ಸೌಹಾರ್ದತೆಯು ಬದುಕಿನ ಧ್ಯೇಯವಾಗಲಿ: ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ
ಮಂಗಳೂರು : ಸೌಹಾರ್ದತೆಯು ಪ್ರತಿಯೊಬ್ಬರ ಬದುಕಿನ ಮೂಲ ಧ್ಯೇಯವಾಗಬೇಕು. ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳುವ ಸಂದರ್ಭ ಜಾತಿ, ಮತ ತಾರತಮ್ಯವನ್ನು ಮೀರಿ ನಿಂತು ಸಾಧನೆ ಯನ್ನು ಮಾಡಬೇಕು. ಸೌಹಾರ್ದ ಅನ್ನುವುದು ನಮ್ಮ ನಾಡಿನ ಪರಂಪರೆಯಾಗಿದೆ. ಈ ಆಶಯದಂತೆ ಬದುಕು ರೂಪಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದು ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಹೇಳಿದರು.
ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಆಯೋಜಿಸಿದ ರಂಗಚಲನ ತಂಡ ಅಭಿನಯಿಸಿದ ತುಳುನಾಡ ಸೌಹಾರ್ದ ಪರಂಪರೆಯನ್ನು ಬಿಂಬಿಸುವ ಜಾಗ್ರ್ತೆ ನಾಟಕದ ಮೂರನೇ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ನಾಟಕಕಾರ, ಚಲನಚಿತ್ರ ನಟ ಲಕ್ಷ್ಮ್ಮಣ ಕುಮಾರ್ ಮಲ್ಲೂರು, ಸದಾಶಿವ ಅಮೀನ್ ಮಾತನಾಡಿ ಸೌಹಾರ್ದ ಸಂದೇಶವನ್ನು ನಾಟಕದ ಮೂಲಕ ನೀಡಿದಾಗ ಅದು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಲುಪಲಿದೆ ಎಂದರು.
ಸಂತ ಅಲೋಶಿಯಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಂ.ರೆ.ಫಾ.ಜಾನ್ಸನ್ ಪಿಂಟೋ ಎಸ್ಜೆ ಮಾತನಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು.
ಉಪಪ್ರಾಂಶುಪಾಲ ಲ್ಯಾನ್ಸಿ ಡಿಸೋಜ ವಂದಿಸಿದರು. ಶಿಕ್ಷಕಿ ಫೆಲ್ಸಿ ಲೋಬೋ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.