ಸುಳ್ಯದಲ್ಲಿ ರಾಷ್ಟೀಯ ಕಾನೂನು ಸೇವೆಗಳ ದಿನಾಚರಣೆ
ಸುಳ್ಯ : ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ಸುಳ್ಯ ತಾಲೂಕು ವಕೀಲರ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಸೋಮವಾರ ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಮೋಹನ್ ಬಾಬು ಅವರು ಉದ್ಘಾಟಿಸಿ, ಕಾನೂನಿನಡಿಯಲ್ಲಿ ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾನೂನು ಪ್ರಾಧಿಕಾರ ಸಮಿತಿಗಳು ಕಾರ್ಯನಿರ್ವಹಿಸುತ್ತದೆ. ಲೋಕ ಅದಾಲತ್ ಮೂಲಕ ಅನೇಕ ಮಂದಿ ಫಲಾನುಭವಿಗಳಿಗೆ ನ್ಯಾಯ ಸಿಗುವಂತೆ ಮತ್ತು ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ. ಕಾನೂನು ಅರಿವು ಕಾರ್ಯಕ್ರಮವನ್ನು ನೀಡುವ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯವನ್ನು ಕಾನೂನು ಸೇವಾ ಸಮಿತಿ ಮಾಡುತ್ತಿದೆ ಎಂದು ಹೆಳಿದರು.
ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೊಡ್ತುಗುಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಡಿ.ಪಿ., ಹಿರಿಯ ವಕೀಲ ಕೆ.ರವೀಂದ್ರನಾಥ ರೈ ಉಪಸ್ಥಿತರಿದ್ದರು.
ಹಿರಿಯ ನ್ಯಾಯವಾದಿ ದಳ ಸುಬ್ರಾಯ ಭಟ್ ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಕುರಿತು ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಜಗದೀಶ್ ಡಿ.ಪಿ. ಸ್ವಾಗತಿಸಿ, ಪೇನಲ್ ನ್ಯಾಯವಾದಿ ರಂಜಿತ್ ಕುಕ್ಕೆಟ್ಟಿ ವಂದಿಸಿದರು. ಹರೀಶ್ ಬೂಡುಪನ್ನೆ ಕಾರ್ಯಕ್ರಮ ನಿರೂಪಿಸಿದರು.