ನಗರದ ಬೀದಿ ದೀಪಗಳ ತಂತಿಗಳಿಗೆ ಟ್ರಿಪ್ಪರ್ ಅಳವಡಿಸಲು ನಿರ್ದೇಶನ: ದ.ಕ. ಡಿಸಿ ಮುಲ್ಲೈ ಮುಗಿಲನ್
ಮುಲ್ಲೈ ಮುಗಿಲನ್
ಮಂಗಳೂರು, ಜೂ. 27: ನಗರದ ಎಲ್ಲಾ ಬೀದಿ ದೀಪಗಳ ವಿದ್ಯುತ್ ತಂತಿಗಳು ಕಡಿತಗೊಂಡಾಗ ವಿದ್ಯುತ್ ಸಂಪರ್ಕ ಸ್ಥಗಿತ ಗೊಳ್ಳುವ ಟ್ರಿಪ್ಪರ್ ಅಥವಾ ಬ್ರೇಕರ್ ವ್ಯವಸ್ಥೆ ಅಳವಡಿಸಲು ಮೆಸ್ಕಾಂ ಗೆ ನಿರ್ದೇಶನ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಪಾಂಡೇಶ್ವರದ ರೊಸರಿಯೋ ಚರ್ಚ್ ಬಳಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಇಬ್ಬರು ಆಟೋ ಚಾಲಕರು ಪ್ರಾಣ ಕಳೆದು ಕೊಂಡ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಘಟನಾ ಸ್ಥಳದಲ್ಲಿ ಎಲ್ಲಾ ವಿದ್ಯುತ್ ತಂತಿಗಳು ಭೂಗತವಾಗಿವೆ. ಬೀದಿ ದೀಪದ ಒಂದು ಲೈನ್ ಮಾತ್ರ ಆಗಿಲ್ಲ. ಮೆಸ್ಕಾಂ ನ ಎಚ್ ಟಿ ಲೈನ್ ಗಳು ತುಂಡಾದಾಗ ಟ್ರಿಪ್ ಆಗಿ ವಿದ್ಯುತ್ ಸಂಪರ್ಕ ಕಡಿತ ಆಗುತ್ತದೆ. ನಿನ್ನೆಯ ಘಟನೆ ದುರಾದೃಷ್ಟವಶಾತ್ ನಡೆದಿದೆ. ಮುಂದೆ ಇಂತಹಾ ಘಟನೆ ಆಗದಂತೆ ಶೀಘ್ರ ಕ್ರಮ ವಹಿಸಲು ಆದೇಶ ನೀಡಲಾಗಿದೆ. ಎರಡು ದಿನಗಳಲ್ಲಿ ವಿವಿಧ ಇಲಾಖೆಗಳ ತಂಡ ಅಧ್ಯಯನ ನಡೆಸಿ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ವರದಿ ಮಂಡಿಸಿ ತಡೆಯಲು ಸಾಧ್ಯವಾಗುವ ಅನಾಹುತಗಳ ಬಗ್ಗೆ ಕ್ರಮ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.