ಮಂಗಳೂರು | ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ
ಮಂಗಳೂರು, ಡಿ.6: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಬಿಜೆಪಿ ಮಂಗಳೂರು ನಗರದ ದಕ್ಷಿಣ ಮಂಡಲದ ಎಸ್ಸಿ ಮೋರ್ಚಾ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗೌರವಪೂರ್ವಕ ಪುಷ್ಪ ನಮನಗಳನ್ನು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಬಾಬಾ ಸಾಹೇಬರು ಕೇವಲ ದಲಿತರ ಪರ ಹೋರಾಟಗಾರ ಅಲ್ಲ. ಈ ದೇಶದ ಪ್ರತಿಯೊಬ್ಬ ಅಸಹಾಯಕನ ಶೋಷಿತನ ಪರವಾಗಿ ಮಿಡಿದ ಮಹಾ ಮಾನವತಾವಾದಿ. ಅಂತಹ ಶ್ರೇಷ್ಠ ವ್ಯಕ್ತಿಯನ್ನು ಕಾಂಗ್ರೆಸ್ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವಂತೆ ಮಾಡಿದ್ದು, ಈ ದೇಶದ ದುರಂತವಾಗಿದೆ. ಬಾಬಾ ಸಾಹೇಬರು ನಮಗೆ ನೀಡಿದ ಸರ್ವ ಶ್ರೇಷ್ಠ ಸಂವಿಧಾನದ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಬಿಜೆಪಿ ದ.ಕ.ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಮಹಾ ಮಾನವತಾವಾದಿ ಅಂಬೇಡ್ಕರ್ ಅವರ ಸಂವಿಧಾನದ ಆಶಯಕ್ಕೆ ತಕ್ಕಂತೆ ನಾವೆಲ್ಲರೂ ನಡೆದುಕೊಂಡರೆ ಅದುವೇ ಅವರಿಗೆ ನಾವು ನೀಡುವ ಶ್ರೇಷ್ಠ ಗೌರವವಾಗಿದೆ ಎಂದರು.
ಸಂಸದ ಬ್ರಿಜೇಶ್ ಚೌಟ, ಬಿಜೆಪಿ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಾಜಿ ಮೇಯರ್ಗಳಾದ ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಬಿಜೆಪಿ ಪ್ರಮುಖರಾದ ಪೂರ್ಣಿಮಾ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ನಂದನ್ ಮಲ್ಯ, ವಸಂತ್ ಜೆ.ಪೂಜಾರಿ, ಮೋನಪ್ಪಭಂಡಾರಿ, ನಿತಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.