×
Ad

ಮಂಗಳೂರು| ಕೆಡಿಪಿ ಸಭೆಯಲ್ಲೂ ಪ್ರತಿಧ್ವನಿಸಿದ ಶಿಷ್ಟಾಚಾರ ವಿವಾದ; ದಿನೇಶ್ ಗುಂಡೂರಾವ್ - ವೇದವ್ಯಾಸ ಕಾಮತ್ ನಡುವೆ ವಾಗ್ವಾದ

Update: 2025-02-17 19:55 IST

ಮಂಗಳೂರು: ಮಂಗಳಾದೇವಿಯ ಜಿಲ್ಲಾ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆಯ ಉದ್ಘಾಟನೆ ಕುರಿತಂತೆ ಎದ್ದಿರುವ ಶಿಷ್ಟಾಚಾರದ ವಿವಾದ ಮತ್ತೆ ಜಿಲ್ಲಾ ಕೆಡಿಪಿ ಸಭೆಯಲ್ಲಿಯೂ ಮುಂದುವರಿದು ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು.

ಯಾರೋ ಬಂದು ಆಮಂತ್ರಣ ಕೊಟ್ಟಿದ್ದಾರೆ, ಮೊದಲ ಉದ್ಘಾಟನೆ ಆಮಂತ್ರಣ ಪತ್ರಿಕೆಯಲ್ಲಿ ನಿಮ್ಮ, ಸ್ಪೀಕರ್ ಹಾಗೂ ಎಲ್ಲರ ಫೋಟೊ ಇತ್ತು, ಹಾಗಾಗಿ ಅದು ಅಧಿಕೃತ ಅಂತ ನಾನು ಉದ್ಘಾಟನೆಗೆ ಹೋಗಿದ್ದೆ, ಆದರೆ ಎರಡನೇ ಕಾರ್ಯಕ್ರಮದ ಬಗ್ಗೆ ನನಗೆ ಅಧಿಕೃತ ಆಮಂತ್ರಣ ನೀಡಿಲ್ಲ. ಅ ಕಾರ್ಯಕ್ರಮದಲ್ಲಿ ನೀವು ನನ್ನ ವಿರುದ್ದ ಮಾತನಾಡಿದ್ದೀರಿ ಎಂದು ವೇದವ್ಯಾಸ ಕಾಮತ್ ದೂರಿದರು.

ಮೊದಲ ಬಾರಿ ಆಹ್ವಾನ ಪತ್ರಿಕೆ ಕೊಟ್ಟವರು ಯಾರು ? ಎಂದು ಪಾಲಿಕೆ ಆಯುಕ್ತರಲ್ಲಿ ಸಚಿವರು ವಿಚಾರಿಸಿದರು. ಮೊದಲ ಉದ್ಘಾಟನೆ ಆಮಂತ್ರಣ ಪತ್ರಿಕೆ ನಾವು ಮಾಡಿಲ್ಲ. ನಾವು ಅಧಿಕೃತ ಆಹ್ವಾನ ಪತ್ರವನ್ನು ಶಾಸಕರಿಗೆ ತಲುಪಿಸಿದ್ದೇವೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

ಮೂರು ಮೂರು ಕಟ್ಟಡ ಉದ್ಘಾಟನೆ ಇದ್ದರೂ ನನಗೆ ಮಾಹಿತಿ ಕೊಟ್ಟಿಲ್ಲ. ನನ್ನಲ್ಲಿ ದಿನಾಂಕ ಕೇಳಿಲ್ಲ, ಇಷ್ಟು ದೊಡ್ಡ ಕಾರ್ಯಕ್ರಮವನ್ನು ನಿಗದಿ ಮಾಡಬೇಕಾದರೆ ಅದರ ಹಿಂದೆ ಯಾರಾದರೂ ಇರಬೇಕಲ್ವ, ಇಲ್ಲವಾದರೆ ಪವಾಡದ ರೀತಿ ನಿಮಗೆ ಮಾತ್ರ ಆಹ್ವಾನ ಪತ್ರಿಕೆ ಹೇಗೆ ಬಂದಿದ್ದು, ಇದರ ಹಿಂದೆ ಯಾರಿದ್ದಾರೆ ಎಂದು ಇದರಿಂದ ಗೊತ್ತಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್, ಶಾಸಕ ವೇದವ್ಯಾಸ ಕಾಮತ್‌ಗೆ ಮಾತಿನ ತಿರುಗೇಟು ನೀಡಿದರು.

ಇಲ್ಲಿ ಮಾಧ್ಯಮದ ಗಮನ ಸೆಳೆಯಲು ಈ ರೀತಿ ಮಾತನಾಡುತ್ತಿದ್ದೀರಿ ಕುಳಿತುಕೊಳ್ಳಿ ಎಂದು ಸಚಿವರು ಹೇಳಿದಾಗ, ಈ ರೀತಿ ಮಾತನಾಡಬೇಡಿ, ನಾನು ಇಲ್ಲಿ ಸದಸ್ಯ, ನನ್ನ ವಿರುದ್ಧ ಆರೋಪ ಮಾಡಿದ್ದೀರಿ ಅದನ್ನು ಸಾಬೀತು ಮಾಡಿ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದಾಗ, ಮಾಡೋದೆಲ್ಲ ಮಾಡಿ ಈಗ ನಾಟಕ ಮಾಡಬೇಡಿ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರತಿವಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News