×
Ad

ದ.ಕ. ಜಿಲ್ಲಾದ್ಯಂತ ಭಾರೀ ಮಳೆ: ಅಪಾರ ಹಾನಿ, ನದಿಗಳ ಹರಿವಿನ ಮಟ್ಟ ತೀವ್ರ ಏರಿಕೆ

Update: 2025-05-25 20:45 IST

ಮಂಗಳೂರು: ದ.ಕ. ಜಿಲ್ಲಾದ್ಯಂತ ರವಿವಾರ ಮುಂಗಾರು ಮಳೆಯು ಬಿರುಸು ಪಡೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರವಿವಾರ ಮುಂಜಾನೆಯಿಂದಲೇ ಎಡೆಬಿಡದೆ ಮಳೆ ಸುರಿದಿದೆ. ಬಲವಾದ ಗಾಳಿಯೊಂದಿಗೆ ಸಮುದ್ರದ ಅಲೆಗಳ ಅಬ್ಬರವೂ ಇತ್ತು. ಜಿಲ್ಲೆಯ ಬಹುತೇಕ ನದಿಗಳ ಹರಿವಿನ ಮಟ್ಟ ತೀವ್ರ ಏರಿಕೆಯಾಗಿದೆ. ವಿವಿಧೆಡೆ ಮನೆಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿ ಸಂಭವಿಸಿದೆ. ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಅಲ್ಲದೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.

ನಗರದ ಸ್ಟೇಟ್‌ಬ್ಯಾಂಕ್ ಸಮೀಪ ಸೈಂಟ್ ಆನ್ಸ್ ಶಾಲೆಯ ಹಿಂಭಾಗದ ಕಲ್ಲಿನ ಆವರಣ ಗೋಡೆ ಕುಸಿದು ರಸ್ತೆಗೆ ಬಿದ್ದಿದೆ. ಇದರಿಂದ ಸಂಚಾರಕ್ಕೆ ಭಾರೀ ತೊಂದರೆಯಾಗಿತ್ತು. ಮಂಗಳೂರಿನ ಕೆಎಸ್ಸಾರ್ಟಿಸಿ-ಕುಂಟಿಕಾನ ರಸ್ತೆಯಲ್ಲಿ ಮನೆಯೊಂದರ ಮೇಲೆ ಭಾರೀ ಗಾತ್ರದ ಮರ ಉರುಳಿದ ಪರಿಣಾಮ ಅಪಾರ ಹಾನಿಯಾಗಿದೆ. ನಗರದ ಮಣ್ಣಗುಡ್ಡ ಬಳಿ ಮರ ರಸ್ತೆಗೆ ಉರುಳಿ ಬಿದ್ದಿದೆ. ಅದಲ್ಲದೆ ಲೇಡಿಹಿಲ್, ಕಾವೂರು ಸಹಿತ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಶಕ್ತಿನಗರ ಆರೋಗ್ಯ ಕೇಂದ್ರದ ಬಳಿ ಮರ ಬಿದ್ದು ನೀರಿನ ಟ್ಯಾಂಕ್‌ಗೆ ಹಾನಿಯಾಗಿದೆ. ಆಡುಮರೋಳಿ ಎಂಬಲ್ಲಿ ಮಾರಿಕಾಂಬಾ ದೇವಾಲಯ ಬಳಿ ಗುಡ್ಡ ಕುಸಿದು ಮನೆಯೊಂದಕ್ಕೆ ಹಾನಿಯಾಗಿದೆ. ನಗರ ಹೊರವಲಯದ ತೆಂಕಮಿಜಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯ ಭಾರೀ ಗೋಡೆಗೆ ಅಳವಡಿಸಿದ್ದ ಕಾಂಕ್ರಿಟ್ ಸ್ಲ್ಯಾಬ್‌ಗಳು ಕುಸಿದ ಪರಿಣಾಮ ಪಕ್ಕದ ಮನೆಗಳು ಅಪಾಯಕ್ಕೆ ಸಿಲುಕಿವೆ. ಹೆದ್ದಾರಿ ಕಾಮಗಾರಿಯ ಕೆಸರು ನೀರಿನಿಂದ ಸ್ಥಳೀಯರು ಪರದಾಡುವಂತಾಗಿದೆ.

ಮಂಗಳೂರಿನಾದ್ಯಂತ ವಿವಿಧೆಡೆ ರಸ್ತೆಯ ಮೇಲೆ ಕೃತಕ ನೆರೆ ಸೃಷ್ಟಿಯಾದ ಪರಿಣಾಮ ಜನ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಜತೆಗೆ ಅಲ್ಲಲ್ಲಿ ಕಾಮಗಾರಿಗಾಗಿ ಅಗೆದು ಹಾಕಿದ ರಸ್ತೆಗಳಿಂದ ನಗರವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ನಗರದ ಪಂಪ್‌ವೆಲ್‌ನಲ್ಲಿ ಚರಂಡಿ ಉಕ್ಕೇರಿ ರಸ್ತೆ ಮೇಲೆ ನೀರು ಹರಿದು ಪ್ರತಿ ವರ್ಷದಂತೆ ಫ್ಲೈಓವರ್ ಕೆಳಭಾಗ ಜಲಾವೃತಗೊಂಡಿತ್ತು. ಕುದ್ರೋಳಿ, ಕರಂಗಲ್ಪಾಡಿ, ಬಲ್ಮಠ, ಪಡೀಲ್ ಅಂಡರ್‌ಪಾಸ್ ಮತ್ತಿತರ ಕಡೆ ರಸ್ತೆ ಮೇಲೆ ಕೃತಕ ಪ್ರವಾಹ ಹರಿದಿತ್ತು. ಕಾವೂರು ಅಂಬಿಕಾನಗರದಲ್ಲಿ ಕೂಡ ರಸ್ತೆಗೆ ಭಾರೀ ಗಾತ್ರದ ಮರ ಬಿದ್ದು ಸಂಚಾರ ವ್ಯತ್ಯಯವಾಗಿತ್ತು.

ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆ ಮಂದಿ ತೀವ್ರ ಸಮಸ್ಯೆಗೆ ಸಿಲುಕಿದರು. ಅದಲ್ಲದೆ ಕಡೇಶ್ವಾಲ್ಯ ಗ್ರಾಮದ ಕಲ್ಲಾಜೆ ಎಂಬಲ್ಲಿ ನಿರ್ಮಾಣ ಹಂತದ ಮನೆಯ ಗೋಡೆ ಕುಸಿದಿದೆ.

ದ.ಕ. ಜಿಲ್ಲೆಯ ನದಿ ನೀರಿನ ಮಟ್ಟ

ನೇತ್ರಾವತಿ -ಬಂಟ್ವಾಳ : ಈಗಿನ ಸ್ಥಿತಿ 3.9 ಮೀಟರ್, ಅಪಾಯಕಾರಿ ಮಟ್ಟ 9.00 ಮೀಟರ್,

ನೇತ್ರಾವತಿ-ಉಪ್ಪಿನಂಗಡಿ: ಈಗಿನ ಸ್ಥಿತಿ 23.60 ಮೀಟರ್‌ಗಿಂತ ಕಡಿಮೆ, ಅಪಾಯಕಾರಿ ಮಟ್ಟ 31.5 ಮೀಟರ್‌ಗಿಂತ ಹೆಚ್ಚು

ದ.ಕ. ಅಣೆಕಟ್ಟುಗಳ ನೀರಿನ ವಿವರ

ನೇತ್ರಾವತಿ ನದಿ ಗರಿಷ್ಠ ಈಗಿನ ಸ್ಥಿತಿ

ಎಎಂಆರ್-ಬಂಟ್ವಾಳ 18.9 ಮೀ 18.90 ಮೀ

ತುಂಬೆ ಅಣೆಕಟ್ಟು 6.00 ಮೀ 5.50 ಮೀ

ಹರೇಕಳ-ಅಡ್ಯಾರ್ 2.00 ಮೀ 2.00 ಮೀ

ಬಿಳಿಯೂರು 4.00 ಮೀ 4.00 ಮೀ

ಜಕ್ರಿಬೆಟ್ಟು 5.5 ಮೀ 2.10 ಮೀ

ಫಲ್ಗುಣಿ ನದಿ

ಮಳವೂರು ಡ್ಯಾಮ್ 2.50 ಮೀ 2.00 ಮೀ

ಸೋಹಮ್ (ಇರುವೈಲು) 4.5 ಮೀ 4.5 ಮೀ

ತುಂಬೆ ವೆಂಟೆಡ್ ಡ್ಯಾಮ್‌ನ 6 ಗೇಟ್‌ಗಳನ್ನು ತೆರೆಯಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News