ಮಾಡೂರು ಶಾಖಾ ಅಂಚೆ ಕಚೇರಿ ಉದ್ಘಾಟನೆ
ಮಂಗಳೂರು, ಫೆ.23: ಅಂಚೆ ಕಚೇರಿಗಳು ಜನ ಸಾಮಾನ್ಯರ ಜೀವನಕ್ಕೆ ಅವಶ್ಯವಾದಂತಹ ಸೇವೆಗಳನ್ನು ಮನೆಬಾಗಿಲಿ ನಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ನೀಡುವ ಮೂಲಕ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ ಮತ್ತು ಬದಲಾದ ಕಾಲ ಘಟ್ಟದಲ್ಲಿ ಅಂಚೆ ಇಲಾಖೆಯ ಜನಸೇವೆ ಅತ್ಯಂತ ಶ್ಲಾಘನೀಯ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕೋಟೆಕಾರಿನ ಮಾಡೂರಿನಲ್ಲಿ ಹೊಸ ಶಾಖಾ ಅಂಚೆ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹೊಸ ಶಾಖಾ ಅಂಚೆ ಕಚೇರಿಯನ್ನು ಉದ್ಘಾಟಿಸಿದ ಕೋಟೆಕಾರು ಪಟ್ಟಣ ಪಂಚಾಯತ್ನ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಇವರು ಅಂಚೆ ಇಲಾಖೆ ವೃದ್ಧರ, ಅಶಕ್ತರ, ಮಹಿಳೆಯರ, ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದು ಮಾಡೂರಿನ ಹೊಸ ಅಂಚೆ ಕಚೇರಿಯ ಸೇವೆಯನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಕೋಟೆಕಾರು ಪಟ್ಟಣ ಪಂಚಾ ಯತ್ ಸರ್ವ ಸಹಕಾರ ನೀಡಲಿದೆ ಎಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಅಂಚೆ ಅಧಿಕ್ಷಕರಾದ ಎಂ ಸುಧಾಕರ ಮಲ್ಯ ಇವರು, ನೂತನ ಮಾಡೂರು ಶಾಖಾ ಅಂಚೆ ಕಚೇರಿಯಲ್ಲಿ ಲಭ್ಯವಾಗುವ ಅಂಚೆ ಸೇವೆಗಳ ಬಗ್ಗೆ ಮಾಹಿತಿ ನೀಡಿ ಮಾಡೂರಿನ ಜನತೆ ಅಂಚೆ ಉಳಿತಾಯ ಖಾತೆಗಳು, ಅಂಚೆ ಜೀವವಿಮೆ, ನಾಗರಿಕ ಕೇಂದ್ರಿತ ಸೇವೆಗಳು, ಆಧಾರ್ ಸೇವೆಗಳು, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಗಳ ಸಂಪೂರ್ಣ ಉಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜಿತ್ ಮಾಡೂರು, ಉದ್ಯಮಿ ಉದಯ್ ಕುಮಾರ್ ಉಪಸ್ಥಿತರಿದ್ದರು.
ಉಪ ಅಂಚೆ ಅಧೀಕ್ಷಕ ಪಿ ದಿನೇಶ್ ಸ್ವಾಗತಿಸಿದರು. ಅಂಚೆ ನಿರೀಕ್ಷಕ ಪ್ರದೀಪ್ ಭಂಡಾರಿ ವಂದಿಸಿದರು, ಸಿದ್ದರಾಮ ಪ್ರಾರ್ಥಿಸಿದರು ದಯಾನಂದ ಕತ್ತಲ್ಸಾರ್ ಕಾರ್ಯಕ್ರಮ ನಿರೂಪಿಸಿದರು. ನೂತನ ಮಾಡೂರು ಶಾಖಾ ಅಂಚೆ ಕಚೇರಿ ಫೆ.24ರಿಂದ ಅಂಚೆ ಸೇವೆಯನ್ನು ನೀಡಲಿದೆ.