×
Ad

ಬೆಂಗಳೂರು ಕಂಬಳದಿಂದ ಕಂಬಳದ ಘನತೆ ವಿಶ್ವವ್ಯಾಪಿಯಾಗಿದೆ-ವಿನಯ ಕುಮಾರ್ ಸೊರಕೆ

Update: 2024-01-28 20:37 IST

ಪುತ್ತೂರು: ಕಂಬಳವು ಜನಪರ ವೀರ ಕ್ರೀಡೆಯಾಗಿದ್ದು, ಒಂದು ಸಂದರ್ಭದಲ್ಲಿ ಕಂಬಳಕ್ಕೆ ಆಪತ್ತು ಎದುರಾದಾಗ ಕಂಬಳ ವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಿತ್ತು. ಜಿಲ್ಲಾ ಸಮಿತಿ ಕಂಬಳಕ್ಕೆ ಮಾನ್ಯತೆ ಸಿಗಬೇಕೆಂಬುವು ಜಿಲ್ಲಾ ಸಮಿತಿಯ ಆಸೆಯಾಗಿತ್ತು. ರೈತರ ಜಾನಪದ ವೀರ ಕ್ರೀಡೆ ಜಗತ್ತಿಗೆ ಪರಿಚಯವಾಗಬೇಕೆಂಬ ಕನಸಿತ್ತು. ಕಂಬಳಕ್ಕೆ ಎದುರಾಗಿದ್ದ ಸಮಸ್ಯೆಗಳನ್ನು ನಿವಾರಿಸಿ, ಅನೇಕ ವರ್ಷಗಳ ಕಂಬಳಾಭಿಮಾನಿಗಳ ಕನಸನ್ನು ನನಸಾಗಿಸುವ ಕೆಲಸ ಶಾಸಕ ಅಶೋಕ್‍ಕುಮಾರ್ ರೈ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆಗಿದೆ. ಬೆಂಗಳೂರು ಕಂಬಳದಿಂದಾಗಿ ಕಂಬಳದ ಘನತೆ ವಿಶ್ವವ್ಯಾಪಿಯಾಗಿದೆ ಎಂದು ಮಾಜಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ಶನಿವಾರ ಬೆಳಿಗ್ಗೆ ಆರಂಭಗೊಂಡ 31ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಪ್ರಯುಕ್ತ ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಕೃಷಿ ಸಂಸ್ಕøತಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಯಾರು ತಡೆಯಲು ಸಾಧ್ಯವಿಲ್ಲ.ಕಂಬಳ ಕ್ರೀಡೆಗೆ ಪೇಟದವರು ಸುಮಾರು 15 ವರ್ಷದಿಂದ ನಿರಂತರ ತೊಂದರೆ ಕೊಟ್ಟಿದ್ದಾರೆ. ಆದರೆ ನಾವು ಯಾವತ್ತೂ ಜಗ್ಗಲಿಲ್ಲ. ಕಂಬಳ ಸಮಿತಿ ಮತ್ತು ನಾವು ಸೇರಿಕೊಂಡು ನಿರಂತರ ಹೋರಾಟ ಮಾಡಿಕೊಂಡು ಬಂದ ಪರಿಣಾಮವಾಗಿ ಸುಪ್ರಿಂ ಕೋರ್ಟ್‍ನಲ್ಲಿ ನಮ್ಮ ಕಂಬಳದ ಪರವಾಗಿ ತೀರ್ಪು ಬಂದಿದೆ. ಸುಪ್ರಿಂ ಕೋರ್ಟ್‍ನಲ್ಲಿ ಯಾರೂ ಅಪಿದವಿತ್ ಹಾಕಲಿಲ್ಲ. ಹಾಗಾಗಿ ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಅಧ್ಯಕ್ಷನಾಗಿ ನಾನೇ ಕಾನೂನು ಹೋರಾಟ ಮಾಡಿದ್ದೆ. ಕೇಂದ್ರ ಸರ್ಕಾರದ ಸುಗ್ರಿವಾಜ್ಞೆ ಮೂಲಕ ಅನುಮತಿ ಕಂಬಳಕ್ಕೆ ಅನುಮತಿ ನೀಡಿದೆ. ನಮ್ಮಿಂದ ಕಂಬಳಕ್ಕೆ ಗೌರವ ಬಂದಿಲ್ಲ ಬದಲಿಗೆ ಕಂಬಳದಿಂದಾಗಿ ಇಂದು ನಮಗೆ ಗೌರವ ಬಂದಿದೆ. ಅದನ್ನು ಉಳಿಸುವ ಕೆಲಸವನ್ನು ಮಾಡಬೇಕಿದೆ ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತಿಲ ಪರಿವಾರದ ಸ್ಥಾಪಕ ಅರುಣ್‍ಕುಮಾರ್ ಪುತ್ತಿಲ, ಚಲನಚಿತ್ರ ನಟಿ ಸೋನು ಗೌಡ, ನಟಿ ನೇಹ ಗೌಡ, ಬಿಗ್‍ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ, ಬ್ಯಾಂಕ ಆಫ್ ಬರೋಡಾದ ರೀಜಿನಲ್ ಮ್ಯಾನೇಜರ್ ದೇವಿಪ್ರಸಾದ್ ಶೆಟ್ಟಿ, ಕಾನತ್ತೂರು ಕ್ಷೇತ್ರದ ಮಾದವನ್ ನಾಯರ್ ಅವರು ಅತಿಥಿಗಳಾಗಿ ಮಾತನಾಡಿದರು.

ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ.ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಬಡಗನ್ನೂರು, ಹೆಚ್ ಮಹಮ್ಮದ್ ಆಲಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆಡೆಂಜಿ, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಉದ್ಯಮಿಗಳಾದ ಉಮೇಶ್ ನಾಡಾಜೆ, ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಶಾಂತಿನಗರ, ನಿಹಾಲ್ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು,ಚಲನಚಿತ್ರ ನಿರ್ಮಾಪಕ ಭೋಜರಾಜ್ ರೈ,ನಾರಾಯಣ ರೈ ಕುಕ್ಕುವಳ್ಳಿ ಮತ್ತಿತರರು ಇದ್ದರು.

ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಸಂಚಾಲಕ ಕೆ.ವಸಂತ ಕುಮಾರ್ ರೈ ದುಗ್ಗಳ ವಂದಿಸಿದರು. ಕಂಬಳ ಸಮಿತಿಯ ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಐವರು ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರದ ಸಾಧಕರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಣಿಸಾಗು ಉಮೇಶ್ ಶೆಟ್ಟಿ (ಕಂಬಳ), ಕೇಶವ ಗೌಡ ಅಮೈ (ಉದ್ಯಮ), ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು (ಧಾರ್ಮಿಕ ಕ್ಷೇತ್ರ), ಜೈಗುರು ಆಚಾರ್ ಹಿಂದಾರ್ (ಹೈನುಗಾರಿಕೆ), ಕಡಬ ಶ್ರೀನಿವಾಸ ರೈ (ಯಕ್ಷಗಾನ) ಅವರನ್ನು ಕೋಟಿಚೆನ್ನಯ ಕಂಬಳ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News