ಧರ್ಮಸ್ಥಳ ಪ್ರಕರಣ | ಎಸ್ಐಟಿ ವಿಚಾರಣೆಗೆ ಆರು ಮಂದಿ ಹಾಜರು
ಬೆಳ್ತಂಗಡಿ: ತಲೆಬುರುಡೆ ಪ್ರಕರಣದ ತನಿಖೆಗಾಗಿ ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್ ಮತ್ತು ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ ಹಾಗೂ ಪ್ರದೀಪ್ ಎಸ್ಐಟಿ ವಿಚಾರಣೆಗಾಗಿ ಮಂಗಳವಾರ ಬೆಳಗ್ಗೆ ಹಾಜರಾಗಿದ್ದಾರೆ.
ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಈ ಆರು ಮಂದಿಯನ್ನು ಆರನೇ ದಿನದ ವಿಚಾರಣೆಗೆ ಎಸ್ಐಟಿ ವಿಚಾರಣೆಗೆ ಕರೆಸಿದೆ. ಸೋಮವಾರ ಹಿಂಬದಿ ದಾರಿ ಹಿಡಿದಿದ್ದ ಜಯಂತ್ ಇಂದು ಮುಂಭಾಗದ ಹಾದಿಯಿಂದಲೇ ಬಂದಿದ್ದಾರೆ. ಆದರೆ ಮಾಧ್ಯಮದೆದುರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇವರೊಂದಿಗೆ ಸಂಬಂಧಿಯಾಗಿರುವ ಸಿಂಧೂದೇವಿ ಕೂಡ ಎಸ್ಐಟಿ ಕಚೇರಿ ವರೆಗೆ ಬಂದು ಬಳಿಕ ಹಿಂದಿರುಗಿದ್ದಾರೆ.
ಇನ್ನೂ ಕೇರಳದ ಯೂಟ್ಯೂಬರ್ ಮನಾಫ್ ಹಾಗೂ ಯೂಟ್ಯೂಬರ್ ಅಭಿಷೇಕ್ ಕೂಡ ವಿಚಾರಣೆ ಹಾಜರಾಗಿದ್ದಾರೆ. ಮನಾಫ್ ತಮ್ಮ ರಕ್ಷಣೆಗಾಗಿ ಕೇರಳದಿಂದ ಜನ ಕರೆದುಕೊಂಡು ಬಂದಿರುವುದಾಗಿ ಕೆಲ ಮಾಧ್ಯಮಗಳು ಪ್ರಸಾರ ಮಾಡಿವೆ ಎಂಬ ವಿಚಾರವಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.
"ನಾನು ಯಾರನ್ನೂ ಕರೆತಂದಿಲ್ಲ, ನನಗೆ ಯಾವ ಭಯವಿಲ್ಲ, ನಾನು ಸತ್ಯದ ಪರವಾಗಿ ಹೋರಾಡುತ್ತಿದ್ದೇನೆ. ಎಸ್ಐಟಿ ಎಲ್ಲ ವಿಚಾರಣೆಗೂ ನಾನು ಸ್ಪಂದಿಸುತ್ತೇನೆ'' ಎಂದು ಹೇಳಿದ್ದಾರೆ.