ಎಡೆಬಿಡದೆ ಸುರಿದ ಭಾರೀ ಮಳೆಗೆ ನಲುಗಿದ ದ.ಕ. ಜಿಲ್ಲೆ; ಅಪಾರ ಹಾನಿ
ಮಂಗಳೂರು: ದ.ಕ.ಜಿಲ್ಲಾದ್ಯಂತ ಸೋಮವಾರ ದಿನವಿಡೀ ಭಾರೀ ಮಳೆಯಾಗಿದ್ದು, ವಸ್ತುಶಃ ದ.ಕ.ಜಿಲ್ಲೆಯು ನಲುಗಿದೆ. ಜಿಲ್ಲಾದ್ಯಂತ ತಗ್ಗು ಪ್ರದೇಶಗಳಲ್ಲಿನ ಮನೆ, ಅಂಗಡಿಮುಂಗಟ್ಟು, ತೋಟ, ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಸತತ ಮೂರು ದಿನದಿಂದ ಸುರಿಯುವ ಭಾರೀ ಮಳೆಯಿಂದ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಜನಜೀವನ ಭಾಗಶಃ ಅಸ್ತವ್ಯಸ್ಥಗೊಂಡಿವೆ. ಅರಬ್ಬೀ ಸಮುದ್ರದಲ್ಲಿ ಕಡಲ ಅಲೆಯ ಅಬ್ಬರವೂ ಮಿತಿಮೀರಿದ್ದು, ಮತ್ತೆ ಕಡಲ್ಕೊರೆತೆದ ಭೀತಿ ಎದುರಾಗಿದೆ.
ಮಂಗಳೂರು ನಗರದ ಬಹುತೇಕ ಕಡೆ ರಸ್ತೆಗಳ ಮೇಲೆಯೇ ಮಳೆನೀರು ಹರಿದಿದ್ದು, ರಾಜಕಾಲುವೆಗಳಲ್ಲಿ ನೀರು ತುಂಬಿವೆ. ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯಿಂದ ಬಹುತೇಕ ಮನೆ, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಗುಡ್ಡಗಳು ಜರಿದಿವೆ. ಕಾಂಪೌಂಡ್ ಗೋಡೆಗಳು, ರಸ್ತೆಗಳು, ಮೋರಿಗಳು ಕುಸಿದಿವೆ.
ನಗರದ ಅನೇಕ ರಾಜಕಾಲುವೆಗಳು ಉಕ್ಕೇರಿದ ಪರಿಣಾಮ ಸಮೀಪದ ಮನೆಮಂದಿಯ ಬದುಕು ಅಯೋಮಯವಾಗಿತ್ತು. ಉಜ್ಜೋಡಿ, ಜಪ್ಪಿನಮೊಗರಿನ ಹಲವು ಮನೆಗಳಿಗೆ ನುಗ್ಗಿದೆ. ಕೊಡಿಯಾಲಬೈಲ್, ಕುದ್ರೋಳಿ ಭಗವತಿನಗರ ಬಳಿ ಕೃತಕ ಪ್ರವಾಹದಿಂದ ರಸ್ತೆ ಬಂದ್ ಆಗಿ ಪಕ್ಕದ ಮನೆಗಳಿಗೂ ಕಾಲುವೆಯ ತ್ಯಾಜ್ಯ ನೀರು ಹರಿದು ಮನೆಯೊಳಗೆ ವಸ್ತುಗಳಿಗೆ ಅಪಾರ ಹಾನಿಯಾಗಿದೆ.
ವಾಮಂಜೂರಿನ ಪರಾರಿ ಎಂಬಲ್ಲಿ ಧರೆ ಕುಸಿದು ಮನೆಯೊಂದು ಅಪಾಯಕ್ಕೆ ಸಿಲುಕಿದೆ. ಬಿಜೈನಲ್ಲಿ ರಾಜಕಾಲುವೆ ತಡೆಗೋಡೆ ಕುಸಿದು ಮೇಲಿನ ರಸ್ತೆ ಕುಸಿಯುವ ಅಪಾಯದಲ್ಲಿದೆ. ಬಿಜೈ ಆನೆಗುಂಡಿಯಲ್ಲಿ ರಾಜಕಾಲುವೆಗೆ ಅಡ್ಡಲಾಗಿ ಕಟ್ಟಿದ ಕಾಲು ಸೇತುವೆಯೇ ಕುಸಿದು ಬಿದ್ದಿದೆ. ವಾಮಂಜೂರಿನಲ್ಲಿ ರಿಕ್ಷಾವೊಂದರ ಮೇಲೆ ಮರ ಬಿದ್ದು ಹಾನಿಯಾಗಿದೆ. ಬಜಾಲ್ ಜಲ್ಲಿಗುಡ್ಡೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಗುಡ್ಡ ಕಡಿದ ಪರಿಣಾಮ ಅಲ್ಲಿನ ಭಾರೀ ಕೆಸರು ನೀರು ರಸ್ತೆ ಮೇಲೆ ಹರಿದು ವಾಹನ ಸಂಚಾರಕ್ಕೆ ತೊಡಕಾಗಿವೆ.
ನಗರದ ಬೊಂದೆಲ್ ಮಂಜಲ್ಪಾದೆಯಲ್ಲಿ ರಸ್ತೆ ಮೇಲೆ ಮರ ಬಿದ್ದಿದೆ. ಮಣ್ಣಗುಡ್ಡೆ, ಜಲ್ಲಿಗುಡ್ಡೆ ಸೇರಿದಂತೆ ಹತ್ತಾರು ಕಡೆಗಳಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು.
ಫಲ್ಗುಣಿ ನದಿ ತಟದ ಮರವೂರಿನಲ್ಲಿ ನೀರು ಹರಿಯುವ ತೋಡಿಗೆ ಮಣ್ಣು ತುಂಬಿದ್ದರಿಂದ ಕೃತಕ ನೆರೆ ಆವರಿಸಿದೆ. ಆಸುಪಾಸಿನ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಪಾಪ್ಯುಲರ್ ರೆಸಾರ್ಟ್ ಬಳಿಯ ಮನೆಯೊಂದು ಕುಸಿದಿದ್ದು, ಅಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.
ನಗರದ ಪಂಪ್ವೆಲ್ ಸರ್ಕಲ್ನಲ್ಲಿ ಸೋಮವಾರವೂ ಕೃತಕ ಪ್ರವಾಹ ಉಂಟಾಗಿ ವಾಹನಗಳು ಸಂಚರಿಸಲಾಗದೆ ಪರದಾಡಿದವು. ರವಿವಾರ ಪೂರ್ವಾಹ್ನವೂ ಇಲ್ಲಿ ಗಂಟೆಗೂ ಅಧಿಕ ಕಾಲ ಬ್ಲಾಕ್ ಆಗಿತ್ತು. ಕೊಟ್ಟಾರ ಚೌಕಿಯಲ್ಲಿ ರಾಜಕಾಲುವೆ ಉಕ್ಕಿ ಹೆದ್ದಾರಿ ಮೇಲೆ ಹರಿದು ಸ್ಥಳೀಯ ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿತ್ತು. ನಗರದ ಪಡೀಲ್ ರೈಲ್ವೆ ಅಂಡರ್ಪಾಸ್ ಹೆದ್ದಾರಿಯಲ್ಲಿ ಕೂಡ ಮೂರ್ನಾಲ್ಕು ಅಡಿಗಳಷ್ಟು ನೀರು ನಿಂತಿತ್ತು.
ನಗರದ ಪಾಂಡೇಶ್ವರ, ಜೆಪ್ಪು, ಜ್ಯೋತಿ ಬಳಿಯ ಅಂಬೇಡ್ಕರ್ ವೃತ್ತ, ಬಂಟ್ಸ್ ಹಾಸ್ಟೆಲ್, ಕಾರ್ಸ್ಟ್ರೀಟ್, ಕದ್ರಿ, ಬಿಜೈ, ಹೊಯಿಗೆಬೈಲ್ ಮತ್ತಿತರ ಅನೇಕ ಕಡೆ ಮಳೆ ನೀರು ರಸ್ತೆಯಲ್ಲೇ ಎರಡ್ಮೂರು ಅಡಿಗಳಷ್ಟು ಪ್ರವಾಹರೂಪಿಯಾಗಿ ಹರಿಯುತ್ತಿದ್ದುದು ಕಂಡು ಬಂತು.
ನಗರದ ಕದ್ರಿ ಸಿಟಿ ಹಾಸ್ಪಿಟಲ್ ಬಳಿ ರಸ್ತೆ ಸಂಪೂರ್ಣ ಕೆರೆಯಂತಾಗಿತ್ತು. ಆಸುಪಾಸಿನ ಅಂಗಡಿ, ಮನೆಗಳ ಆವರಣಕ್ಕೆ ನೀರು ನುಗ್ಗಿತ್ತು.
ಮೇ 27, 28ರಂದು ಅಂಗನವಾಡಿ, ಪಿಯು ಕಾಲೇಜುಗಳಿಗೆ ರಜೆ
ದ.ಕ.ಜಿಲ್ಲಾದ್ಯಂತ ಸೋಮವಾರ ಭಾರೀ ಮಳೆಯಾದ ಕಾರಣ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಮೇ 27 ಮತ್ತು 28ರಂದು ಕೂಡ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಈ ಎರಡೂ ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಸಿಬಿಎಸ್ಸಿ, ಪದವಿ ಪೂರ್ವ ಸರಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಮೇ 27 ಮತ್ತು 28ರಂದು ರಜೆ ಘೋಷಿಸಿ ದ.ಕ.ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸಮಸ್ತ ಮದ್ರಸಗಳಿಗೆ ರಜೆ ಘೋಷಣೆ
ರೆಡ್ ಅಲರ್ಟ್ ಹಿನ್ನಲೆಯಲ್ಲಿ ಮೇ 27 ಮತ್ತು 28ರಂದು ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪಿಯು ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸುತ್ತೋಲೆ ಪ್ರಕಾರ ಇದು ಮದ್ರಸಕ್ಕೂ ಅನ್ವಯವಾಗುತ್ತದೆ ಎಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
24 ಮನೆಗಳಿಗೆ ಹಾನಿ
ದ.ಕ. ಜಿಲ್ಲೆಯಲ್ಲಿ ಸೋಮವಾರ 24 ಮನೆಗಳಿಗೆ ಹಾನಿಯಾಗಿವೆ. ಅದರಲ್ಲಿ 2 ಮನೆಗಳು ಸಂಪೂರ್ಣ ಕುಸಿದಿದೆ. 22 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಎಪ್ರಿಲ್ನಿಂದ ಈವರೆಗೆ 10 ಮನೆಗಳು ಸಂಪೂರ್ಣ ಮತ್ತು 215 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಸೋಮವಾರ ಜಿಲ್ಲಾದ್ಯಂತ 259 ವಿದ್ಯುತ್ ಕಂಬಗಳು, 4 ವಿದ್ಯುತ್ ಪರಿವರ್ತಕಗಳು ಮತ್ತು 9 ಸಣ್ಣ ಸೇತುವೆಗಳಿಗೆ ಹಾನಿಯಾಗಿವೆ.
ದ.ಕ.ಜಿಲ್ಲೆಯ ಮಳೆ ವಿವರ
ಬೆಳ್ತಂಗಡಿ: 143.3 ಮಿ.ಮೀ
ಬಂಟ್ವಾಳ: 142.6 ಮಿ.ಮೀ
ಮಂಗಳೂರು: 93.0 ಮಿ.ಮೀ
ಪುತ್ತೂರು: 162.4 ಮಿ.ಮೀ
ಸುಳ್ಯ: 148.7ಮಿ.ಮೀ.
ಮೂಡುಬಿದಿರೆ: 126.9 ಮಿ.ಮೀ.
ಕಡಬ: 179.3 ಮಿ.ಮೀ.
ಮುಲ್ಕಿ: 97.5 ಮಿ.ಮೀ
ಉಳ್ಳಾಲ: 114.1 ಮಿ.ಮೀ.