ಪ್ರವಾಸೋದ್ಯಮ ಆಕರ್ಷಣೆಗೆ ಕಾರ್ಯಕ್ರಮಗಳ ಕ್ಯಾಲೆಂಡರ್: ಸ್ಪೀಕರ್ ಯು.ಟಿ.ಖಾದರ್
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಿಸಲು ವಿವಿಧ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಆಯೋಜಿಸಲಾಗುವುದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳನ್ನು ಹಾಗೂ ಉತ್ಸವಗಳನ್ನು ಬಳಸಿಕೊಂಡು ಹೊಸದಾಗಿ ಇನ್ನಷ್ಟು ಕಾರ್ಯಕ್ರಮ ಏರ್ಪಡಿಸಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಬಲ ನೀಡಲಾಗುವುದೆಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಮಾತನಾಡಿ ಪ್ರತಿ ತಿಂಗಳು ಒಂದೊಂದು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಅಂತರಾಷ್ಟ್ರೀಯ ಗಾಳಿಪಟ ಉತ್ಸವ, ಸ್ಟ್ರೀಟ್ಫುಡ್ ಫೆಸ್ಟಿವಲ್, ಪೆಡಲ್ ಫೆಸ್ಟಿವಲ್, ಪುಸ್ತಕ ಪ್ರದರ್ಶನ, ನದಿ ಉತ್ಸವ, ಕರಾವಳಿ ಉತ್ಸವ, ಬೀಚ್ ಉತ್ಸವ, ಮ್ಯಾರಥಾನ್, ಆಟೋಕ್ರಾಸ್ ಮತ್ತಿತರ ಕಾರ್ಯಕ್ರಮ ಗಳನ್ನು ಪ್ರತಿ ತಿಂಗಳು ಏರ್ಪಡಿಸಲಾಗುವುದು ಇದಕ್ಕಾಗಿ ಪ್ರಾಯೋಜಕರು, ಸಂಘಟಕರು ಹಾಗೂ ಶಿಕ್ಷಣ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲಾಗುವುದು ಎಂದರು.
ಪ್ರತಿ ತಿಂಗಳು ಒಂದೊಂದುಕಾರ್ಯಕ್ರಮವನ್ನು ಆಯೋಜಿಸಿ ವಾರ್ಷಿಕಕ್ಯಾಲೆಂಡರ್ರಚಿಸಲಾಗುವುದು.ಪ್ರತಿ ವರ್ಷವೂ ಇದರಂತೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಡಾ.ಆನಂದ್ ಕೆ, ಅಪರ ಜಿಲ್ಲಾಧಿಕಾರಿಡಾ.ಸಂತೋಷ್ ಕುಮಾರ್ ಜಿ ಮತ್ತಿತರರು ಉಪಸ್ಥಿತರಿದ್ದರು.