×
Ad

ಜಯಲಕ್ಷ್ಮಿ ಎಸ್. ಜೋಕಟ್ಟೆ ಅವರ ʼಕವಿತೆಗಳುʼ ಕೃತಿ ಬಿಡುಗಡೆ

Update: 2026-01-04 21:53 IST

ಮಂಗಳೂರು, ಜ.4: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು,ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮುಂಬಯಿಯ ಕವಯಿತ್ರಿ ಜಯಲಕ್ಷ್ಮಿ ಎಸ್. ಜೋಕಟ್ಟೆಯವರ ಕವಿತೆಗಳು ಸಂಕಲನವು ಅವರ ಹುಟ್ಟುಹಬ್ಬದ ದಿನವಾದ ಜ.3ರಂದು ಎಸ್ ಡಿ ಎಂ ಲಾ ಕಾಲೇಜ್ ಸಭಾಗೃಹದಲ್ಲಿ ಬಿಡುಗಡೆಗೊಂಡಿತು.

ಕವಿತಾಸಂಕಲನ ಬಿಡುಗಡೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಅವರು ಮಾತನಾಡಿ ಜಯಲಕ್ಷ್ಮೀ ಅವರ ಹುಟ್ಟುಹಬ್ಬದಂದೇ ಅವರ ಚೊಚ್ಚಲ ಕವಿತಾ ಸಂಕಲನ ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆಯಿಂದ ಬಿಡುಗಡೆ ಯಾಗುತ್ತಿರುವುದು ಸಂತೋಷವಾದರೆ ಅವರು ಇಂದು ನಮ್ಮ ಜೊತೆಗಿಲ್ಲ ಅನ್ನುವುದಕ್ಕೆ ದು:ಖವೂ ಆಗುತ್ತಿದೆ ಎಂದು ನುಡಿದರು.

ಮುಂಬಯಿಯಲ್ಲಿ ಪತ್ರಕರ್ತರಾಗಿರುವ ಅವರ ಲಕ್ಷ್ಮಿ ಅವರ ಪತಿ ಶ್ರೀನಿವಾಸ ಜೋಕಟ್ಟೆಯವರು ನನಗೆ ಮೂರು ದಶಕಗಳಿಂದ ಪರಿಚಿತರು. ಮುಂಬಯಿಯ ಸಾಹಿತ್ಯ ವಲಯವನ್ನು ನಾವು ಮರೆಯುವಂತಿಲ್ಲ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್ ಮಾತನಾಡಿ ಜಯಲಕ್ಷ್ಮಿ ಅವರು ಕವನ ಸಂಕಲನ ತರಬೇಕು ಎಂದು ಬರೆದವರಲ್ಲ. ಹಾಗಾಗಿ ಅವರ ಕವನಗಳು ಗಟ್ಟಿತನವನ್ನು ಉಳಿಸಿಕೊಂಡಿವೆ. ಅನುಭವದ ಮೂಸೆಯಿಂದ ಮೂಡಿಬಂದಂತಹ ಕವಿತಾ ರಚನೆಗಳು ಜನಮಾನಸವನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ ಎಂದರು.

ಮುಖ್ಯ ಅತಿಥಿ ಮಂಗಳೂರಿನ ಹಿರಿಯ ಸಾಹಿತಿ, ಉಪನ್ಯಾಸಕಿ ಡಾ. ಮೀನಾಕ್ಷಿ ರಾಮಚಂದ್ರ ಅವರು ಎರಡು ದಶಕಗಳ ನಂತರ ಮತ್ತೆ ಶ್ರೀನಿವಾಸ ಜೋಕಟ್ಟೆ ಅವರ ಜೊತೆ ವೇದಿಕೆಯಲ್ಲಿದ್ದೇನೆ. ಆದರೆ ಇಂದು ಖುಷಿ ನೋವು ಎರಡೂ ಜೊತೆಗಿದೆ. ನಾವು ಬದುಕಿನಲ್ಲಿನ ನೋವನ್ನು ಮರೆತು ದೃಢ ಮನಸ್ಸು ಕಾಪಾಡಿಕೊಂಡು ಮುಂದುವರಿಯಬೇಕಾದ ಅನಿವಾರ್ಯತೆ ನಮ್ಮ ಎದುರಿಗಿದೆ ಎಂದು ಹೇಳಿದರು.

ಜಯಲಕ್ಷ್ಮಿ ಜೋಕಟ್ಟೆಯವರ ಕವಿತೆಗಳು’ ಕೃತಿಯ ಸಂಪಾದಕರಾದ ಅವರ ಪತಿ ಶ್ರೀನಿವಾಸ ಜೋಕಟ್ಟೆ ಮಾತನಾಡುತ್ತಾ ಏಳೆಂಟು ವರ್ಷ ಕವಿತಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಜಯಲಕ್ಷ್ಮಿ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಕವನಗಳನ್ನು ಪ್ರಕಟಿಸಿದ್ದರು. ಅವರು ತಾವು ಬರೆದ ಕವಿತೆಗಳನ್ನು ವಿಮರ್ಶಕಿ ಸುನಂದಾ ಪ್ರಕಾಶ ಕಡಮೆ ಅವರಿಗೆ ಪ್ರತಿಕ್ರಿಯೆಗಾಗಿ ಕಳುಹಿಸುತ್ತಿದ್ದರು. ಸುನಂದಾ ಕಡಮೆ ಅವರು ಆ ಕವನಗಳನ್ನು ಕಂಪ್ಯೂಟರ್‌ನಲ್ಲಿ ಡಿಲೀಟ್ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದರಿಂದಲೇ ಈ ಕವಿತಾ ಸಂಕಲನ ಹೊರಬರಲು ಸಾಧ್ಯವಾಯಿತು ಎನ್ನುತ್ತಾ, ನಂತರ ಜಯಲಕ್ಷ್ಮಿ ಯವರು ತಮ್ಮ ಕವಿತಾ ರಚನೆಯನ್ನು ನಿಲ್ಲಿಸಿ ನನ್ನ ಬರಹಗಳಿಗೇ ಹೆಚ್ಚಿನ ಮಹತ್ವ ನೀಡುತ್ತಾ ಬಂದರು ಎಂದು ನೆನಪಿಸಿಕೊಂಡರು.

ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ಎಸ್.ರೇವಣಕರ್ ಅವರು ಚೊಚ್ಚಲ ಕವಿತಾಸಂಕಲನಕ್ಕೆ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಜಯಲಕ್ಷ್ಮಿ ಅವರ ಮಧುಬನ- ಮಳೆಗಾನ ಎಂಬ ಕವಿತೆಯನ್ನು ಹಳೆಮನೆ ರಾಜಶೇಖರ ಉಜಿರೆ ವಾಚಿಸಿದರು. ಪತ್ರಕರ್ತ ರೇಮಂಡ್ ಡಿ ಕುನ್ಹಾ ತಾಕೊಡೆ ಸ್ವಾಗತಿಸಿದರು.ಸಾಹಿತಿ ಅರುಣ ನಾಗರಾಜ ವಂದಿಸಿದರು. ವಿಮರ್ಶಕ ಹಳೆಮನೆ ರಾಜಶೇಖರ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News