ಬಿಷಪ್ ಹೌಸ್ನಲ್ಲಿ ವಾರ್ಷಿಕ ‘ಬಂಧುತ್ವ’ ಕ್ರಿಸ್ಮಸ್ ಸಂಭ್ರಮಾಚರಣೆ
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ‘ಬಂಧುತ್ವ’ ಕ್ರಿಸ್ಮಸ್ ಸಂದೇಶ
ಮಂಗಳೂರು: ಧಾರ್ಮಿಕ ಮತ್ತು ಸಾಮಾಜಿಕ ಭಿನ್ನತೆಗಳನ್ನು ಮೀರಿ ಭಾತೃತ್ವವನ್ನು ಬೆಳೆಸುವ ನಿಟ್ಟಿನಲ್ಲಿ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ಡಿಸೆಂಬರ್ 26 ರಂದು ಕೊಡಿಯಾಲ್ಬೈಲ್ನ ಬಿಷಪ್ ಹೌಸ್ನಲ್ಲಿ ವಾರ್ಷಿಕ ‘ಬಂಧುತ್ವ’ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ಆಯೋಜಿಸಿಸಲಾಗಿತ್ತು.
ಜಾಗತಿಕ ಅಶಾಂತಿಗೆ ಪ್ರಬಲ ಪ್ರತಿಕ್ರಿಯೆಯಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು, ನಾಗರಿಕ ಆಡಳಿತಾಧಿಕಾರಿಗಳು ಮತ್ತು ವಿವಿಧ ಧರ್ಮಗಳ ಮುಖಂಡರು ಶಾಂತಿ, ಘನತೆ ಮತ್ತು ಪರಸ್ಪರ ಗೌರವದ ಹಾದಿಯಲ್ಲಿ ಒಂದಾದರು.
ಸಂದೇಶ ನೀಡಿದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸ್ವಾತಿಸಿ ಸಂದೇಶ ನೀಡಿ ‘‘ಕ್ರಿಸ್ಮಸ್ ಎನ್ನುವುದು ದೇವರು ಮಗುವಿನ ರೂಪದಲ್ಲಿ ತಾಯಿ-ತಂದೆಯೊಂದಿಗೆ ಮನುಕುಲಕ್ಕೆ ದರ್ಶನ ನೀಡಿದ ಕ್ಷಣವಾಗಿದ್ದು, ಇದು ಸಂಬಂಧಗಳಲ್ಲಿ ಬೇರೂರಿರುವ ‘ಮಾನವೀಯತೆಯ ನಿಜವಾದ ಚಿತ್ರಣವಾಗಿದೆ’’ ಎಂದರು.
ಜಗತ್ತಿನ ಪ್ರಮುಖ ಧರ್ಮಗಳಾದ ಹಿಂದೂ, ಇಸ್ಲಾಂ, ಕ್ರೈಸ್ತ, ಜೈನ, ಬೌದ್ಧ ಮತ್ತು ಸಿಖ್ ಧರ್ಮಗಳನ್ನು ಕೈಯ ಐದು ಬೆರಳುಗಳಿಗೆ ಹೋಲಿಸಿದ ಬಿಷಪ್ ಅವರು ಪ್ರತಿಯೊಂದು ಧರ್ಮವೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ, ಆದರೆ ಮನುಕುಲದ ಹಿತದೃಷ್ಟಿಯಿಂದ ಇವೆಲ್ಲವೂ ಒಟ್ಟಾಗಿ ಕೆಲಸ ಮಾಡಬೇಕು.
ದುರ್ಬಲ ಬೆರಳಿಗೆ ನಾವು ಉಂಗುರ ತೊಡಿಸಿ ಅಲಂಕರಿಸುವಂತೆ, ಸಮಾಜದ ಅಂಚಿನಲ್ಲಿರುವ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ನಾವು ಪ್ರೀತಿಯಿಂದ ಗೌರವಿಸಬೇಕು. ಕೋಮು ಗಡಿಗಳನ್ನು ದಾಟಿ ಪರಸ್ಪರ ಸ್ಪಂದಿಸುವುದು ಮಾತ್ರ ಶಾಶ್ವತ ಶಾಂತಿಗೆ ದಾರಿ ಎಂದು ಎಚ್ಚರಿಸಿದರು.
ದ್ವೇಷದ ‘ವಿಷ’ವನ್ನು ತಿರಸ್ಕರಿಸಿ: ಸಾಮಾಜಿಕ ಸಾಮರಸ್ಯಕ್ಕೆ ಕರೆ ಮುಖ್ಯ ಅತಿಥಿಗಳಾಗಿದ್ದ ಆದಾಯ ತೆರಿಗೆ ಇಲಾಖೆಯ ಕಮಿಷನರ್ (ಅಪಿಲ್ಸ್) ಎಸ್. ರಂಗ ರಾಜನ್ ಮಾತನಾಡಿ, ಕ್ರಿಸ್ಮಸ್ ಎಂಬುದು ಕರುಣೆ ಮತ್ತು ಮಾನವ ಒಗ್ಗಟ್ಟಿನ ಜಾಗತಿಕ ಪಾಠವಾಗಿದೆ ಎಂದರು.
ಮಂಗಳೂರು ನಗರವು ಶಾಂತಿಯುತ ಸಹಬಾಳ್ವೆಗೆ ಐತಿಹಾಸಿಕ ಮಾದರಿಯಾಗಿದ್ದು, ಇಲ್ಲಿನ ವೈವಿಧ್ಯತೆಯೇ ಶಕ್ತಿಯಾಗಿದೆ ಎಂದು ಶ್ಲಾಘಿಸಿದರು.
ದ್ವೇಷದ ಸಂದೇಶಗಳನ್ನು ಹರಡುವುದನ್ನು ನಿಲ್ಲಿಸಿ, ಮಕ್ಕಳಲ್ಲಿ ಭಾತೃತ್ವದ ಕಥೆಗಳನ್ನು ಬಿತ್ತಬೇಕು ಎಂದು ಅವರು ಮನವಿ ಮಾಡಿದರು.
ಸನ್ಮಾನ ಮತ್ತು ಗೌರವಾರ್ಪಣೆ ಕ್ರೀಡಾ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅವರ ಪೋಷಕರಾದ ಐವನ್ ರೋಡ್ರಿಗಸ್ ಮತ್ತು ಲವಿತಾ ರೋಡ್ರಿಗಸ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿ ಶ್ರೀ ಎಸ್. ರಂಗ ರಾಜನ್ ಅವರನ್ನೂ ಬಿಷಪ್ ಅವರು ಗೌರವಿಸಿದರು.
ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಕೇಕ್ ಕತ್ತರಿಸುವ ಮೂಲಕ ಸಂತೋಷವನ್ನು ಹಂಚಿಕೊಳ್ಳಲಾಯಿತು. ಸಿ.ಎಸ್.ಐ., ಬಿಷಪ್ ಹೇಮಚಂದ್ರ ಕುಮಾರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಶಾಸಕ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ , ಮಂಜೇಶ್ವರ ಶಾಸಕ ಶಾಸಕ ಉP್ರಉ್ಹ ಅಶ್ರಫ್ , ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಐಜಿಪಿ ಅಮಿತ್ ಸಿಂಗ್, ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಎಲ್. ಧರ್ಮ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಕುಳೂರು ಚರ್ಚ್ ಗಾಯನ ತಂಡದ ಕ್ರಿಸ್ಮಸ್ ಗೀತೆಗಳೊಂದಿಗೆ ಆರಂಭವಾಯಿತು. ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ರಿಜಿಸ್ಟ್ರಾರ್ ರೆ. ಸಂದೀಪ್ ಥಿಯೋಫಿಲ್ ಅವರು ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು.
ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂದನೀಯ ಡಾ. ಜೆ. ಬಿ. ಸಲ್ಡಾನ್ಹಾ ವಂದಿಸಿದರು. ರಾಯ್ ಕ್ಯಾಸ್ಟೆಲಿನೊ ಕಾರ್ಯಕ್ರಮ ಸಂಯೋಜಿಸಿದರು. ಉಷಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಫಾದರ್ ರೂಪೇಶ್ ಮಾಡ್ತ ಅವರು ಕ್ರಿಸ್ಮಸ್ ಆಟಗಳನ್ನು ನಡೆಸಿಕೊಟ್ಟರು.