ಮಂಗಳೂರು| ಸೆನ್ ಕ್ರೈಂ ಪೊಲೀಸ್ ಹೆಸರಿನಲ್ಲಿ ವಂಚನೆ ಪ್ರಕರಣ: ತುಮಕೂರಿನ ಅರುಣ್ ಬಂಧನ
ಮಂಗಳೂರು: ಫೇಸ್ಬುಕ್ ಖಾತೆ, ಕನ್ನಡ ಮಾಡೆಲ್ಸ್, ಟ್ರೋಲ್ ಮಾಸ್ಟರ್, ಟ್ರೋಲ್ ಬಸ್ಯಾ ಇತ್ಯಾದಿ ಪೇಜ್ಗಳಲ್ಲಿ ಕಮೆಂಟ್ಸ್ ಹಾಕಿರುವ ವ್ಯಕ್ತಿಗಳಿಗೆ ಕರೆ ಮಾಡಿ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸುಶೀಲ್ ಕುಮಾರ ಎಂಬ ಹೆಸರು ಹೇಳಿ ಬೆದರಿಸುತ್ತಿದ್ದ ಆರೋಪಿ ತುಮಕೂರು ಜಿಲ್ಲೆಯ ಅರುಣ್ ಟಿ. (27) ಎಂಬಾತನನ್ನು ಮಂಗಳೂರು ಸೆನ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಹಲವರಿಗೆ ಫೋನ್ ಕರೆ ಮಾಡಿ ನಿಮ್ಮ ಮೇಲೆ ದೂರುಗಳು ಬಂದಿದೆ. ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ ಎಂದು ಹೆದರಿಸಿ ಸಾರ್ವಜನಿಕರಿಂದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ 1,23,000 ರೂ.ವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಈ ಬಗ್ಗೆ ಜು.15ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಸೆರೆಯಾಗಿದೆ. ಈತನ ಮೇಲೆ ಸೈಬರ್ ಪೊರ್ಟಲ್ನಲ್ಲಿ 11 ದೂರುಗಳು ದಾಖಲಾಗಿವೆ.