×
Ad

ಭಯೋತ್ಪಾದಕರ ದಾಳಿಗೆ ಭದ್ರತಾ ವೈಫಲ್ಯ ಕಾರಣ: ಸುಧೀರ್ ಕುಮಾರ್ ಮುರೋಳಿ ಆರೋಪ

Update: 2025-04-24 18:19 IST

ಕಾಪು : ಕಾಶ್ಮೀರದಂತಹ ಸಾವಿರಾರು ಪ್ರವಾಸಿಗರು ಬರುವ ಪ್ರದೇಶದಲ್ಲಿ ಯಾವುದೇ ಭದ್ರೆತೆ ಇಲ್ಲದೆ ಭಯೋತ್ಪಾದಕರ ದಾಳಿ ನಡೆದಿರುವುದು ಭದ್ರತಾ ವೈಫಲ್ಯ ಕಾರಣ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರಮುಖರಾದ ಸುಧೀರ್ ಕುಮಾರ್ ಮುರೋಳಿ ಆರೋಪಿಸಿದದರು.

ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲೆಯ ಪಕ್ಷದ ವಿವಿಧ ಘಟಕಗಳ ಸಹಭಾಗಿತ್ವದಲ್ಲಿ ಕಾಪು ಪೇಟೆಯಲ್ಲಿ ಗುರುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

2012ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭ ಇಂದಿನ ಪ್ರಧಾನಿ ನರೇಂದ್ರ ಮೋದಿ ಯವರು ಗಡಿ, ಸೈನ್ಯ, ಗುಪ್ತಚರ ಇಲಾಖೆ ನಿಮ್ಮ ಕೈಯಲ್ಲಿದೆ. ಭಯೋತ್ಪಾದಕರಿಗೆ ಶಸ್ತ್ರ, ಹೇಗೆ ನುಸುಳು ತ್ತಾರೆ ಎಂದು ಪ್ರಶ್ನಿಸಿದ್ದರು. ಇಂದು ಮೋದಿಯವರು ಅಧಿಕಾರದಲ್ಲಿದ್ದು, ವರ್ಷ 12 ಆಗಿದೆ. 28 ಜನ ಪಹಲ್ಗಾಮ್‍ನಲ್ಲಿ ಹೇಗೆ ಬಲಿಯಾದರು ಎಂಬುದನ್ನು ಪ್ರಶ್ನಿಸಬೇಕಾಗಿದೆ ಎಂದರು.

ಯುಪಿಎ ಅವಧಿಯಲ್ಲಿ ಆಹಾರ ಭದ್ರತೆ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರ್‍ಟಿಇ, ಉದ್ಯೋಗ ಖಾತ್ರಿ ಸಹಿತ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಆದರೆ ಈಗನ ಎನ್‍ಡಿಎ ನೇತೃತ್ವದ ಕೇಂದ್ರ ಸರಕಾರ ಬೆಲೆ ಏರಿಕೆ ನಡೆಸಿ ವಕ್ಫ್‌ ನಂತಹ ಕಾಯ್ದೆಗಳನ್ನು ತಂದು ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಒಂದೆಡೆ ಕೇಂದ್ರ ಸರ್ಕಾರದಿಂದ ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರಿಗೆ ಬರೆ ಎಳೆಯುತಿದ್ದರೆ ಇತ್ತ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯೇ ವಿಜಯೇಂದ್ರ ನೇತೃತ್ವದ ರಾಜ್ಯ ಬಿಜೆಪಿ ಪ್ರತಿಭಟನೆ ನಡೆಸಿರುವುದು ಉತ್ತಮ ಬೆಳೆವಣಿಗೆ ಎಂದು ಲೇವಡಿ ಮಾಡಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿಪರೀತ ಬೆಲೆಯೇರಿಕೆ ಮಾಡಿರುವುದಲ್ಲದೆ, ಕೊಟ್ಟಂತಹ ಯಾವುದೇ ರೀತಿಯ ಆಶ್ವಾಸನೆಯನ್ನು ಅನುಷ್ಟಾನಕ್ಕೆ ತಂದಿಲ್ಲ. ಕರ್ನಾಟಕ ರಾಜ್ಯದಿಂದ ಜಿಎಸ್‍ಟಿ ಕಾನೂನು ಮುಖಾಂತರ 4.5 ಲಕ್ಷ ಕೋಟಿ ರೂಪಾಯಿ ಸಂಗ್ರಹ ಮಾಡಲಾಗುತ್ತಿದ್ದರೂ, ನಮಗೆ ಬರಬೇಕಾದ 50 ಸಾವಿರ ಕೋಟಿ ರೂಪಾಯಿಯನ್ನು ಕೊಡುತ್ತಿಲ್ಲ. ಇಲ್ಲಿ ಸಂಗ್ರಹವಾಗುವ ಹಣವನ್ನು ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಆರೋಪಿಸಿದರು.

ನೆಲ, ಜಲ, ಸಂಪತ್ತು, ಭಾಷೆಗೆ ವಿರುದ್ಧವಾದ ನಿಲುವು ಕೇಂದ್ರ ಸರ್ಕಾರ ಹೊಂದಿದೆ. ರಾಜ್ಯದಿಂದ 20 ಜನ ಸಂಸದರು ಹಾಗೂ ನಾಲ್ಕೈದು ಕೇಂದ್ರ ಮಂತ್ರಿಗಳಿದ್ದರೂ, ಅನ್ಯಾಯದ ವಿರುದ್ಧ ಯಾರೊಬ್ಬರೂ ಮಾತನಾಡುತಿಲ್ಲ. ಐಟಿ, ಇಡಿ, ಸಿಬಿಐ ದುರ್ಬಳಕೆ ಮಾಡಿ ರಾಜ್ಯ ಸರ್ಕಾರವನ್ನು ಶಿಥಿಲಗೊಳಿಸುವ ಪ್ರಯತ್ನ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ದೂಷಿಸಿದರು.

ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಬೆಲೆ ಏರಿಕೆಯೇ ಬಿಜೆಪಿಯಿಂದ ಜನಸಾಮಾನ್ಯರಿಗೆ ಕೊಡುಗೆಯಾಗಿದೆ. ಈ ಅನ್ಯಾಯದ ವಿರುದ್ಧ ರಾಜ್ಯದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿ ನೀಡಿದೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಪ್ರಮುಖರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್‍ರಾಜ್ ಕಾಂಚನ್, ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಣ್ಣಯ್ಯ ಸೇರಿಗಾರ್, ನರಸಿಂಹ ಮೂರ್ತಿ, ನೀರೆ ಕೃಷ್ಣ ಶೆಟ್ಟಿ, ಮಂಜುನಾಥ್ ಪೂಜಾರಿ, ಶಿವಾಜಿ ಸುವರ್ಣ, ವಿಕ್ರಂ ಕಾಪು, ಸರಸು ಬಂಗೇರ, ರಮೇಶ್ ಕಾಂಚನ್, ರಾಜು ಪೂಜಾರಿ, ಎಂ. ಎ. ಗಫೂರು, ನವೀನವೀನ್‍ಚಂದ್ರ ಜೆ.ಶೆಟ್ಟಿ, ಅಬ್ದುಲ್ ಅಜೀಜ್, ವಿಶ್ವಾಸ್ ಅಮೀನ್, ಶರ್ಫುದ್ದೀನ್ ಶೇಖ್, ನವೀನ್‍ಚಂದ್ರ ಸುವರ್ಣ, ಕೃಷ್ಣ ಶೆಟ್ಟಿ ಬಜಗೋಳಿ, ಕಿರಣ್, ನಿಯಾಝ್ ಪಡುಬಿದ್ರಿ, ಶಾಂತಲತಾ ಶೆಟ್ಟಿ, ಶೇಖರ ಹೆಜ್ಮಾಡಿ, ವೈ ಸುಕುಮಾರ್, ಕಾಂಗ್ರೆಸ್ ಹತ್ತು ಬ್ಲಾಕ್ ಗಳ ಅಧ್ಯಕ್ಷರು, ಪಕ್ಷದ ವಿವಿಧ ಘಟಕಗಳ ಪ್ರಮುಖರು ಉಪಸ್ಥಿತರಿದ್ದರು.

ಪ್ರತಿಭಟನಾ ಜಾಥಾ: ಕೇಂದ್ರ ಬಿಜೆಪಿ ಸರಕಾರದ ಬೆಲೆ ಏರಿಕೆ, ವಕ್ಫ್ ಕಾಯ್ದೆ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪತ್ರಿಕೆಯ ನೆಪದಲ್ಲಿ ಇಡಿ ತನಿಖಾ ಸಂಸ್ಥೆಯನ್ನು ದುರ್ಬಳಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾ ಯಿತು. ಪ್ರತಿಭಟನಾ ಸಭೆಗೂ ಮುನ್ನ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಳದಿಂದ ಕಾಪು ಪೇಟೆಯ ವರೆಗೆ ಜಾಥಾ ನಡೆಯಿತು. ಜಾಥಾದಲ್ಲಿ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿ ಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಜಾಥಾದಲ್ಲಿ ಎತ್ತಿನ ಗಾಡಿಯನ್ನು ಎಳೆದು ತರುವ ಮೂಲಕ ತೈಲ ಬೆಲೆ ಏರಿಕೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಶೃದ್ಧಾಂಜಲಿ: ಸಭಾ ಕಾರ್ಯಕ್ರಮದಲ್ಲಿ ಪಹಲ್ಗಾಮ್ ಮೃತರಿಗೆ ಮತ್ತು ಕ್ರಿಶ್ಚಿಯನ್ ಪರಮೋಚ್ಛ ಗುರು ಪೋಪ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News