×
Ad

ಮೈಕಲ್ ಡಿಸೋಜಾ ವಿಶನ್ 2030- ಕಾರ್ಯಯೋಜನೆಗೆ ಚಾಲನೆ

Update: 2025-12-17 18:00 IST

ಮಂಗಳೂರು: ಅನಿವಾಸಿ ಉದ್ಯಮಿ ಮತ್ತು ಮಹಾದಾನಿ ಮೈಕಲ್ ಡಿಸೋಜಾ ಅವರ ಕಾರವಾರ ಮತ್ತು ಗುಲ್ಬರ್ಗಾ ಜೋಡಿ ಧರ್ಮಪ್ರಾಂತ್ಯಗಳ ಸಮುದಾಯಗಳನ್ನು ಸಮರ್ಥಗೊಳಿಸುವ ಉದ್ದೇಶದ ಮಹತ್ವಾಕಾಂಕ್ಷಿ ವಿಶನ್ 2030 ಕಾರ್ಯಯೋಜನೆಗೆ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದಲ್ಲಿ ತಿಳುವಳಿಕೆ ಒಡಂಬಡಿಕೆಗೆ ಸಹಿ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.


ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳಿಗಾಗಿ ಮೈಕಲ್ ಡಿ ಸೊಜಾ ವಿಶನ್ 2030 ಕಾರ್ಯಯೋಜನೆ ವಸತಿ ಮತ್ತು ಶಿಕ್ಷಣ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್ ವಂ.ಡಾ. ಪೀಟರ್ ಪೌಲ್ ಸಲ್ದಾನ್ಹ ಮತ್ತು ಉಡುಪಿಯ ಬಿಷಪ್ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೋ ಉಪಸ್ಥಿತರಿದ್ದರು.

ಪ್ರತಿಯೊಬ್ಬ ಮಾನವನಿಗೂ ವಸತಿ ಮತ್ತು ಶಿಕ್ಷಣವು ಮೂಲಭೂತ ಅಗತ್ಯಗಳು. ತಲೆ ಮೇಲೊಂದು ಸುರಕ್ಷಿತ ಸೂರು ಇಲ್ಲದೆ ನಿರಂತರ ಅನಿಶ್ಚಿತತೆಯಲ್ಲಿ ಬದುಕುವುದು ಮತ್ತು ಉನ್ನತ ಶಿಕ್ಷಣದ ಕೊರತೆಯಿಂದ ಘನತೆಯಿಂದ ಕೂಡಿದ ಜೀವನ ಸಾಗಿಸಲು ಕಷ್ಟಪಡುವುದು ಸಮುದಾಯ ಅಭಿವೃದ್ಧಿಯ ಪಥದಲ್ಲಿ ತೊಡಕುಗಳಾಗಿವೆ ಎಂದು ಮೈಕಲ್ ಡಿಸೋಜಾ ಈ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದರು.


ದಾನಧರ್ಮವು ಫಲಾನುಭವಿಗಳಿಗೆ ಘನತೆಯನ್ನು ಮರಳಿ ನೀಡುವ ಗುರಿಯನ್ನು ಹೊಂದಿರಬೇಕು. ಸಮುದಾಯಗಳನ್ನು ಸಬಲೀಕರಣಗೊಳಿಸಲು ಶಿಕ್ಷಣವು ಅತ್ಯುತ್ತಮ ಮಾರ್ಗ. ಧರ್ಮಸಭೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಅತ್ಯಂತ ವಿಶ್ವಾಸಾರ್ಹ ಮತ್ತು ಸಮಯ ಪರೀಕ್ಷಿತ ಮಾದರಿಗಳಾಗಿವೆ. 2013ರಿಂದ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯಗಳು ಸಮಗ್ರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಿದ್ದು, ಗುಲ್ಬರ್ಗಾ ಮತ್ತು ಕಾರವಾರ ಬಿಷಪ್‌ರ ದೂರದೃಷ್ಟಿ ನಾಯಕತ್ವದಡಿ ಕಾರ್ಯಯೋಜನೆ ವಿಶನ್ 2030 ತಯಾರಿಸಲಾಗಿದೆ ಎಂದವರು ಹೇಳಿದರು.

ಮೈಕಲ್ ಡಿಸೊಜಾ ಕುಟುಂಬ ಪ್ರೇರಿತ ಶಿಕ್ಷಣ, ಆರೋಗ್ಯ, ವಸತಿ ಮತ್ತು ಸ್ವಸಹಾಯ ಗುಂಪು ಮಾದರಿ ಯೋಜನೆಗಳು 2013ರಿಂದ ಮಂಗಳೂರು ಮತ್ತು ಉಡುಪಿ ಧರ್ಮಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು ಅದರ ಯಶಸ್ಸಿನ ಆಧಾರದಲ್ಲಿ ವಿಶನ್ 2030 ನಿರ್ಮಿತವಾಗಿದ್ದು, ದೀರ್ಘಕಾಲೀನ ಸಮುದಾಯ ಉನ್ನತೀಕರಣದ ಕಡೆ ಕೇಂದ್ರೀಕೃತವಾಗಿದೆ.


ಮೈಕಲ್ ಡಿಸೋಜಾ ಸಮುದಾಯ ಯೋಜನೆಯ ಸಲಹೆಗಾರ ಓಸ್ವಾಲ್ಡ್ ರೊಡ್ರಿಗಸ್ ಸ್ವಾಗತಿಸಿ, ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.

ಪ್ರೊ. ಸಿ.ಎ. ಲಾಯ್ನಲ್ ಅರಾನ್ಹಾ ತಿಳಿವಳಿಕೆ ಒಡಂಬಡಿಕೆಯ ಸಂದರ್ಭ ಮತ್ತು ಮಹತ್ವವನ್ನು ವಿವರಿಸಿದರು. ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.


ಗುಲ್ಬರ್ಗಾ ಧರ್ಮಕ್ಷೇತ್ರದ ವಿಕಾರ್ ಜನರಲ್ ಅತೀ ವಂ. ಮೊ. ಸಂತೋಷ್ ಬಾಪು ಅವರು ತಮ್ಮ ಧರ್ಮಕ್ಷೇತ್ರದ ಪರವಾಗಿ ಮತ್ತು ಬಿಷಪ್ ಡುಮಿಂಗ್ ಡಾಯಸ್ ಅವರು ಕಾರವಾರ ಧರ್ಮಕ್ಷೇತ್ರದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಮೈಕಲ್ ಡಿ ಸೋಜಾ ಮತ್ತು ಅವರ ಪತ್ನಿ ಫ್ಲೇವಿಯಾ ಡಿ ಸೋಜಾ ಇವರನ್ನು ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳ ವತಿಯಿಂದ ಶಾಲು ಮತ್ತು ಪುಷ್ಪಗುಚ್ಛಗಳೊಂದಿಗೆ ಸನ್ಮಾನಿಸಲಾಯಿತು.


ಕರ್ನಾಟಕ ಜೆಸ್ಯೂಟ್‌ಗಳ ಪ್ರಾಂತೀಯ ಮುಖ್ಯಸ್ಥರಾದ ವಂ. ಡಯೋನಿಯಸ್ ವಾಸ್ ಎಸ್.ಜೆ., ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ವಂ. ಡಾ. ರಾಜೇಶ್ ರೊಸಾರಿಯೋ, ಅಪೋಸ್ತಲಿಕ್ ಕಾರ್ಮೆಲೈಟ್ ಪ್ರಾಂತೀಯ ಮುಖ್ಯಸ್ಥೆ ವಂ. ಭ. ನವೀನ್ ಎ.ಸಿ. ಮತ್ತು ಕಾರವಾರ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊ. ವಂ. ರಿಚರ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News