ಉಪ್ಪಿನಂಗಡಿ| ಬ್ಯಾಂಕ್ ಉದ್ಯೋಗಿ ಪುಲುಗುಜ್ಜು ಸುಬ್ರಹ್ಮಣ್ಯಂ ನಾಪತ್ತೆ ಪ್ರಕರಣಕ್ಕೆ ಮಹತ್ವದ ತಿರುವು
ಪುಲುಗುಜ್ಜು ಸುಬ್ರಹ್ಮಣ್ಯಂ
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೆರ್ನೆ ಎಂಬಲ್ಲಿನ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಉಪ ಶಾಖಾ ಪ್ರಬಂಧಕನಾಗಿ ಕಾರ್ಯನಿರ್ವಹಿಸುತ್ತಿದ್ದ ಪುಲುಗುಜ್ಜು ಸುಬ್ರಹ್ಮಣ್ಯಂ (30) ನಾಪತ್ತೆ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದೆ.
ನಾಪತ್ತೆಯಾಗಿರುವ ಬ್ಯಾಂಕ್ ಉದ್ಯೋಗಿ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಂಕಿಗೆ 71.41 ಲಕ್ಷ ರೂ. ವಂಚನೆ ನಡೆಸಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಬಿ.ಸಿ.ರೋಡಿನಲ್ಲಿ ವಿಷ್ಣು ಎಂಬವರ ಜೊತೆ ರೂಮೊಂದರಲ್ಲಿ ವಾಸ್ತವ್ಯ ಹೊಂದಿದ್ದ ಎನ್ನಲಾದ ಸುಬ್ರಹ್ಮಣ್ಯಂ ಡಿ. 17ರಂದು ತನ್ನ ತಮ್ಮನಿಗೆ ಹುಷಾರಿಲ್ಲ ಎಂದು ರೂಮಿಗೆ ಹೋಗುತ್ತೇನೆಂದು ಬ್ಯಾಂಕಿನಲ್ಲಿ ಹೇಳಿ ಹೋದವ ಬಳಿಕ ಪತ್ತೆಯಾಗಿರುವುದಿಲ್ಲವೆಂದೂ, ತನ್ನ ರೂಂನಲ್ಲಿ ಜೊತೆಯಾಗಿ ವಾಸ್ತವ್ಯ ಹೊಂದಿದ್ದ ವಿಷ್ಣುವಿನಲ್ಲಿ ತಾನು ಊರಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದಾನೆನ್ನಲಾಗಿದ್ದು, ಊರಿಗೂ ಹೋಗದೆ ಎಲ್ಲಿಯೂ ಕಾಣಿಸದೆ ನಾಪತ್ತೆ ಯಾಗಿರುವುದಾಗಿ ದೂರಲಾಗಿತ್ತು.
ಈ ಸಂಬಂಧ ಸುಬ್ರಹ್ಮಣ್ಯಂ ಅವರ ಸಹೋದರ ಪುಲುಗುಜ್ಜು ನಾಗ ಫಣೀಂದ್ರ ಅವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಈ ಮಧ್ಯೆ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ಪ್ರಾದೇಶಿಕ ವ್ಯವಸ್ಥಾಪಕ ಸಿ.ವಿ.ಎಸ್. ಚಂದ್ರಶೇಖರ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಅದರಲ್ಲಿ 2023ರ ಸೆಪ್ಟೆಂಬರ್ ತಿಂಗಳ 4 ರಿಂದ 2025 ರ ಡಿಸೆಂಬರ್ ತಿಂಗಳ 19 ರವರೆಗೆ ಪೆರ್ನೆ ಶಾಖೆಯಲ್ಲಿ ಉಪ ಶಾಖಾ ಪ್ರಬಂಧಕರಾಗಿ ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯಂ ಸದ್ರಿ ಬ್ರಾಂಚಿನ ಎ.ಟಿ.ಎಂ. ನ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದು, ದಿನಾಂಕ 06-02-2024 ರಿಂದ ದಿನಾಂಕ 16-12-2025 ರ ಅವಧಿಯಲ್ಲಿ ಆರೋಪಿಯು ಅದೇ ಬ್ಯಾಂಕಿನ ಎ.ಟಿ.ಎಂ ಮಿಷನ್ ಗೆ ಪ್ರತಿ ದಿನ ನಿಗದಿ ಪಡಿಸಿದ ಹಣವನ್ನು ಜಮಾ ಮಾಡದೇ ಕಡಿಮೆ ನಗದು ಹಣವನ್ನು ಜಮಾ ಮಾಡಿ ಸತತವಾಗಿ ಬ್ಯಾಂಕಿನ ಹಣವನ್ನು ದುರುಪಯೋಗಪಡಿಸಿಕೊಂಡು ಒಟ್ಟು ರೂ 70,86,000 ರೂ. ಹಣವನ್ನು ವಂಚನೆ ಮಾಡಿರುತ್ತಾರೆಂದೂ ಹಾಗೂ ಸೇಫ್ ಲಾಕರ್ ನ್ನು ಪರಿಶೀಲಿಸಿದಾಗ 4.400 ಗ್ರಾಂ ತೂಕದ ರೂ 55,000/- ಅಂದಾಜು ಮೌಲ್ಯದ 1 ಪ್ಯಾಕೆಟ್ ಚಿನ್ನವನ್ನು ಲಪಟಾಯಿಸಿ ವಂಚಿಸಿರುತ್ತಾರೆಂದೂ ಆರೋಪಿಸಿದ್ದಾರೆ.
ಆರೋಪಿಯು ದುರುಪಯೋಗ ಪಡಿಸಿದ ಹಣದ ವ್ಯವಹಾರಗಳು ಬೆಳಕಿಗೆ ಬಂದಿರುವುದು ತಿಳಿದು ಬಂದಾಗ ದಿನಾಂಕ 17-12-2025 ರಂದು ಅಸೌಖ್ಯದ ಕಾರಣ ಹೇಳಿ ಕಚೇರಿಯಿಂದ ನಿರ್ಗಮಿಸಿದವರು ಬಳಿಕ ನಾಪತ್ತೆಯಾಗಿದ್ದಾರೆಂದೂ, ಈ ಮೂಲಕ ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿ ಒಟ್ಟು ಮೌಲ್ಯ ರೂ 71,41,000 ರೂ. ವಂಚನೆ ಮಾಡಿರುವುದಾಗಿ ದೂರಲಾಗಿದೆ.
ದೂರನ್ನು ಸ್ವೀಕರಿಸಿದ ಉಪ್ಪಿನಂಗಡಿ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.