×
Ad

ಕೊರಗ ಸಮುದಾಯದ ಮೀಸಲು ಮನೆ ನಿವೇಶನ ಹಸ್ತಾಂತರಕ್ಕೆ ಒತ್ತಾಯಿಸಿ ಫಲಾನುಭವಿಗಳಿಂದ 12 ತಾಸುಗಳ ಸತ್ಯಾಗ್ರಹ

Update: 2026-01-09 15:16 IST

ಮಂಗಳೂರು, ಜ.9: ಕುಡುಪು ಗ್ರಾಮದ ಮಂಗಳಜ್ಯೋತಿಯಲ್ಲಿ ಕೊರಗ ಸಮುದಾಯದ ಮೀಸಲು ಮನೆ ನಿವೇಶನವನ್ನು ಹಸ್ತಾಂತರಿಸಲು ಆಗ್ರಹಿಸಿ ಸಮುದಾಯದ ಫಲಾನುಭವಿಗಳು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಮನಪಾ ಎದುರು ಶುಕ್ರವಾರ 12 ತಾಸುಗಳ ನಿರಂತರ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿರುವ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿದರು.

ಮೂಲ ನಿವಾಸಿಗಳಾಗಿರುವ ಕೊರಗ ಕುಟುಂಬಗಳು ತಮ್ಮ ಹಕ್ಕನ್ನು ಕೇಳಲು ಈ ರೀತಿ ಪ್ರತಿಭಟನೆ ನಡೆಸುವ ದಯನೀಯ ಸ್ಥಿತಿ ಅಭಿವೃದ್ಧಿಯ ಪಥದಲ್ಲಿರುವ ಮಂಗಳೂರು ನಗರಕ್ಕೆ ಕಳಂಕ ಎಂದರು.

ಕೊರಗ ತನಿಯ ಇಲ್ಲಿನ ಅಸ್ಥಿತೆ. ಕಾಸರಗೋಡು, ದ.ಕ., ಉಡುಪಿ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಕೊರಗರ ಕುಟುಂಬಗಳು ಅಂದಾಜು 3000. ಮಂಗಳೂರು ನಗರದಲ್ಲಿ ಸುಮಾರು 200 ಕುಟುಂಬಗಳಿವೆ ಎಂದು ಅಂದಾಜಿಸಲಾಗಿದೆ. ಅಳಿವಿನಂಚಿನಲ್ಲಿರುವ ಈ ಕುಟುಂಬಗಳಿಗೆ ಕನಿಷ್ಟ ಎರಡೂವರೆ ಎಕರೆ ಜಮೀನು ನೀಡಿ, ಅವರ ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಬೇಕೆಂಬುದನ್ನು ಸರಕಾರವೇ ನೇಮಕ ಮಾಡಿದ್ದ ಮುಹಮ್ಮದ್ ಪೀರ್ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸರಕಾರ ಇನ್ನೂ ಗಮನ ಹರಿಸಿಲ್ಲ. ಇದರ ನಡುವೆ ಕುಡುಪು ಗ್ರಾಮದ ಮಂಗಳ ಜ್ಯೋತಿಯಲ್ಲಿ ವಾಸಿಸುತ್ತಿದ್ದ 14 ಕೊರಗ ಕುಟುಂಬಗಳಿಗೆ ಮನೆ ಮತ್ತು ಕೃಷಿ ಕಾರ್ಯ ನಡೆಸಲು ಕುದ್ಮುಲ್ ರಂಗರಾವ್ ಶಿಷ್ಯ ವೆಂಕೋಜಿ ರಾವ್ 1930ರಲ್ಲಿ ನೀಡಿದ್ದ 8.94 ಎಕರೆ ಭೂಮಿಯನ್ನು ದಾನ ನೀಡಿದ್ದರು. ಕೆಲ ವರ್ಷಗಳ ಬಳಿಕ ಆ ಭೂಮಿಯ ಜವಾಬ್ದಾರಿ ಹೊಂದಿದ್ದ ಡಿಸಿಎಂ ಟ್ರಸ್ಟ್ ಅನೂರ್ಜಿತಗೊಂಡ ಹಿನ್ನೆಲೆಯಲ್ಲಿ ಫಲಾನುಭವಿಗಳ ಭೂಮಿಯ ಆರ್‌ಟಿಸಿ ಪಾಲಿಕೆ ಹೆಸರಿಗೆ ಬದಲಾಗಿತ್ತು. ಆ ಭೂಮಿ ತಮಗೆ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸಿದ ಕುಟುಂಬಗಳಿಗೆ ಅಂತಿಮವಾಗಿ 2018ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಸ್ವಂತ ಮನೆ ನಿವೇಶನ ರಹಿತ ಕೊರಗ ಕುಟಂಬಗಳಿಗೆ ವಿತರಿಸಲು ಪರಿಷತ್ತಿನಲ್ಲಿ ನಿರ್ಣಯ ಕೈಗೊಂಡಿತ್ತು. ಆದರೆ ಪರಿಸರ ಇಲಾಖೆ, ಅರಣ್ಯ ಇಲಾಖೆ ಮತ್ತು ಡಂಪಿಂಗ್ ಯಾರ್ಡ್ ಕಾರಣ ನೀಡಿ ಭೂಮಿ ವಿತರಣೆ ಆಗಿಲ್ಲ. ಇದೀಗ ಈ ಫಲಾನುಭವಿಗಳು ಇದಕ್ಕಾಗಿ 13 ಪ್ರತಿಭಟನೆಗಳನ್ನು ನಡೆಸಿದ್ದಾರೆ. ಇನ್ನೂ ವಿತರಣೆ ಆಗದಿರುವುದು ದುರಂತ ಎಂದವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತಕ್ಷಣ ಕ್ರಮ ವಹಿಸಬೇಕು. ಮುಂದಿನ ಪ್ರತಿಭಟನೆಗೆ ಅವಕಾಶ ನೀಡದೆ ಭೂಮಿಯನ್ನು ಫಲಾನುಭವಿಗಳಿಗೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡ ಯೋಗೀಶ್ ಜಪ್ಪಿನಮೊಗರು, 2022ರಿಂದ ಸಮಿತಿ ನೇತೃತವಲ್ಲಿ ಹಲವಾರು ರೂಪದ ಹೋರಟ ನಡೆಸಲಾಗಿದೆ. ಇದರ ಫಲವಾಗಿ ಮುಡಾದಿಂದ ಮೂಲ ಸೌಕರ್ಯಯುಕ್ತ ನಕ್ಷೆ ಅಂಗೀಕಾರ ಪಡೆಯಲಾಗಿದೆ. 2.75 ಕೋಟಿರೂ, ಗಳ ಟೆಂಡರ್ ಅಂಗೀಕೃತಗೊಂಡಿದ್ದರೂ ಆಮೆ ಗತಿಯಲ್ಲಿ ಕೆಲಸ ಸಾಗುತ್ತಿದೆ. ಕಳೆದ ನವೆಂಬರ್ ತಿಂಗಳಲ್ಲಿ ಪ್ರತಿಭಟನೆ ನಡೆಸಿದ ವೇಳೆ ನಿವೇಶನ ವಿತರಣೆ ಭರವಸೆ ನೀಡಲಾಗಿತ್ತಾದರೂ ಈಡೇರದ ಕಾರಣ ಇದೀಗ ನಿರಂತರ ಹೋರಾಟಕ್ಕೆ ತೀರ್ಮಾನಿಸಲಾಗಿದೆ ಎಂದರು.

ಸಮಿತಿಯ ಮಂಗಳಜ್ಯೋತಿ ಘಟಕದ ಅಧ್ಯಕ್ಷಕರಿಯ ಕೆ., ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಅಶೋಕ್ ಶ್ರೀಯಾನ್ ಹಾಗೂ ಫಲಾನುಭವಿಗಳು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News