×
Ad

ವಿಶೇಷ ಮಧ್ಯಸ್ಥಿಕೆ ಅಭಿಯಾನ : ರಾಜ್ಯದಲ್ಲಿ 5,524 ಪ್ರಕರಣಗಳು ಇತ್ಯರ್ಥ

Update: 2025-10-08 20:03 IST

ಮಂಗಳೂರು, ಅ.8: ರಾಜ್ಯ ಮತ್ತು ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ಮೂಲಕ ರಾಜ್ಯದಲ್ಲಿ 5,524 ಪ್ರಕರಣಗಳು ಇತ್ಯರ್ಥಗೊಂಡಿದೆ ಎಂದು ಕರ್ನಾಟಕ ರಾಜ್ಯ ಸೇವಾ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು, ಮಧ್ಯಸ್ಥಿಕೆ ಮತ್ತು ಸಂಧಾನ ಯೋಜನಾ ಸಮಿತಿ (ಎಂಸಿಪಿಸಿ), ಭಾರತದ ಸರ್ವೋಚ್ಚ ನ್ಯಾಯಾಲಯದೊಂದಿಗೆ, ವಿಶೇಷ ಮಧ್ಯಸ್ಥಿಕೆ ಅಭಿಯಾನವನ್ನು ಜುಲೈ 1 ರಿಂದ ಅಕ್ಟೋಬರ್ 6 ರವರೆಗೆ ಎಲ್ಲಾ ಉಚ್ಚ ನ್ಯಾಯಾಲಯಗಳಲ್ಲಿ, ಜಿಲ್ಲಾ ನ್ಯಾಯಾಲಯಗಳು ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಲು 90 ದಿನಗಳ ಅಭಿಯನ ಕೈಗೊಳ್ಳಲಾಗಿತ್ತು.

ಜುಲೈ 1ರ ತನಕ ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯಗಳ ಮುಂದೆ 13,86,837 ಪ್ರಕರಣಗಳು ಬಾಕಿ ಇದ್ದವು. ಪ್ರಕರಣಗಳಲ್ಲಿ 76,197 ಪ್ರಕರಣಗಳನ್ನು ಗುರುತಿಸಿ ಮಧ್ಯಸ್ಥಿಕೆ ಕೇಂದ್ರಗಳಿಗೆ ಕಳುಹಿಸಲಾಯಿತು, ಅದರಲ್ಲಿ 46,676 ಪ್ರಕರಣಗಳನ್ನು ಮಧ್ಯಸ್ಥಿಕೆಗೆ ತೆಗೆದುಕೊಂಡಿದ್ದು, 5,524 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು

ದಂಡ ಪ್ರಕ್ರಿಯಾ ಸಂಹಿತೆ ಕಲಂ 125 ಮತ್ತು ಕೌಟುಂಬಿಕ ಹಿಂಸಾಚಾರ ಕಾಯ್ದೆ ಅಡಿಯಲ್ಲಿನ ಪ್ರಕರಣಗಳು ಸೇರಿದಂತೆ ಒಟ್ಟು 3,038 (2862+176) ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

649 ಪಾಲು ವಿಭಾಗ ಪ್ರಕರಣ, 104 ಎಂವಿಸಿ, 668 ಚೆಕ್ ಬೌನ್ಸ್ ಪ್ರಕರಣ, 21 ವಾಣಿಜ್ಯ ವಿವಾದ , 188 ಕ್ರಿಮಿನಲ್ ಪ್ರಕರಣ, 40 ಡಿಆರ್‌ಟಿ, 8 ಗ್ರಾಹಕ ಪ್ರಕರಣ ವಿಲೇವಾರಿ ಮಾಡಲಾಗಿದೆ.

ಹಳೆಯ ಪ್ರಕರಣಗಳ ಪೈಕಿ ಐದು ವರ್ಷಗಳು ಮೇಲ್ಪಟ್ಟ 177, ಹತ್ತು ಮೇಲ್ಪಟ್ಟ 23, ಹದಿನೈದು ವರ್ಷಗಳು ಮೇಲ್ಪಟ್ಟ 6 ಪ್ರಕರಣಗಳನ್ನು ಬಗೆಹರಿಸಲಾಗಿದೆ. 163 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ಈ ವಿಶೇಷ ಅಭಿಯಾನದ ಮಧ್ಯಸ್ಥಿಕೆ ಕಾರ್ಯಾಚರಣೆಯಿಂದ ಪ್ರಯೋಜನ ಪಡೆದಿದ್ದಾರೆ.

ರಾಜ್ಯದ ವಿವಿಧ ಸ್ಥಳಗಳಿಂದ ಒಟ್ಟು 159 ದಂಪತಿಗಳು ವಿಶೇಷ ಅಭಿಯಾನದ ಮಧ್ಯಸ್ಥಿಕ ಕಾರ್ಯಾಚರಣೆಯಲ್ಲಿ ಸಂಧಾನದ ಕಾರಣದಿಂದ ಪುನರ್ಮಿಲನಗೊಂಡರು.

ಕರ್ನಾಟಕ ರಾಜ್ಯದಲ್ಲಿ, 1 ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ ಮತ್ತು 28 ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳು ಕಾರ್ಯನಿರ್ವಹಿ ಸುತ್ತಿವೆ. ಕರ್ನಾಟಕ ಮಧ್ಯಸ್ಥಿಕೆ ಕೇಂದ್ರವು, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ನಗರ ವ್ಯಾಪ್ತಿಯೊಳಗಿನ ನ್ಯಾಯಾಲಯಗಳ ಪ್ರಕರಣಗಳ ಮಧ್ಯಸ್ಥಿಕೆ ಪ್ರಕ್ರಿಯೆಯು ಮೇಲ್ವಿಚಾರಣೆ ಮಾಡುತ್ತದೆ. ಉಳಿದ 28 ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಮೂಲಕ ನಿರ್ವಹಿಸಲಾಗುತ್ತಿದೆ.

ಜಿಲ್ಲಾ ಮತ್ತು ತಾಲೂಕು ವಕೀಲರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ಪಟ್ಟಿಯಲ್ಲಿರುವ ಮಧ್ಯಸ್ಥಿಕೆದಾರರೆಲ್ಲರೂ ಮಧ್ಯಸ್ಥಿಕೆ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳ ಸಹ-ಸಂಯೋಜಕರಾಗಿದ್ದು, ಈ ವಿಶೇಷ ಅಭಿಯಾನದ ಯಶಸ್ಸಿಗಾಗಿ ಆಯಾ ನ್ಯಾಯಾಂಗ ಅಧಿಕಾರಿಗಳು, ಮಧ್ಯಸ್ಥಿಕೆಗಾರರು ಮತ್ತು ಇತರ ಪಾಲುದಾರರರನ್ನು ಪ್ರೇರೇಪಿಸಲು ಒಟ್ಟು 686 ಸಭೆಗಳನ್ನು ನಡೆಸಿದ್ದಾರೆ.

ವಿಶೇಷ ಮಧ್ಯಸ್ಥಿಕೆ ಅಭಿಯಾನದಲ್ಲಿ ದಾಖಲೆಯ ಸಂಖ್ಯೆಯ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಕ್ಕಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News