ಕರ್ನಾಟಕದ ಕೊಡಗಿನಂತಿದೆ ಮೇಘಾಲಯ: ರಾಜ್ಯಪಾಲ ಸಿ.ಎಚ್. ವಿಜಯಶಂಕರ್
► ರಾಜ್ಯಪಾಲರೊಂದಿಗೆ ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ಸಂವಾದ ► ಮೇಘಾಲಯದ ಸಾಂಸ್ಕೃತಿಕ, ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ
ಶಿಲ್ಲಾಂಗ್: ಭಾರತ ಸರ್ಕಾರದ ಬೆಂಗಳೂರಿನ ವಾರ್ತಾ ಶಾಖೆಯಿಂದ ಮೇಘಾಲಯಕ್ಕೆ ಮಾಧ್ಯಮ ಪ್ರವಾಸ ಆಯೋಜನೆಗೊಂಡಿದ್ದು, ಪ್ರವಾಸದ ಭಾಗವಾಗಿ ಇಂದು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳು ಮೇಘಾಲಯದ ಲೋಕಭವನದಲ್ಲಿ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರನ್ನು ಭೇಟಿಯಾಗಿ, ಅವರೊಂದಿಗೆ ಸಂವಾದ ನಡೆಸಿದರು.
ಮೇಘಾಲಯ, ಕರ್ನಾಟಕದ ಕೊಡಗಿನಂತಿದೆ ಎಂದು ಅಭಿಪ್ರಾಯ ಹಂಚಿಕೊಂಡ ರಾಜ್ಯಪಾಲ ಸಿ.ಎಚ್. ವಿಜಯ ಶಂಕರ್, ರಾಜ್ಯದಲ್ಲಿ 2 ವೈದ್ಯಕೀಯ ಕಾಲೇಜು, 2 ವಿಶ್ವವಿದ್ಯಾಲಯಗಳನ್ನು ಇತ್ತೀಚೆಗೆ ಆರಂಭಿಸಲಾಯಿತು ಎಂದರು. ಲೋಕಭವನವನ್ನು ಜನಸ್ನೇಹಿಯನ್ನಾಗಿ ಮಾಡಿದ್ದು, ಇಲ್ಲಿಗೆ ನೈಜ ಸಮಸ್ಯೆ ಹೇಳಿಕೊಂಡು ಬರುವ ಜನರಿಗೆ ಯಾವುದೇ ಮುಲಾಜಿಲ್ಲದೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಮೇಘಾಲಯದ ಸಾಂಸ್ಕೃತಿಕ, ಸಾಮಾಜಿಕ ಸ್ಥಿತಿಗತಿ, ಹಿನ್ನೆಲೆಗಳ ಕುರಿತು ಮಾಹಿತಿ ಹಂಚಿಕೊಂಡ ವಿಜಯಶಂಕರ್ ಅವರು, ಮೇಘಾಲಯದ ಆಡಳಿತ, ಕೃಷಿ ಕುರಿತು ಮಾಹಿತಿ ನೀಡಿದರು. ರಾಜ್ಯವು 450 ಕಿ.ಮೀ. ಗಡಿ ಪ್ರದೇಶವನ್ನು ಬಾಂಗ್ಲಾದೇಶದೊಂದಿಗೆ ಹಂಚಿಕೊಳ್ಳುತ್ತದೆ. ಇಲ್ಲಿನ ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ ಎಂದರು.
ಮೂಲ ನಿವಾಸಿಗಳಾದ ಬುಡಕಟ್ಟು ಸಮುದಾಯಗಳಲ್ಲಿ ಮೂಲಕ ಗ್ರಾಮಸಭೆಗಳ ಆಡಳಿತ ನಡೆಯುತ್ತಿದ್ದು, ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇಲ್ಲಿನ ಜನರು ಶೇ. 100 ನೈಸರ್ಗಿಕ ಕೃಷಿ ಅನುಸರಿಸುತ್ತಿದ್ದಾರೆ. ಇಲ್ಲಿನ ಪ್ರಮುಖ ಬೆಳೆಗಳಾದ ಅರಿಶಿಣ, ಬಿಳಿ ಮೆಣಸುಗಳು ಜಾಗತಿಕ ಮನ್ನಣೆ ಪಡೆದಿದ್ದು, ವಿದೇಶಗಳಿಗೂ ರಫ್ತಾಗುತ್ತವೆ. ಇಲ್ಲಿ ಔಷಧೀಯ ಸಸ್ಯಗಳು ಹೆಚ್ಚಾಗಿದ್ದು, ಮೇಘಾಲಯವನ್ನು ಔಷಧೀಯ ಸಸ್ಯಕಾಶಿ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದರು.
ರಾಜ್ಯದ ಜನಜೀವನ ಕುರಿತು ಮಾತನಾಡಿದ ಅವರು, ಮೇಘಾಲಯದ ಜನರು ಬಹಳ ಆತ್ಮ ಗೌರವ ಹೊಂದಿದ್ದಾರೆ. ಹಾಗಾಗಿ ಇಲ್ಲಿ ಭಿಕ್ಷುಕರನ್ನು ಕಾಣಲು ಸಾಧ್ಯವಿಲ್ಲ. ರಾಜ್ಯದ ಜನಸಂಖ್ಯೆಯಲ್ಲಿ 30 ವರ್ಷದೊಳಗಿನ ಯುವಜನರು ಶೇ. 51 ರಷ್ಟಿದ್ದು, ಇದಕ್ಕಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಕೃತಿ ಆರಾಧನೆ, ನಂಬಿಕೆಗಳು ಇಲ್ಲಿ ಗಾಢವಾಗಿದ್ದು, ಜನರು ಪರಿಸರವನ್ನು ಪೂಜಿಸುತ್ತಾರೆ. ಕೃಷಿ, ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇಲ್ಲಿನ ಜನರು ಫುಟ್ಬಾಲ್ ಕ್ರೀಡೆ ಹಾಗೂ ಸಂಗೀತದಲ್ಲಿ ಹೆಚ್ಚಿನ ಅಭಿರುಚಿ ಹೊಂದಿದ್ದಾರೆ ಎಂದರು.
ಸಂವಾದದಲ್ಲಿ ಕರ್ನಾಟಕದ 10 ಮಾಧ್ಯತಮ ಪ್ರತಿನಿಧಿಗಳು, ಪಿಐಬಿ ಶಿಲ್ಲಾಂಗ್ ನ ಸಹಾಯಕ ನಿರ್ದೇಶಕರಾದ ಗೋಪಾಜಿತ್ ದಾಸ್, ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕರಾದ ಎಂ. ಮಧು ಅವರು ಭಾಗವಹಿಸಿದ್ದರು.