ಮಾದಕ ವಸ್ತುಗಳ ಬಳಕೆಯಿಂದ ಬದುಕು ನಾಶ: ಹರೀಶ ಆಚಾರ್ಯ
ಮಂಗಳೂರು : ಮಾದಕ ವಸ್ತುಗಳ ಬಳಕೆಯು ಯುವ ಜನರ ಜೀವನವನ್ನೇ ನಾಶ ಮಾಡುತ್ತದೆ. ಸಾಮಾಜಿಕವಾಗಿಯೂ ಹಿಂಸಾತ್ಮಕ ಕೃತ್ಯಗಳನ್ನು ಮಾಡುವಂತೆ ಪ್ರೇರೆಪಿಸುವ ಮಾದಕ ದ್ರವ್ಯಗಳಿಂದ ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದು ಸುರತ್ಕಲ್ನ ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ. ಹೇಳಿದ್ದಾರೆ.
ಗೋವಿಂದ ದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ್ದ ರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಕಳ್ಳಸಾಗಣಿಕೆಯ ವಿರುದ್ಧ ಅಂತರ್ರಾಷ್ಟ್ರೀಯ ದಿನದ ಅಂಗವಾಗಿ ನಡೆದ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಕೃಷ್ಣಮೂರ್ತಿ ಪಿ. ಮಾತನಾಡಿ ಯುವ ಜನರು ರಾಷ್ಟ್ರದ ಶಕ್ತಿ. ಯುವ ಶಕ್ತಿಯು ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನುಡಿದರು.
ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಡಾ. ಭಾಗ್ಯಲಕ್ಷ್ಮೀ ಸ್ವಾಗತಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಗ್ರಂಥಪಾಲಕಿ ಡಾ. ಸುಜಾತ ಬಿ , ಉಪನ್ಯಾಸಕಿ ಅಪೇಕ್ಷಾ ಭಂಡಾರಿ, ಕಚೇರಿ ಅಧೀಕ್ಷಕ ವೆಂಕಪ್ಪ ಮೂಲ್ಯ ಉಪಸ್ಥಿತರಿದ್ದರು.