ಬೆಳ್ತಂಗಡಿ | ಚಿನ್ನಯ್ಯನಿಗೆ ರಕ್ಷಣೆ ನೀಡಲು ಆಗ್ರಹಿಸಿ ನ್ಯಾಯಾಲಯಕ್ಕೆ ಅಪೀಲು
ಬೆಳ್ತಂಗಡಿ, ಡಿ.6: ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಜೀವ ಬೆದರಿಕೆಯಿದ್ದು, ಸೂಕ್ತ ರಕ್ಷಣೆ ನೀಡಬೇಕು ಹಾಗೂ ಆತನಿಗೆ ವಿಧಿಸಿರುವ ಹತ್ತನೇ ನಿಬಂಧನೆಯನ್ನು ಸಡಿಲಗೊಳಿಸಬೇಕು ಎಂದು ಚಿನ್ನಯ್ಯನ ಪರ ವಕೀಲರು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದಾರೆ.
ಸಾಕ್ಷಿ ಸಂರಕ್ಷಣೆ ಕಾಯ್ದೆಯಲ್ಲಿ ರಕ್ಷಣೆ ಪಡೆದಿದ್ದ ಚಿನ್ನಯ್ಯ ಆರೋಪಿಯಾದ ಬಳಿಕ ಆ ರಕ್ಷಣೆಯನ್ನು ಕಳೆದುಕೊಂಡಿದ್ದ. ಇದೀಗ ಸಕ್ಷಮ ಪ್ರಾಧಿಕಾರದ ಮುಂದೆಯೂ ನ್ಯಾಯವಾದಿಗಳು ಚಿನ್ನಯ್ಯನಿಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಆತನಿಗೆ ಜೀವ ಭಯವಿದ್ದು, ಸೂಕ್ತ ರಕ್ಷಣೆ ನೀಡುವಂತೆ ಬೆಳ್ತಂಗಡಿ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಲಾಗಿದೆ.
ಅದೇ ರೀತಿ ಚಿನ್ನಯ್ಯ ಜಾಮೀನಿನ ಮೇಲೆ ಹೊರ ಬಂದರೆ ಆತ ಸ್ಥಳೀಯ ಠಾಣೆಗೆ ಬಂದು ಸಹಿ ಹಾಕುವಂತೆ ನಿಬಂಧನೆ ವಿಧಿಸಲಾಗಿದ್ದು, ಈ ನಿಬಂಧನೆಯನ್ನು ಸಡಿಲಿಸುವಂತೆಯೂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ.
ಚಿನ್ನಯ್ಯ ಜಮೀನು ಲಭಿಸಿದರೆ ಆತನ ಊರಾದ ಮಂಡ್ಯದಲ್ಲಿ ವಾಸಿಸಲು ನಿರ್ಧರಿಸಿದ್ದಾನೆ. ಈ ಹಿನ್ನಲೆಯಲ್ಲಿ ಠಾಣೆಗೆ ಹಾಜರಾತಿಗೆ ವಿನಾಯಿತಿ ನೀಡುವಂತೆಯೂ ವಿನಂತಿಸಲಾಗಿದೆ. ಚಿನ್ನಯ್ಯ ರಕ್ಷಣೆ ಕೋರಿರುವ ಬಗ್ಗೆ, ರಕ್ಷಣೆ ನೀಡುವ ಬಗ್ಗೆ ಬೆಳ್ತಂಗಡಿ ವೃತ್ತ ನಿರೀಕ್ಷಕರಿಂದ ಹಾಗೂ ಇತರ ವಿಚಾರಗಳ ಬಗ್ಗೆ ಎಸ್ಐಟಿ ಅಧಿಕಾರಿಗಳಿಂದ ನ್ಯಾಯಾಲಯ ವರದಿ ಕೋರಿದೆ.
ಸೆಕ್ಷನ್ 215ರ ಕುರಿತಾದ ವರದಿಯ ಬಗ್ಗೆ ವಾದ ಮಂಡಿಸಲು ವಕೀಲರು ಸಮಯಾವಕಾಶ ಕೋರಿದ್ದು, ಒಟ್ಟು ಪ್ರಕರಣದ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಲಾಗಿದೆ.