ದಕ್ಷಿಣ ಕನ್ನಡದ ಪೊಲೀಸರು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ: ಸುಜಾತ ಭಟ್ ಆರೋಪ
ಸುಜಾತ ಭಟ್
ಮಂಗಳೂರು : 'ಧರ್ಮಸ್ಥಳ ದೂರು' ಸಾಕ್ಷಿದಾರ ಪರಾರಿಯಾಗುತ್ತಾನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬುಧವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ತೀವ್ರ ಆಘಾತಕಾರಿಯಾಗಿದೆ ಎಂದು ಅನನ್ಯ ಭಟ್ ಅವರ ತಾಯಿ ಸುಜಾತ ಭಟ್ ತಿಳಿಸಿದ್ದಾರೆ.
ಅನನ್ಯ ಭಟ್ 2003 ರಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎಂದು ಹೇಳಲಾದ ವೈದ್ಯಕೀಯ ವಿದ್ಯಾರ್ಥಿನಿ.
ವಕೀಲ ಮಂಜುನಾಥ್ ಎನ್ ಅವರ ಮೂಲಕ ಈ ಕುರಿತು ಪತ್ರಿಕಾ ಪ್ರಕಟನೆಯನ್ನು ನೀಡಿರುವ ಸುಜಾತ ಭಟ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ನಿನ್ನೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟನೆಯು ತೀವ್ರ ಆಘಾತಕಾರಿಯಾಗಿದೆ. ಸ್ಥಳೀಯ ಗುಪ್ತಚರ ಮಾಹಿತಿ ಪ್ರಕಾರ, ಈಗ ಹೊರ ಬಂದಿರುವ ಸಾಕ್ಷಿಯು ಸಾಮೂಹಿಕವಾಗಿ ಹೂತುಹಾಕಿರುವ ಅಸ್ಥಿಪಂಜರದ ಅವಶೇಷಗಳನ್ನು ಅಗೆದು ತೆಗೆದ ನಂತರ ಪರಾರಿಯಾಗುತ್ತಾನೆ ಎಂದು ಪೊಲೀಸರು ಹೇಳಿದ್ದಾರೆ. ಧರ್ಮಸ್ಥಳದೊಳಗೆ ಮೃತದೇಹವನ್ನು ವಿವಿಧ ಸ್ಥಳಗಳಲ್ಲಿ ಹೂತು ಹಾಕಲಾಗಿದೆ ಮತ್ತು ಆ ಮೃತದೇಹಗಳನ್ನು ಹೂತು ಹಾಕಿರುವ ನಿಖರವಾದ ಸ್ಥಳಗಳು ಈ ಸಾಕ್ಷಿ ದೂರುದಾರನಿಗೆ ತಿಳಿದಿದೆ. ಅವಕಾಶ ನೀಡಿದರೆ ಸಾಕ್ಷಿಯು ಆ ಮೃತದೇಹಗಳ ಪಳೆಯುಳಿಕೆ ಗಳನ್ನು ಹೊರತೆಗೆಯಬಹುದು ಎಂಬುದನ್ನು ಪೊಲೀಸರ ಈ ಹೇಳಿಕೆಯು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
ಜುಲೈ 3ರಂದು ದೂರು ಸಲ್ಲಿಸಿದರೂ, ಜುಲೈ 16 ರವರೆಗೆ ಪೊಲೀಸರು ಸಾಕ್ಷಿ ದೂರುದಾರನನ್ನು ಕರೆತಂದು ಹೂತು ಹಾಕಿರುವ ಸ್ಥಳದಲ್ಲಿ ಅಗೆಯದಿರುವುದು ಅಚ್ಚರಿ ತಂದಿದೆ. ಈ ರೀತಿ ವಿಳಂಬ ಮಾಡುವ ಮೂಲಕ ಪೊಲೀಸರು ಸ್ವತಃ ಆರೋಪಿಗಳಿಗೆ ಮೃತದೇಹಗಳನ್ನು ಪತ್ತೆಹಚ್ಚಲು ಮತ್ತು ಅವಶೇಷಗಳನ್ನು ಹೊರತೆಗೆಯಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆಯೇ ಎಂಬ ಶಂಕೆ ಮೂಡುತ್ತದೆ. ದಕ್ಷಿಣ ಕನ್ನಡ ಪೊಲೀಸರು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸುಜಾತ ಭಟ್ ಹಾಗು ಅವರ ವಕೀಲ ಮಂಜುನಾಥ್ ನೇರ ಆರೋಪ ಮಾಡಿದ್ದಾರೆ.
ಸಾಕ್ಷಿಯು ಪರಾರಿಯಾಗಲು ಉದ್ದೇಶಿಸಿದ್ದರೆ ಮೃತದೇಹಗಳ ಅವಶೇಷಗಳನ್ನು ಹೊರ ತೆಗೆಯುತ್ತೇನೆ ಎಂದು ಹೇಳುವ ಅವಶ್ಯಕತೆ ಇರಲಿಲ್ಲ. ಅವನು ಇದ್ದ ಸ್ಥಳದಲ್ಲಿಯೇ ಇರಬಹುದಿತ್ತು. ಕರ್ನಾಟಕ ಸರಕಾರವು 'ಧರ್ಮಸ್ಥಳ' ದೂರಿನ ತನಿಖೆಗೆ ತಕ್ಷಣವೇ ವಿಶೇಷ ತನಿಖಾ ತಂಡ (ಎಸ್ಐಟಿ) ವನ್ನು ರಚಿಸಬೇಕು. ಈಗಿನ ತನಿಖಾಧಿಕಾರಿಗಳನ್ನು ಪ್ರಕರಣದ ತನಿಖೆಯಿಂದ ಸಂಪೂರ್ಣವಾಗಿ ಹೊರಗಿಡಬೇಕು ಎಂದು ಅವರು ವಿನಂತಿಸಿದ್ದಾರೆ.
ಈ ಎರಡು ವಾರಗಳಲ್ಲಿ, ಪ್ರಸ್ತುತ ತನಿಖಾ ಅಧಿಕಾರಿಗಳು ಆರೋಪಿಗಳಿಗೆ ಎಷ್ಟರ ಮಟ್ಟಿಗೆ ಸಹಾಯ ಮಾಡಿದ್ದಾರೆ ಎಂದು ಪ್ರಶ್ನಿಸಬೇಕಾದ ಪರಿಸ್ಥಿತಿ ಎದುರಾಗಬಾರದು ಎಂದು ಸುಜಾತ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.