Belthangady | ಧರ್ಮಸ್ಥಳ ಪ್ರಕರಣ; ಎಸ್ಐಟಿಯಿಂದ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಅಧಿಕಾರಿಗಳ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಆರು ಮಂದಿ ಆರೋಪಿಗಳ ವಿರುದ್ಧ ನ.20ರಂದು 'ಸುಳ್ಳು ಸಾಕ್ಷಿ' ನೀಡಿರುವ ಬಗ್ಗೆ ತನಿಖೆಯಿಂದ ಕಂಡು ಬಂದ ಮಾಹಿತಿಗಳ ಬಗ್ಗೆ ವರದಿಯನ್ನು ಸಲ್ಲಿಸಿದ್ದಾರೆ.
ಎಸ್.ಐ.ಟಿ ಅಧಿಕಾರಿಗಳು ಪ್ರಕರಣದಲ್ಲಿ ಜೈಲಿನಲ್ಲಿರುವ ಚಿನ್ನಯ್ಯ ಸೇರಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡ, ಸುಜಾತ ಭಟ್ ಸೇರಿ ಒಟ್ಟು ಆರು ಮಂದಿ ಪ್ರಕರಣದಲ್ಲಿ ಭಾಗಿಯಾದವರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ. 'ಸುಳ್ಳು ಸಾಕ್ಷಿ' ನೀಡಿರುವ ಬಗ್ಗೆ ವರದಿಯನ್ನು 215 ಅಡಿಯಲ್ಲಿ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಎಚ್.ಟಿ ಮುಂದೆ ಇಂದು ಮಧ್ಯಾಹ್ನ 3:15 ಕ್ಕೆ ಗಂಟೆಗೆ ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತು ತಂಡದವರು ಸಲ್ಲಿಕೆ ಮಾಡಿದ್ದಾರೆ.
ಎಸ್ಐಟಿ ವರದಿಯಲ್ಲಿ ಸುಮಾರು 3,923 ಪುಟ ಇದೆ. ಐದು ಮಂದಿ ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂಬುವುದಾಗಿಯೂ ವರದಿಯಲ್ಲಿ ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಿದ ವರದಿಯಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ.
ಸಲ್ಲಿಕೆಯಾಗಿರುವ ವರದಿಯ ಬಗ್ಗೆ ನ್ಯಾಯಾಲಯ ಪರಿಶೀಲಿಸಿ ಇದರ ಆಧಾರದಲ್ಲಿ ಮುಂದಿನ ತನಿಖೆ ಬಗ್ಗೆ ನ್ಯಾಯಾಲಯ ಸೂಚನೆ ನೀಡುವಂತೆ ವರದಿಯಲ್ಲಿ ಕೇಳಿಕೊಳ್ಳಲಾಗಿರುವುದಾಗಿ ತಿಳಿದು ಬಂದಿದೆ. ಒಟ್ಟು ಪ್ರಕರಣದ ತನಿಖೆ ಮುಗಿಸಿದ ಬಳಿಕ ಮುಂದಿನ ದಿನಗಳಲ್ಲಿ ಅಂತಿಮ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.