×
Ad

ಅಡ್ಡೂರು : ಮಾದಕ ವ್ಯಸನದ ವಿರುದ್ಧ ಸಹರಾ ಶಾಲಾ ಮಕ್ಕಳಿಂದ ಜನ ಜಾಗೃತಿ ಜಾಥಾ

Update: 2023-11-15 23:06 IST

ಮಂಗಳೂರು: ನಾಗರಿಕ ಸಮಾಜಕ್ಕೆ ಪಿಡುಗಾಗಿ ಕಾಡುತ್ತಿರುವ ಮಾದಕ ವ್ಯಸನದ ವಿರುದ್ಧ ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್(ರಿ) ಮತ್ತು ಸಹರಾ ಆಂಗ್ಲ ಮಾಧ್ಯಮ ಶಾಲೆ ಜಂಟಿಯಾಗಿ ಬುಧವಾರ ಅಡ್ಡೂರಿನ ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿಯಿಂದ ಅಡ್ಡೂರು ಜಂಕ್ಷನ್ ಮೂಲಕ ಪೊಳಲಿ ದೇವಸ್ಥಾನವಾಗಿ ಬೃಹತ್ ಜನ ಜಾಗೃತಿ ಜಾಥಾ ನಡೆಸಿತು.

ಜಾಥಾದಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳ ಸಹಿತ ನಾಗರಿಕರನ್ನುದ್ದೇಶಿಸಿ ಸಾಮಾಜಿಕ ಕಾರ್ಯಕರ್ತ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಮಾದಕ ದ್ರವ್ಯ ಮತ್ತು ವ್ಯಸನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೈಸ್ಕೂಲ್ ಮಟ್ಟದಲ್ಲೇ ಜಾಗೃತಿ ಹುಟ್ಟಿಸಬೇಕಿದೆ. ಗುಟ್ಕಾ, ಗಾಂಜಾ, ಚರಸ್ ಮತ್ತಿತರ ಎಲ್ಲ ಅಮಲು ಪದಾರ್ಥಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿವೆ. ಅಮಲು ಪದಾರ್ಥಗಳ ವಿಷಯದಲ್ಲಿ ಮಕ್ಕಳ ಪೋಷಕರು ಹೆಚ್ಚು ಜಾಗೃತರಾಗಬೇಕು ಎಂದರು.

ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಶ್ರೀ ವಿವೇಕ ಚೈತನ್ಯಾನಂದ ಸ್ವಾಮಿ ಮಾತನಾಡಿ, ಶಾಲೆಗಳಲ್ಲಿ ಮಾತ್ರವಲ್ಲದೆ ಜನ ಸಮುದಾಯದಲ್ಲಿ ಮಾದಕ ದ್ರವ್ಯದ ವಿರುದ್ಧ ಹೋರಾಟ ನಡೆಯಬೇಕು ಎಂದು ಹೇಳಿದರು.

ಅಡ್ಡೂರು ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿಯ ಮೌಲಾನ ಸದಕತುಲ್ಲ ಫೈಝಿ ಮಾತನಾಡಿ, ಮಾದಕ ದ್ರವ್ಯದ ವಿರುದ್ಧ ಮಕ್ಕಳು ಕೈಗೊಂಡ ‘ನಡಿಗೆ’ ಸಮಾಜಕ್ಕೆ ಪ್ರೇರಣೆಯಾಗಲಿ. ಅಮಲು ಪದಾರ್ಥ ಕೆಡುಕಿನ ಜನನಿಯಾಗಿದ್ದು, ಇದರಿಂದ ಕ್ರೂರತೆ ಮತ್ತು ವಿಕೃತಿ ಹೆಚ್ಚಾಗುತ್ತದೆ. ಆದ್ದರಿಂದ ಇದರಿಂದ ಮುಕ್ತರಾಗಬೇಕು ಎಂದರು.

ಅಡ್ಡೂರು ಮಸೀದಿಯಿಂದ ಹೊರಟ ಜಾಥಾವನ್ನು ಅಡ್ಡೂರು ಜಂಕ್ಷನ್, ಕರಿಯಂಗಳ ಪಂಚಾಯತ್, ಪೊಳಲಿ ದೇವಸ್ಥಾನದ ಬಳಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪಂಚಾಯತ್ ಪ್ರತಿನಿಧಿಗಳು ಸ್ವಾಗತಿಸಿ ಶಾಲಾ ಮಕ್ಕಳಿಗೆ ಸಿಹಿತಿಂಡಿ, ಪಾನೀಯ ವಿತರಿಸಿದರು. ಮಾದಕ ದ್ರವ್ಯದ ವಿರುದ್ಧ ವಿಭಿನ್ನ ಫಲಕಗಳನ್ನು ಪ್ರದರ್ಶಿಸಿದ ಶಾಲಾ ಮಕ್ಕಳು ಪೊಳಲಿ ದೇವಸ್ಥಾನಕ್ಕೆ ಸುತ್ತು ಬಂದು, ಅಡ್ಡೂರಿನತ್ತ ಮರಳಿದರು. ಅಡ್ಡೂರು ಜಂಕ್ಷನ್‌ನಲ್ಲಿ ಜಾಥಾ ಸಭೆ ನಡೆಯಿತು.

ಸಹರಾ ಆಡಳಿತ ಮಂಡಳಿ ಅಧ್ಯಕ್ಷ ಯು. ಪಿ. ಇಬ್ರಾಹೀಂ, ಶಾಲಾ ಸಂಚಾಲಕ ಎ. ಕೆ. ಇಸ್ಮಾಯಿಲ್, ಅಡ್ಡೂರು ಮಸೀದಿ ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ, ಡಾ. ಸಿದ್ದಿಕ್ ಅಡ್ಡೂರು, ಎ. ಕೆ. ಅಶ್ರಫ್, ಎ. ಕೆ. ಹನೀಫ್, ಎ. ಕೆ. ಮೊಹಮ್ಮದ್, ಡಿ. ಎಸ್. ಮೊಹಮ್ಮದ್, ಎಂ. ಎಸ್. ಶೇಖಬ್ಬ, ಹಸನ್ ಬಾವ, ಎ. ಜೆ. ಅಬ್ದುಲ್ ಖಾದರ್, ಟಿ. ಅಬ್ದುಲ್ ಖಾದರ್, ಪುತ್ತು ಮೋನು, ಸಹರಾ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗ, ನೂರಾರು ವಿದ್ಯಾರ್ಥಿಗಳು, ಗಣ್ಯರು, ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ನಾಗರಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಸಹರಾ ಆಂಗ್ಲ ಮಾಧ್ಯಮ ಪಿಯು ಕಾಲೇಜಿನ ಪ್ರಾಂಶುಪಾಲ ಕೇಶವ ಎಚ್. ಸ್ವಾಗತಿಸಿದರು. ಉಪನ್ಯಾಸಕಿ ಮೋಹಿನಿ ಮತ್ತು ಶಿಕ್ಷಕಿ ಅಶ್ವಿನಿ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News