×
Ad

ಸೌದಿ ಅರಬಿಯಾದಲ್ಲಿ ರಸ್ತೆ ಅಪಘಾತ: ಉಳ್ಳಾಲದ ಯುವಕ ಮೃತ್ಯು

Update: 2025-09-15 12:04 IST

ಉಳ್ಳಾಲ: ಸೌದಿ ಅರಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಉಳ್ಳಾಲ ಮಿಲ್ಲತ್ ನಗರದ ನಿವಾಸಿಯಾಗಿರುವ ಯುವಕನೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತರನ್ನು ಮಿಲ್ಲತ್ ನಗರ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ರಾಝಿಕ್ (27) ಎಂದು ಗುರುತಿಸಲಾಗಿದೆ

ಅಬ್ದುಲ್ ರಾಝಿಕ್ ಸೌದಿ ಅರೇಬಿಯಾದಲ್ಲಿ ಕೆಲಸದ ನಿಮಿತ್ತ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸೌದಿ ಅರೇಬಿಯಾದ ಜುಬೈಲ್ ನ ಪಾಲಿಟೆಕ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್ ರಾಝಿಕ್ ಸೆ.14ರಂದು ಸಂಜೆ ರಾತ್ರಿ ಪಾಳಿ ಕೆಲಸಕ್ಕೆಂದು ಬಸ್ ನಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ. ಇವರು ಸಂಚರಿಸುತ್ತಿದ್ದ ಬಸ್ಸಿಗೆ ಇನ್ನೊಂದು ಬಸ್ ಢಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ರಾಝಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮುಹಮ್ಮದ್ ರ ಕೊನೆಯ ಪುತ್ರರಾಗಿರುವ ರಾಝಿಕ್, ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ವಿದೇಶಕ್ಕೆ ತೆರಳಿದ್ದರು. ಸೌದಿ ಅರಬಿಯಾದ ಜುಬೈಲ್ ನಲ್ಲಿ ಪಾಲಿಟೆಕ್ ಎಂಬ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಅವರು, ಕಳೆದ ಜುಲೈ 11ರಂದು ಊರಿಗೆ ಬಂದಿದ್ದರು. ಒಂದು ತಿಂಗಳ ರಜೆ ಮುಗಿಸಿ ಆಗಸ್ಟ್ 15ರಂದು ಎರಡನೇ ಬಾರಿ ವಿದೇಶಕ್ಕೆ ತೆರಳಿದ್ದರು.

ರಾಝಿಕ್ ಅವರ ಓರ್ವ ಸಹೋದರ ಹಾಗೂ ಓರ್ವ ಸಹೋದರಿ ಅನಾರೋಗ್ಯ ನಿಮಿತ್ತ ಈ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೃತರು ತಂದೆ ತಾಯಿ, ಮೂವರು ಸಹೋದರಿಯರು, ಒಬ್ಬ ಸಹೋದರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News