×
Ad

ಮತದಾನಕ್ಕೆ ನಿರ್ಲಕ್ಷ್ಯ ಸಂವಿಧಾನಕ್ಕೆ ಮಾಡುವ ಅಗೌರವ: ನ್ಯಾ.ಮಲ್ಲಿಕಾರ್ಜುನ ಸ್ವಾಮಿ

Update: 2025-01-25 15:50 IST

ಮಂಗಳೂರು, ಜ.25: ಪ್ರಜಾಪ್ರಭುತ್ವದಲ್ಲಿ ಚುನಾವಣೆ ಒಂದು ಹಬ್ಬವಾಗಿದ್ದು, ಮತದಾನದಲ್ಲಿ ಭಾಗವಹಿಸುವುದು ನಮ್ಮ ಆದ್ಯ ಕರ್ತವ್ಯ. ಮತದಾನ ಮಾಡಲು ನಿರ್ಲಕ್ಷ್ಯ, ಅಸಡ್ಡೆ ವಹಿಸುವುದು ಸಂವಿಧಾನಕ್ಕೆ ಮಾಡುವ ಅಗೌರವ ಎಂದು ತಿಳಿಯಬೇಕಾಗುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಎಚ್.ಎಸ್. ಅಭಿಪ್ರಾಯಿಸಿದ್ದಾರೆ.

ದ.ಕ. ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ನಡೆದ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

 

ಅಂಕಿಅಂಶಗಳ ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 98 ಕೋಟಿ ಮತದಾತರರು ಅರ್ಹತೆ ಪಡೆದಿದ್ದು, ಇದೀಗ ಮತದಾರರ ಸಂಖ್ಯೆ 100 ಕೋಟಿ ದಾಟಿದೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರ ಸಂಖ್ಯೆ 66 ಕೋಟಿ ಜನ ಮಾತ್ರ. ಇದರಲ್ಲಿ ಅಂದಾಜು ಮೂರು ಕೋಟಿಯಷ್ಟು ಜನ ಅನಿವಾರ್ಯ ಕಾರಣಗಳಿಂದ ಮತದಾನದಲ್ಲಿ ಭಾಗವಹಿಸದಿದ್ದರೂ ಉಳಿದ ಸುಮಾರು 30 ಕೋಟಿ ಜನ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ವಿಫಲಾಗಿರುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿದ್ದಾರೆಂದೇ ಭಾವಿಸಬೇಕಾಗುತ್ತದೆ ಎಂದರು.

 

ಬ್ಯಾಂಕ್ ಗಳ ತೊಟ್ಟಿಲಾದ ದ.ಕ. ಜಿಲ್ಲೆ ಪ್ರಪಂಚದ ಪ್ರಮುಖ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಳ್ಳುವಲ್ಲಿ ಜಿಲ್ಲೆಯ ಪೂರ್ವಜರ ಕೊಡುಗೆಯೂ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ಶೇ.77ರಷ್ಟು ಮತದಾನವಾಗಿರುವುದು ಇಲ್ಲಿನ ಜಿಲ್ಲಾಡಳಿತದ ಸಾಧನೆ. ಮುಂದಿನ ಪ್ರತಿಯೊಂದು ಚುನಾವಣೆಗಳಲ್ಲಿಯೂ ಶೇ.90 ಮತದಾನವಾಗುವುದನ್ನು ಯುವ ಜನತೆ ಖಾತರಿಪಡಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞೆಗೈಯ್ಯುವ ಜತೆಗೆ ತಮ್ಮ ಸ್ನೇಹಿತಕರು, ಮನೆಯವರು ಹಾಗೂ ನೆರೆಹೊರೆಯವರನ್ನು ಮತದಾನಕ್ಕೆ ಪ್ರೋತ್ಸಾಹಿಸಬೇಕು ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.

 

ಭಾರತದ ಸಂವಿಧಾನದಲ್ಲಿ ಅಂಗೀಕರಿಸಿದಂತೆ ಸ್ವತಂತ್ರ ಸಂವಿಧಾನಿಕ ಚುನಾವಣಾ ಸಂಸ್ಥೆಯನ್ನು ರಚಿಸಿಕೊಂಡು 2011ವವರೆಗೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುವ ಅಗತ್ಯ ದೇಶದಲ್ಲಿರಲಿಲ್ಲ. ಆದರೆ 2011ರ ಬಳಿಕ ದೇಶದಲ್ಲಿ ಶಿಕ್ಷಿತರು ಜಾಸ್ತಿಯಂತೆ, ಪ್ರಜ್ಞಾವಂತಿಕೆ ಕಡಿಮೆಯಾಯಿತು. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಮತದಾನವಾದರು ಅಧಿಕ ಶಿಕ್ಷಿತರಿರುವ ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಚುನಾವಣೆಯ ನಿಟ್ಟಿನಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿರುವ ಹೊರತಾಗಿಯೂ ಮತಗಟ್ಟೆಗಳು ಅಣತಿ ದೂರದಲ್ಲಿದ್ದರೂ ಪ್ರಜಾತಂತ್ರದಲ್ಲಿ ಭಾಗವಹಿಸಲು ಶಿಕ್ಷಿತ ವರ್ಗವೇ ಹಿಂದೇಟು ಹಾಕುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

 

 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಪಂ. ಸಿಇಒ ಡಾ. ಆನಂದ್ ಮತದಾನ ಕುರಿತಂತೆ ಸೇರಿದ್ದವರಿಗೆ ಪ್ರತಿಜ್ಞೆಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಯುವ ಮತದಾರರಿಗೆ ಮತದಾರರ ಚೀಟಿ ವಿತರಿಸಲಾಯಿತು. ಕಳೆದ ಚುನಾವಣೆಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಗೌರವ ಸಲ್ಲಿಸಲಾಯಿತು.

ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್, ವಾರ್ತಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು.

ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಜವಾಬ್ದಾರಿಯುತ ನಾಗರಿಕರಾಗಿ ಮತದಾನದ ಹಕ್ಕು ಚಲಾಯಿಸಿ

ದೇಶದಲ್ಲಿ 1952ರಲ್ಲಿ ಮೊದಲ ಚುನಾವಣೆ ನಡೆದಾಗ ಇದ್ದ ಮತದಾರರ ಸಂಖ್ಯೆ 17.5 ಕೋಟಿ. ಆದರೆ ಆ ಸಂದರ್ಭ ಶೇ.85ರಷ್ಟು ಅನಕ್ಷರಸ್ಥರಿದ್ದರು. ಮತಗಟ್ಟೆಗಳು ಸೇರಿದಂತೆ ಚುನಾವಣೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳ ಹೊರತಾಗಿಯೂ ಉತ್ತಮ ಮತದಾನವಾಗುತ್ತಿತ್ತು. 2024ರಲ್ಲಿ ಭಾರತವು 100 ಕೋಟಿ ಮತದಾರರ ಮೂಲಕ ವಿಶ್ವದ ಅತೀ ದೊಡ್ಡ ಸಂಖ್ಯೆಯ ಮತದಾರರನ್ನು ಹೊಂದಿರುವ ದೇಶವಾಗಿ ರೂಪು ಪಡೆದಿದೆ. ಇಷ್ಟೆಲ್ಲಾ ಆದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಮತದಾನ ಶೇ.66.65. ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ ಹಾಗೂ ನಮ್ಮ ನಿತ್ಯದ ಬದುಕಿನಲ್ಲಿ ಉತ್ತಮ ಜನಪ್ರತಿನಿಧಿಗಳ ಆಯ್ಕೆಯಿಂದಾಗುವ ಅಂಶಗಳನ್ನು ಅರಿತು ನಮ್ಮ ಜವಾಬ್ದಾರಿಯುತ ನಾಗರಿಕರಾಗಿ ಹಕ್ಕನ್ನು ನಾವು ಚಲಾಯಿಸಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News