳಲ್ಲೂ ಸಂಸ್ಥೆಯು ಯೋಜನೆಗಳನ್ನು ಪ್ರಾರಂಭಿಸಲಿ ಎಂದು ಶುಭ ಹಾರೈಸಿದರು.
ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಕಚೇರಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಯೋಜನೆಯ ಬ್ರೋಷರ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಬದ್ಧತೆ ಮತ್ತು ನಿಷ್ಠೆಯಿಂದ ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಫಾರ್ಚೂನ್ ಸಂಸ್ಥೆಯ ಯೋಜನೆಗಳು ಸಂಸ್ಥೆಗೆ ಮತ್ತು ಮೂಡುಬಿದಿರೆಗೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಡಾ.ಎಂ.ಮೋಹನ ಆಳ್ವ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಾಯ್ಜಿವರ್ಲ್ಡ್ ಮೀಡಿಯಾದ ಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಮಾತನಾಡಿ, ಫಾರ್ಚೂನ್ ಸಂಸ್ಥೆಯವರು ಕಟ್ಟುತ್ತಿರುವುದು ಕೇವಲ ಅಪಾರ್ಟ್ಮೆಂಟ್ ಅಲ್ಲ, ಅದು ಸೌಹಾರ್ದತೆಯ ನಿಲಯ. ಸರ್ವಧರ್ಮದ ನಾಲ್ವರು ಪ್ರಮೋಟರ್ಸ್ಗಳು ಮುನ್ನಡೆಸುತ್ತಿರುವ ಈ ಸಂಸ್ಥೆಯನ್ನು ಸರ್ವಧರ್ಮದವರು ಇಷ್ಟಪಡುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಸದಸ್ಯ ಪಿ.ಕೆ.ಥೋಮಸ್, ಎಂ.ಸಿ.ಎಸ್. ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಹಾಗೂ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಫಾರ್ಚೂನ್ ಪ್ರಮೋಟರ್ಸ್ನ ಪಾಲುದಾರರಾದ ರೋನಿ ಫೆರ್ನಾಂಡೀಸ್, ಡೆನ್ನೀಸ್ ಪಿರೇರಾ, ಮಹೇಂದ್ರ ವರ್ಮಾ ಜೈನ್, ಅಬುಲ್ ಅಲಾ ಪುತ್ತಿಗೆ, ಕೋ ಪ್ರಮೋಟರ್ಸ್ ಹೆನ್ರಿ ಡಿಸೋಜ ಹಾಗೂ ಸಿರಿಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಟ್ಟಡದ ವಾಸ್ತುಶಿಲ್ಪಿ ಗುಲ್ಷನ್ ರಾಯ್, ಇಂಜಿನಿಯರ್ ಆನಂದ ಭಟ್ ಮತ್ತು ವೀರೇಂದ್ರ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು.
ನಿತೇಶ್ ಬಲ್ಲಾಳ್ ಕಾರ್ಯಕ್ರಮವನ್ನು ನಿರೂಪಿಸಿದರು.