ಸಂಶೋಧನೆ ಯಶಸ್ಸನ್ನು ಕಾಣಲು ತಾಳ್ಮೆ, ಕಠಿಣ ಪರಿಶ್ರಮ ಅಗತ್ಯ: ರಾಮಚಂದ್ರರಾವ್
ಮಂಗಳೂರು: ಯಾವುದೇ ಸಂಶೋಧನೆಯ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬೇಕಾದರೆ ಆ ಸಂಶೋಧನಾ ಕಾರ್ಯದ ಹಿಂದೆ ನಮ್ಮ ತಾಳ್ಮೆ, ಉತ್ಸಾಹ, ಕಠಿಣ ಪರಿಶ್ರಮ ಪ್ರಮುಖ ಪಾತ್ರವಹಿಸುತ್ತದೆ. ವಿಜ್ಞಾನ ಹಾಗೂ ಇಂದಿನ ಆಧುನಿಕ ತಂತ್ರಜ್ಞಾನ ಗಳ ಕ್ಷೇತ್ರಗಳಲ್ಲಿ ಯುವಸಮುದಾಯ ಹೆಚ್ಚೆಚ್ಚು ತೊಡಗಿಸಿಕೊಂಡು ಹೊಸಹೊಸ ಆವಿಷ್ಕಾರದೊಂದಿಗೆ ಸಮಾಜಕ್ಕೆ ತಮ್ಮದೇಆದ ಕೊಡುಗೆ ನೀಡಬೇಕಿದೆ ಎಂದು ಐಐಟಿಎಂ ಚೆನ್ನೈ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಎ.ಎಸ್.ರಾಮಚಂದ್ರರಾವ್ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆಯಲಿರುವ ’ಭೌತಶಾಸ್ತ್ರ ಮತ್ತು ನ್ಯಾನೋ ತಂತ್ರಜ್ಞಾನ’ ಎಂಬ ವಿಷಯದಲ್ಲಿ ಮೂರುದಿನಗಳ ಅಂತರ್ರಾಷ್ಟ್ರೀಯ ಸಮ್ಮೇಳನಕ್ಕೆ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು. ಮುಂದಿನ ಮೂವತ್ತು ವರ್ಷಗಳು ನ್ಯಾನೋತಂತ್ರಜ್ಞಾನ ಕ್ಷೇತ್ರಗಳ ಮೂಲಕ ಅಮೂಲಾಗ್ರ ಬದಲಾವಣೆಯಾಗಲಿದೆ ಹಾಗೂ ಅನೇಕ ಅವಕಾಶಗಳ ವಿಸ್ತರಣೆಯಾಗಲಿದೆ ಎಂದರು.
ಮಂಗಳೂರು ವಿವಿಪ್ರಭಾರ ಕುಲಪತಿ ಪ್ರೊ.ಜಯರಾಜ್ಅಮೀನ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಂದು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರವು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಭೌತಶಾಸ್ತ್ರ ಮತ್ತು ನ್ಯಾನೋಟೆಕ್ನಾಲಜಿ ಎಂಬ ಮಹತ್ವದ ವಿಷಯದಲ್ಲಿ ಮಂಗಳೂರು ವಿವಿಯ ಭೌತಶಾಸ್ತ್ರ ವಿಭಾಗವು ಮೂರುದಿನಗಳ ಅಂತರ್ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸಿದ್ದು, ಅನೇಕ ಹೊಸ ಆವಿಷ್ಕಾರ ಮತ್ತು ಬೆಳವಣಿಗೆಗೆ ಈ ಸಮ್ಮೇಳನ ಸಾಕ್ಷಿಯಾಗಲಿ ಎಂದರು.
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಎಂ.ವಿ.ಎನ್.ಅಂಬಿಕಾ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಂಗಳೂರು ವಿವಿಭೌತಶಾಸ್ತ್ರ ವಿಭಾಗದ ಅಧ್ಯಕ್ಷರು ಹಾಗೂ ವಿವಿಹಣಕಾಸು ಅಧಿಕಾರಿ ಪ್ರೊ.ವೈಸಂಗಪ್ಪಸ್ವಾಗತಿಸಿದರು.ಸಮ್ಮೇಳನದ ಸಂಚಾಲಕ ಪ್ರೊ.ದೇವೆಂದ್ರಪ್ಪವಂದಿಸಿದರು. ರಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಸಮ್ಮೇಳನದಲ್ಲಿ ವಿವಿಧ ಸಂಸ್ಥೆಗಳ ಸುಮಾರು 250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, ವಿವಿಧ ದೇಶಗಳ ಒಟ್ಟು 14 ಅಂತರ್ ರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಷಯತಜ್ಞರು ಭೌತಶಾಸ್ತ್ರ ಹಾಗೂ ನ್ಯಾನೋತಂತ್ರಜ್ಞಾನದ ಕ್ಷೇತ್ರದ ವಿಷಯ ಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಗುರುವಾರದದಂದು ವಿವಿಧ ಸಂಪನ್ಮೂಲ ವ್ಯಕ್ತಿಗಳ ವಿಶೇಷ ಉಪನ್ಯಾಸಗಳ ಬಳಿಕ ಯಕ್ಷಗಾನ, ಭರತನಾಟ್ಯ ಹಾಗೂ ಇತರ ನೃತ್ಯಪ್ರಕಾರಗಳ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಿತು.