×
Ad

ಡಿಸಿಸಿ ಪದಾಧಿಕಾರಿಗಳೊಂದಿಗೆ ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್ ಚರ್ಚೆ

Update: 2025-06-13 21:09 IST

ಮಂಗಳೂರು, ಜೂ.13: ದ.ಕ.ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳ ಕುರಿತು ಕೆಪಿಸಿಸಿ ಉಪಾಧ್ಯಕ್ಷ, ದ.ಕ.ಜಿಲ್ಲಾ ಕೆಪಿಸಿಸಿ ಉಸ್ತುವಾರಿ ಎಂ.ಸಿ ವೇಣುಗೋಪಾಲ್ ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಹಿರಿಯ ನಾಯಕರು, ವಿವಿಧ ಪದಾಧಿಕಾರಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಸದಾ ಅಶಾಂತಿಗೆ ಪ್ರೇರಣೆ ನೀಡುತ್ತಾ ಬಂದಿದೆ. ಸುಳ್ಳುನ್ನು ಸತ್ಯವೆಂದು ಬಿಂಬಿಸಿ ಜನರಲ್ಲಿ ಅಪನಂಬಿಕೆ ಸೃಷ್ಟಿಸಿದೆ. ದ.ಕ. ಜಿಲ್ಲೆಯು ಶಾಂತಿ, ಸೌಹಾರ್ದ ತೆಯ ಜಿಲ್ಲೆಯಾಗಿದ್ದು, ಶಿಕ್ಷಣ, ವೈದ್ಯಕೀಯ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶ್ವವಿಖ್ಯಾತಿ ಪಡೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಪರಾಧ ಕಾರಣಗಳಿಗಾಗಿ ಗುರುತಿಸುತ್ತಿರುವುದು ವಿಪರ್ಯಾಸ. ಇಲ್ಲಿನ ಜನರು ಬುದ್ಧಿವಂತಿಕೆಯನ್ನು ಕೋಮು ಸಂಘರ್ಷಕ್ಕೆ ಉಪಯೋಗಿಸಿಕೊಳ್ಳಬಾರದು. ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರೆ ಬದಲಾವಣೆ ಸಾಧ್ಯ. ಜಿಲ್ಲೆಯ ಶಾಂತಿ ಸೌಹಾರ್ದತೆ ಮರುಸ್ಥಾಪ ನೆಗೆ ಸರಕಾರದ ಗಮನಸೆಳೆಯುವುದಾಗಿ ಹೇಳಿದರು.

ಸಭೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಘಟಕಾಧ್ಯಕ್ಷ ಮನೋರಾಜ್ ರಾಜೀವ ಹಿಂಸೆ ತಡೆಗೆ ನಿರ್ಣಾಯಕ ಕ್ರಮಗಳನ್ನು ಸರಕಾರ ಯಾವ ರೀತಿ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಲಹೆ ನೀಡಿದರು.

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್, ಬ್ಲಾಕ್ ಅಧ್ಯಕ್ಷರಾದ ಜೆ.ಅಬ್ದುಲ್ ಸಲೀಂ, ಸುರೇಂದ್ರ ಕಂಬಳಿ, ರಮೇಶ್ ಶೆಟ್ಟಿ, ಮಾಜಿ ಮೇಯರಾದ ಹರಿನಾಥ್ ಜೋಗಿ, ಕೆ.ಅಶ್ರಫ್, ಡಿಸಿಸಿ ಉಪಾಧ್ಯಕ್ಷರಾದ ಅಬೂಬಕ್ಕರ್ ಕುದ್ರೋಳಿ, ಶುಭೋದಯ ಆಳ್ವ, ನೀರಜ್‌ಚಂದ್ರಪಾಲ್, ಟಿ.ಹೊನ್ನಯ್ಯ ಮುಖಂಡರಾದ ಪಿಯೂಸ್ ರೋಡ್ರಿಗಸ್, ಬೇಬಿ ಕುಂದರ್, ನವೀನ್ ಡಿಸೋಜ, ಜಯಶೀಲ ಅಡ್ಯಂತಾಯ, ಟಿ.ಕೆ. ಸುಧೀರ್, ಎಂ.ಪಿ.ಮನುರಾಜ್, ಕೆ.ಅಪ್ಪಿ, ಜೀತೇಂದ್ರ ಸುವರ್ಣ, ಭರತೇಶ್ ಅಮೀನ್, ಯೋಗೀಶ್ ಕುಮಾರ್, ಗಣೇಶ್ ಪೂಜಾರಿ, ಕಿರಣ್ ಬುಡ್ಲೆಗುತ್ತು, ಸುರೇಶ್ ಪೂಜಾರಿ, ಕವಿತ ವಾಸು, ಯಶವಂತ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

*ಬೆಂಗಳೂರು ಚಿನ್ನಸ್ವಾಮಿ ಮೈದಾನದ ಬಳಿ ಸಂಭವಿಸಿದ ಕಾಲ್ತುಳಿತ ಮತ್ತು ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News