×
Ad

ತಾಯಿ, ಶಿಶು ಮರಣ ಪ್ರಮಾಣ ತಗ್ಗಿಸಲು ದ.ಕ.ಜಿಲ್ಲಾಧಿಕಾರಿ ಸೂಚನೆ

Update: 2023-12-07 19:08 IST

ಮಂಗಳೂರು, ಡಿ.7: ದ.ಕ.ಜಿಲ್ಲೆಯಲ್ಲಿ ಪ್ರಸವ ಹಾಗೂ ನಂತರದಲ್ಲಿ ಆರೋಗ್ಯ ಏರುಪೇರಿನಿಂದ ತಾಯಿ ಮತ್ತು ಮಗು ಸಾವಿಗೀಡಾಗುವ ಪ್ರಮಾಣವನ್ನು ತಗ್ಗಿಸಲು ಆರೋಗ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಬಳಸುವಂತೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ ಸೂಚಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ತಾಯಿ ಮತ್ತು ಶಿಶು ಮರಣ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆಗಳು ಮತ್ತು ಸೌಲಭ್ಯಗಳು ಸಾಕಷ್ಟಿವೆ. ಉತ್ತಮ ವೈದ್ಯಕೀಯ ಮಾನವ ಸಂಪನ್ಮೂಲವಿದೆ. ಆರೋಗ್ಯ ವ್ಯವಸ್ಥೆಯು ಜನರಿಗೆ ಸುಲಭವಾಗಿ ತಲುಪುತ್ತಿದೆ. ಆದರೂ ಜಿಲ್ಲೆಯಲ್ಲಿನ ಪ್ರಸವ ನಂತರ ತಾಯಿ ಮತ್ತು ಶಿಶು ಮರಣ ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿ ಎಂದರು.

ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣವು 1000ಕ್ಕೆ 39 ಇದೆ. ರಾಜ್ಯದ ಉಳಿದ ಜಿಲ್ಲೆಗಳಿಗಿಂತ ದ.ಕ.ಜಿಲ್ಲೆಯು ಈ ವಿಚಾರದಲ್ಲಿ ಉತ್ತಮವಾಗಿದೆ. ಪ್ರಸಕ್ತ ವರ್ಷ ಎಪ್ರಿಲ್‌ನಿಂದ ನವೆಂಬರ್‌ವರೆಗೆ ಜಿಲ್ಲೆಯಲ್ಲಿ ಪ್ರಸವ ನಂತರ ತಾಯಿ ಸಾವನ್ನಪ್ಪಿರುವ ಏಳು ಪ್ರಕರಣಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ ಮತ್ತು ಆಸ್ಪತ್ರೆಗಳು, ವೈದ್ಯರು ಸಮನ್ವಯತೆಯಿಂದ ತಾಯಿ ಶಿಶು ಮರಣ ಪ್ರಮಾಣ ತಗ್ಗಿಸಲು ಶ್ರಮಿಸಬೇಕು ಎಂದು ಸೂಚಿಸಿದರು.

ಅವಧಿ ಪೂರ್ವ ಹೆರಿಗೆ, ರಕ್ತದೊತ್ತಡ, ಆರೋಗ್ಯ ವಿತರಣಾ ವ್ಯವಸ್ಥೆ ಮತ್ತು ಸಾಮಾಜಿಕ, ಆರ್ಥಿಕ ಇವೆಲ್ಲವೂ ತಾಯಿ ಮರಣಕ್ಕೆ ಮೂಲ ಕಾರಣಗಳಾಗಿವೆ. ಹೆಚ್ಚಾಗಿ ರಕ್ತಸ್ರಾವ, ಸೋಂಕು ತಗುಲುವಿಕೆ ಮತ್ತು ಅಧಿಕ ರಕ್ತದೊತ್ತಡದ ಅಸ್ವಸ್ಥತೆ, ಛಿದ್ರಗೊಂಡ ಗರ್ಭಾಶಯ, ಹೆಪಟೈಟಿಸ್ ಮತ್ತು ರಕ್ತಹೀನತೆಯಿಂದ ತಾಯಿಯ ಸಾವು ಹೆಚ್ಚಾಗುತ್ತಿದೆ. ತಾಯಂದಿರ ಸಾವುಗಳನ್ನು ಸರಿಯಾದ ನಿರ್ವಹಣೆಯಿಂದ ತಡೆಯಬಹುದು. ಗರ್ಭಧಾರಣೆಯ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ತಾಯಿ ಕಾರ್ಡ್ ಮೂಲಕ ಗರ್ಭಿಣಿಯರು ಮತ್ತು ಕುಟುಂಬದ ಮಾಹಿತಿ ಕಲೆ ಹಾಕಬೇಕು. ಅವರ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು. ತಾಯಿ ಕಾರ್ಡ್ ಮಾಡುವ ವೇಳೆ ಯಾವುದೇ ಸಮಸ್ಯೆಆಗದಂತೆ ಎಚ್ಚರ ವಹಿಸಬೇಕು ಎಂದು ಡಿಸಿ ಸೂಚಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಮತ್ತು ಆರೈಕೆ ಹಾಗೂ ಆರೋಗ್ಯದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕು. ಹೆರಿಗೆಯ ವೇಳೆ ಅಥವಾ ಪೂರ್ವ ಯಾವುದೇ ಸಮಸ್ಯೆಯಾದರೆ ಮೂಡನಂಬಿಕೆಗೆ ಒಳಗಾಗದೆ ವೈದ್ಯರನ್ನು ಸಂಪರ್ಕಿಸಲು ಮಾಹಿತಿ ನೀಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ತಿಮ್ಮಯ್ಯ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ಜೆಸಿಂತಾ, ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾಪ್ರಸಾದ್, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ದೀಪಾ ಪ್ರಭು, ಡಾ.ರಾಜೇಶ್, ಡಾ. ಬದ್ರುದ್ದೀನ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News