ಮಂಗಳೂರು| ಸೇವಾ ನ್ಯೂನ್ಯತೆ ಆರೋಪ: ಸೂಪರ್ ಮಾರ್ಕೆಟ್ಗೆ ದಂಡ
ಮಂಗಳೂರು, ಜು.7: ಗ್ರಾಹಕರಿಗೆ ಸೇವಾ ನ್ಯೂನ್ಯತೆ ಮಾಡಿರುವ ಆರೋಪದಲ್ಲಿ ನಗರದ ಚಿಲಿಂಬಿಯಲ್ಲಿ ರುವ ಮೋರ್ ಸೂಪರ್ ಮಾರ್ಕೆಟ್ಗೆ 39,105 ರೂ. ದಂಡ ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
*ಪ್ರಕರಣದ ವಿವರ: 2022 ಆ.28 ರಂದು ಸಾಮಾಜಿಕ ಹೋರಾಟಗಾರ ಎಚ್. ಶಶಿಧರ್ ಶೆಟ್ಟಿ ಅವರು ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸಲು ಮಂಗಳೂರಿನ ಚಿಲಿಂಬಿ ಬಳಿಯ ಸೂಪರ್ ಮಾರುಕಟ್ಟೆಗೆ ಹೋದಾಗ ಅಗತ್ಯ ವಸ್ತುಗಳನ್ನು ಖರೀದಿಸಿದ ನಂತರ, ರೂ .1,890.89 ವನ್ನು ತಮ್ಮ ಕರ್ನಾಟಕ ಎಸ್ಬಿ ಖಾತೆಯಿಂದ ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿದ್ದರು, ಆದರೆ ಬಿಲ್ಲಿಂಗ್ ಕೌಂಟರ್ ನಲ್ಲಿರುವ ಸಿಬ್ಬಂದಿ ಈ ಮೊತ್ತ ನಿಮ್ಮ ಖಾತೆಯಿಂದ ನಮಗೆ ಬಂದಿರುವುದಿಲ್ಲ, ಇನ್ನೊಮ್ಮೆ ನಗದು ರೂ.1890.89 ಪಾವತಿಸಲು ಒತ್ತಾಯಿಸಿದ್ದರೆನ್ನಲಾಗಿದೆ. ಆಗ ಸಮಸ್ಯೆಯನ್ನು ಪರಿಹರಿಸಲು ದೂರುದಾರರು 20 ರೂ. ಮೌಲ್ಯದ ಮತ್ತೊಂದು ವಸ್ತುವನ್ನು ಖರೀದಿಸಿ ರೂ .1890.89ಕ್ಕೆ ಸೇರಿಸಿ ಪುನಃ ತಮ್ಮ ಖಾತೆಯಿಂದ ರೂ .1,910.89 ಅನ್ನು ವರ್ಗಾಯಿಸಿದ್ದರು.
ಆದರೂ ಅಲ್ಲಿನ ಸಿಬ್ಬಂದಿ ತಮ್ಮ ಖಾತೆಗೆ ಇನ್ನೂ ರೂ .1,910.89 ಬಂದಿಲ್ಲ ಎಂದು ಹೇಳಿರುವುದರಿಂದ ರೂಪಾಯಿ 1911ನ್ನು ನಗದು ರೂಪದಲ್ಲಿ ಕೊಟ್ಟು ಬಂದಿದ್ದರು ಎಂದು ತಿಳಿದು ಬಂದಿದೆ.
ತಮ್ಮ ಬ್ಯಾಂಕ್ ಖಾತೆಯಿಂದ ಎರಡು ಬಾರಿ ಮೋರ್ ಸೂಪರ್ ಮಾರ್ಕೆಟ್ ಖಾತೆಗೆ ಹಣ ವರ್ಗಾವಣೆ ಆದ ಬ್ಯಾಂಕ್ ಪಾಸ್ ಬುಕ್ ಪ್ರತಿ ತೋರಿಸಿದರೂ ಮೋರ್ ಸೂಪರ್ ಮಾರ್ಕೆಟ್ನಿಂದ ಹಣ ಹಿಂತಿರಿಗಿಸಿ ರಲಿಲ್ಲ. ಇದರಿಂದ ನೊಂದ ದೂರುದಾರ ಶಶಿಧರ್ ಶೆಟ್ಟಿ ಮೋರ್ ಸುಪರ್ ಮಾರ್ಕೆಟ್ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಯು/ಎಸ್ 35 ಅನ್ವಯ ದೂರು ದಾಖಲಿಸಿದ್ದರು.
ಸಾಕ್ಷ್ಯಾಧಾರಗಳನ್ನು ಪರಿಶೀಲನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕರ ಸಂರಕ್ಷಣಾ ಕಾಯ್ದೆ - 2019 ಕಾಯಿದೆಯ ಸೆಕ್ಷನ್ 71 ಮತ್ತು 72 ಪ್ರಕಾರ ಸೂಪರ್ ಮಾರ್ಕೆಟ್ನ ಆಡಳಿತ ಮಂಡಳಿಯ ಸೇವೆಯ ಕೊರತೆ, ದೂರುದಾರರ ಮಾನಸಿಕ ಸಂಕಟ ಮತ್ತು ಅನಾನುಕೂಲತೆಗಾಗಿ ಒಟ್ಟು 39,105 ರೂ. ಪರಿಹಾರವನ್ನು ದೂರುದಾರಿಗೆ ನೀಡುವಂತೆ ಮೋರ್ ಆಡಳಿತ ಮಂಡಳಿಗೆ ದಂಡ ವಿಧಿಸಿ ಆದೇಶ ನೀಡಿದೆ.
ದೂರುದಾರ ಎಚ್.ಶಶಿಧರ್ ಶೆಟ್ಟಿ ಪರವಾಗಿ ವಕೀಲರಾದ ಬಿ.ಪಿ. ಭಟ್ ವಾದಿಸಿದ್ದರು.