×
Ad

ಮೌಲ್ಯಗಳು ಕುಸಿದ ಸಮಾಜದಲ್ಲಿ ಮುಂದಿನ ನಿರ್ಭಯಾ ಯಾರೆಂಬ ಭಯ: ಪಿಂಕಿ ವಿಜೇತಾ ಡೇಸಾ ಕಳವಳ

Update: 2024-08-23 18:35 IST

ಮಂಗಳೂರು: ದೇಶ ವೈಜ್ಞಾನಿಕವಾಗಿ ಅಭಿವೃದ್ಧಿಯಾಗಿದ್ದರೂ ಮೌಲ್ಯಗಳು ಕುಸಿಯುತ್ತಿರುವ ಸಮಾಜದಲ್ಲಿ ಮುಂದಿನ ನಿರ್ಭಯಾ ಯಾರು ಎಂಬ ಭಯದಿಂದ ತಲ್ಲಣಿಸುವಂತಾಗಿದೆ ಎಂದು ನ್ಯಾಯವಾದಿ ಪಿಂಕಿ ವಿಜೇತಾ ಡೇಸಾ ಕಳವಳ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ಸ್ತ್ರೀ, ಯುವಜನ, ಸಾಮಾಜಿಕ ಮಾಧ್ಯಮ ಹಾಗೂ ಸಾಮಾಜಿಕ ನ್ಯಾಯ ಆಯೋಗ, ಅಖಿಲ ಕರ್ನಾಟಕ ಮಾನವ ಹಕ್ಕುಗಳ ಸಂಯುಕ್ತ ಕ್ರೈಸ್ತ ಐಕ್ಯತಾ ವೇದಿಕೆ, ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ, ಮದರ್ ತೆರೆಸಾ ವಿಚಾರ ವೇದಿಕೆ ಹಾಗೂ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ವತಿಯಿಂದ ಶುಕ್ರವಾರ ಮಿನಿ ವಿಧಾನಸೌಧದ ಎದುರು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

2005ರಲ್ಲಿ ಬಂಟ್ವಾಳದ ಕುಗ್ರಾಮದಿಂದ ಮಂಗಳೂರಿಗೆ ಬಂದು ಕಾನೂನು ವಿದ್ಯಾಭ್ಯಾಸ ಮಾಡುತ್ತಿದ್ದ ಅವಧಿಯಲ್ಲಿ ರಾತ್ರಿ ವೇಳೆ ಪ್ರಯಾಣದ ವೇಳೆಯಲ್ಲೂ ಇಲ್ಲದ ಭಯ ಇಂದು ಹಗಲು ಹೊತ್ತಿನಲ್ಲೂ ಕಾಡುತ್ತಿದೆ ಎಂದರು.

ಅತ್ಯಾಚಾರ ಸೇರಿದಂತೆ ಜೈಲು ಶಿಕ್ಷೆ ಅನುಭವಿಸಿ ಹೊರಬರುವ ಆರೋಪಿಗಳಿಗೆ ಸ್ವಾಗತ ಮಾಡುವಂತಹ ಸಮಾಜದ ನಡೆ ಕೊನೆಗೊಳ್ಳುವ ತನಕ, ನಮ್ಮ ಸಾಮಾಜಿಕ, ಶಿಕ್ಷಣ, ನ್ಯಾಯಾಂಗ ವ್ಯವಸ್ಥೆ ಸುಧಾರಣೆಯಾಗದೆ ಹೆಣ್ಣು ಮಕ್ಕಳ ಮೇಲಿನ ಇಂತಹ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಬೀಳದು. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರು ಜೀವಮಾನವಿಡೀ ಕತ್ತಲಲ್ಲೇ ಬದುಕು ಸವೆಸುವಂತಾಗುತ್ತದೆ. ಆದರೆ ಅಪರಾಧಿಗಳು ಕೆಲ ವರ್ಷಗಳ ಶಿಕ್ಷೆ ಅನುಭವಿಸಿ ಹೊರಬರುತ್ತಾರೆ ಎಂದು ಹೇಳಿದ ಅವರು, ಇಂತಹ ಪ್ರಕರಣದ ಅಪರಾಧಿಗಳಿಗೆ ಕನಿಷ್ಠ ಜೀವಾವಧಿ ಶಿಕ್ಷೆಯಾಗುವ ನಿಟ್ಟಿನಲ್ಲಿ ಕಾನೂನಿನಲ್ಲಿ ತಿದ್ದುಪಡಿ ಆಗಬೇಕು. ಈ ನಿಟ್ಟಿನಲ್ಲಿ ಸರಕಾರಗಳು ಕ್ರಮ ವಹಿಸಬೇಕು. ಅಪರಾಧಿಗಳು ಪರೋಲ್‌ನಲ್ಲಿ ಹೊರಬಾರದಂತೆ ನಿರ್ಬಂಧ ವಿಧಿಸಬೇಕು. ಶೋಷಿತ ಹಾಗೂ ಅತ್ಯಾಚಾರಕ್ಕೊಳಗಾದ ಸಂತ್ರಸ್ತರನ್ನು ಸಮಾಜ ಗೌರವದಿಂದ ನೋಡುವಂತಾಗಬೇಕು ಎಂದರು.

ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಸೈನಾ ಕ್ರಿಸ್ಟಲ್ ಡಿಸೋಜಾ ಮಾತನಾಡಿ, ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಕಳುಹಿಸಲು ಭಯ ಪಡುವ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧವರೆಗೂ ಅತ್ಯಾಚಾರವಾಗುತ್ತಿರುವುದನ್ನು ಪ್ರತಿನಿತ್ಯ ಕೇಳುವಾಗ ಹೃದಯ ಭಾರವಾಗುತ್ತದೆ ಎಂದರು.

ಹೆಣ್ಣು ಮಕ್ಕಳನ್ನು ಆಕೆಯ ಧರಿಸುವ ಬಟ್ಟೆಯಿಂದ ಅಳೆಯುವ ಪ್ರವೃತ್ತಿ ಸಮಾಜದಲ್ಲಿ ಕೊನೆಯಾಗಬೇಕು. ಹೆಣ್ಣು ಗಂಡಿಗೆ ಗೌರವಯುತ ಬದುಕು ದೊರೆಯಬೇಕು ಎಂದು ಅವರು ಆಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತೆ, ನ್ಯಾಯವಾದಿ ಹಾಗೂ ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್ ಮಾತನಾಡಿ, ಇದು ಸಾಂಕೇತಿಕ ಪ್ರತಿಭಟನೆ ಮಾತ್ರ. ಅತ್ಯಾಚಾರ ಪ್ರಕರಣಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಬೇಲಿಯೇ ಎದ್ದು ಹೊಲವ ಮೇಯ್ದಂತೆ ಎಂಬ ಮಾತಿನಂತೆ ತಂದೆಯಿಂದಲೇ ಮಗಳು ಗರ್ಭಿಣಿಯಾಗುವಂತಹ ಪರಿಸ್ಥಿತಿಗೆ ನಮ್ಮ ಸಮಾಜ ತಲುಪಿದೆ. ಹೆಣ್ಣಿನ ಮೇಲಿನ ದೌರ್ಜನ್ಯ ತಡೆಯಬೇಕಾದರೆ ಹೆಣ್ಣು ತಾನು ಅಬಲೆಯಲ್ಲ ಎಂಬುದನ್ನು ಸಾಬೀತುಪಡಿಸುವಂತಾಗಬೇಕು. ತನ್ನ ಹಕ್ಕಿಗಾಗಿ ತಾನೇ ಹೋರಾಟ ನಡೆಸಬೇಕು ಎಂದು ಅವರು ಕರೆ ನೀಡಿದರು.

ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಮಾತನಾಡಿ, ದಿನನಿತ್ಯ ಅತ್ಯಾಚಾರ ಪ್ರಕರಣಗಳು ವರದಿಯಾ ಗುತ್ತಿವೆ. ಹೆಣ್ಣು ಮಕ್ಕಳಿಗೆ ಗೌರವ ದೊರೆತರೆ ಇಂತಹ ಕೃತ್ಯಗಳು ನಡೆಯಲು ಸಾಧ್ಯವಾಗದು. ಪುರುಷ ಪ್ರಧಾನ ಸಮಾಜ ಎಂದು ಹೇಳುವ ಕಾಲ ಬದಲಾಗಿದೆ. ಹೆಣ್ಣು ಮಕ್ಕಳಿಗೂ ಸಮಾನವಾದ ಹಕ್ಕುಗಳಿವೆ. ಸುರಕ್ಷತೆ ಮತ್ತು ರಕ್ಷಣೆ ಮಾತ್ರವಲ್ಲ ನಮಗೆ ಬದುಕಲು ಸುರಕ್ಷಿತ ವಾತಾವರಣ ಬೇಕಿದೆ. ನಮ್ಮ ಹಕ್ಕು, ರಕ್ಷಣೆಗಳಿಗಾಗಿನ ಕಾನೂನನ್ನು ಕಟ್ಟುನಿಟ್ಟಾಗಿ ಸರಕಾರ ಜಾರಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.

ಪ್ರತಿಭಟನಾ ಸಭೆಯ ಬಳಿಕ ವಿವಿಧ ಬೇಡಿಕೆಗಳನ್ನು ಒಳಗೊಂಡ ಹಕ್ಕೊತ್ತಾಯ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವಿವಿಧ ಕ್ರೈಸ್ತ ಶಿಕ್ಷಣ, ವೈದ್ಯಕೀಯ ಸಂಸ್ಥೆಗಳ ಪ್ರಮುಖರು, ಧರ್ಮಗುರುಗಳು, ಭಗಿನಿಯರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಫಾ. ವಿನೋದ್ ಮತ್ತು ಸಂಗಡಿಗರು ಘೋಷಣೆಗಳನ್ನು ಕೂಗಿದರು. ಅನಿತಾ ಫ್ರಾಂಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ. ಸೆವ್ರಿನ್ ಸ್ವಾಗತಿಸಿದರು. ಫಾ. ರೂಪೇಶ್ ಮನವಿ ವಾಚಿಸಿದರು. ಸ್ಟೀವನ್ ರಾಡ್ರಿಗಸ್ ವಂದಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News