ಬಂಟ್ವಾಳ: ಜಮೀಯ್ಯತುಲ್ ಫಲಾಹ್ ನ ನೂತನ ಕಚೇರಿ ಉದ್ಘಾಟನೆ
ಬಂಟ್ವಾಳ: ಕರಾವಳಿಯ ಉಭಯ ಜಿಲ್ಲೆಗಳ ಸಮುದಾಯದ ಶೈಕ್ಷಣಿಕ ಸಬಲೀಕರಣದಲ್ಲಿ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಪಾತ್ರ ಮಹತ್ತರವಾದುದು. ಆದುದರಿಂದಲೇ ಇಂದು ಸಹಸ್ರಾರು ವಿದ್ಯಾರ್ಥಿಗಳು ಶಾಲಾ ಕಾಲೇಜು ಶಿಕ್ಷಣದ ಕಡೆಗೆ ಆಸಕ್ತರಾದುದು ಗಮನಾರ್ಹ ಬೆಳವಣಿಗೆ ಎಂದು ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಅಭಿಪ್ರಾಯಪಟ್ಟರು.
ಅವರು ಸಂಸ್ಥೆಯ- ಮೆಲ್ಕಾರಿನ ಗೋಲ್ಡನ್ ಸಿಟಿ ಸಂಕೀರ್ಣದಲ್ಲಿ ಬಂಟ್ವಾಳ ಘಟಕದ ನೂತನ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ರಶೀದ್ ವಿಟ್ಲ ಮಾತನಾಡಿ, 1988ರಲ್ಲಿ ಆರಂಭವಾದ ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕವು ಸ್ವಂತ ಕಚೇರಿ ಹೊಂದಬೇಕೆಂಬ ಅಭಿಲಾಷೆಯನ್ನು ಅನೇಕ ಸಮಯದಿಂದ ಹೊಂದಿತ್ತು. ಅದು ಈಗ ಈಡೇರಿದೆ. ಇದಕ್ಕೆ ಸಹಕರಿಸಿದ ದಾನಿಗಳ ನೆರವನ್ನು ಅವರು ಸ್ಮರಿಸಿದರು.
ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಅಬೂ ಸ್ವಾಲಿಹ್ ಮುಸ್ಲಿಯಾರ್ ದುಆಗೈದರು. ಜಮೀಯ್ಯತುಲ್ ದ.ಕ .ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್, ನಾಮಫಲಕ ಅನಾವರಣಗೊಳಿಸಿದರು, ಜುಬೈಲ್ ಘಟಕದ ಅಧ್ಯಕ್ಷ, ಎನ್ನಾರ್ಸಿಸಿ ಮಾಜಿ ಅಮೀರ್ ಫಾರೂಕ್ ಪೋರ್ಟ್ ವೇ ಕಾನ್ಫರೆನ್ಸ್ ಕೊಠಡಿ ಉದ್ಘಾಟಿಸಿದರು, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಅರ್ಜುನ್ ಭಂಡಾರ್ಕರ್ 'ಚೈತನ್ಯ' ಸಂಚಿಕೆ ಬಿಡುಗಡೆಗೊಳಿಸುವರು.
ಆಜೀವ ಸದಸ್ಯ, ಪಿಡಬ್ಲ್ಯುಡಿ ಗುತ್ತಿಗೆದಾರ ಉಮರ್ ಹಾಜಿ ರಾಜ್ ಕಮಲ್, ಜೆದ್ದಾ ಘಟಕದ ಅಶ್ಫಾಕ್ ಅತಿಥಿಗಳಾಗಿ ಭಾಗವಹಿಸಿದ್ದರು
ಇದೇ ವೇಳೆ ಮೆಲ್ಕಾರಿನ ಗೋಲ್ಡನ್ ಸಿಟಿ ಕಾಂಪ್ಲೆಕ್ಸ್ ನಲ್ಲಿ ಸುಮಾರು 500 ಚದರ ಅಡಿ ವಿಸ್ತೀರ್ಣದ ಸ್ಥಳವನ್ನು ಸಂಸ್ಥೆಗೆ ದಾನ ನೀಡಿದ ಘಟಕದ ಪೂರ್ವಾಧ್ಯಕ್ಷರಾದ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಮುಹಮ್ಮದ್ ರಫೀಕ್ ಹಾಜಿ ಆಲಡ್ಕ, ಘಟಕಕ್ಕೆ ಎರಡು ದಶಕಗಳಿಂದ ಕಚೇರಿಯನ್ನು ಉಚಿತವಾಗಿ ನೀಡಿ ಸಹಕರಿಸಿದ ಕೋಶಾಧಿಕಾರಿ ಎಂ.ಎಚ್.ಇಕ್ಬಾಲ್, 2023-25ನೇ ಸಾಲಿನಲ್ಲಿ ಸಂಸ್ಥೆಯ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದ ಘಟಕಾಧ್ಯಕ್ಷ ರಶೀದ್ ವಿಟ್ಲರನ್ನು ಸನ್ಮಾನಿಸಲಾಯಿತು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ಲತೀಫ್ ನೇರಳಕಟ್ಟೆ, ಶೇಕ್ ರಹ್ಮತುಲ್ಲಾ ಕಾವಳಕಟ್ಟೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ನೋಟರಿ ಅಬೂಬಕರ್ ವಿಟ್ಲ , ಬಿ.ಎಂ. ಅಬ್ಬಾಸ್ ಅಲಿ ಬೋಳಂತೂರು, ಆಸಿಫ್ ಇಕ್ಬಾಲ್ ಫರಂಗಿಪೇಟೆ, ಪಿ.ಮುಹಮ್ಮದ್ ಪಾಣೆಮಂಗಳೂರು, ಮುಹಮ್ಮದ್ ನಾರಂಗೋಡಿ, ಅಬ್ದುಲ್ ಹಕೀಂ ಕಲಾಯಿ, ಬಿ.ಎಂ.ತುಂಬೆ ಉಪಸ್ಥಿತರಿದ್ದರು.
ಬಿ.ಎ.ಮುಹಮ್ಮದ್ ಬಂಟ್ವಾಳ ಕಿರಾಅತ್ ಪಠಿಸಿದರು, ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.