×
Ad

2040ಕ್ಕೆ ನಗರ ಶೇ. 30 ಹಸಿರೀಕರಣದ ಗುರಿ: ಮುಲ್ಲೈ ಮುಗಿಲನ್

Update: 2025-04-21 14:09 IST

ಮಂಗಳೂರು, ಎ. 21: ನಗರ ವ್ಯಾಪ್ತಿಯಲ್ಲಿ 2023ರಲ್ಲಿ ನಡೆದ ಮರಗಳ ಸಮೀಕ್ಷೆ ಪ್ರಕಾರ ನಗರವು ಶೇ. 6.24 ರಷ್ಟು ಮಾತ್ರವೇ ಹಸಿರೀಕರಣದಿಂದ ಕೂಡಿದ್ದು, ಅದನ್ನು 2040ರ ವೇಳೆಗೆ ಶೇ. 30ಕ್ಕೇರಿಸಲು ‘ಅಮರ’ ನಗರ ಹಸಿರೀಕರಣ ಅಭಿಯಾನದ ಮೂಲಕ ಕ್ರಮ ವಹಿಸಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಸೋಮವಾರ ‘ಅಮರ’ ನಗರ ಹಸಿರೀಕರಣ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಗರದಲ್ಲಿ ಮರ ಸಮೀಕ್ಷೆಯ ಸಂದರ್ಭ ಗುರುತಿಸಲಾದ 19000 ಮರಗಳನ್ನು ಸಂಕ್ಷಿಸುವುದು ಹಾಗೂ ಜಾಗ ಇರುವಲ್ಲಿ ಸೂಕ್ತ ಮರಗಳನ್ನು ಬೆಳೆಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಅಮರ ಅಭಿಯಾನದಡಿ ಈಗಿರುವ ಮರಗಳನ್ನು ಸಂರಕ್ಷಿಸಿ ಪೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ಇತರರ ಪಾಲ್ಗೊಳ್ಳುವಿಕೆಗೆ ಪೂರಕವಾಗಿ ‘ಮರಗಳ ದತ್ತುಪಡೆಯುವ’ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇದರ ಜತೆಯಲ್ಲೇ ಮುಂದಿನ ಹಂತವಾಗಿ ಎಲ್ಲಿ ಮರಗಳನ್ನು ಬೆಳೆಸಬಹುದು ಎಂಬ ಬಗ್ಗೆ ಜಾಗಗಳನ್ನು ಗುರುತಿಸಲಾಗುತ್ತದೆ ಎಂದವರು ಹೇಳಿದರು.

ಈ ಅಭಿಯಾನದಡಿ ವಾರ್ಡ್‌ಗೆ 500ರಂತೆ ಸುಮಾರು 30000 ಮರಗಳನ್ನು ನೆಡುವ ಜತೆಗೆ 50 ಸಾವಿರದಿಂದ 1 ಲಕ್ಷದವರೆಗೆ ಮ್ಯಾಂಗ್ರೋವ್ಸ್‌ಗಳನ್ನು ನೆಡುವ ಬಗ್ಗೆಯೂ ಕ್ರಮ ವಹಿಸಲಾಗಿದೆ. ಗುರುತಿಸಲಾದ ಮರಗಳಿಗೆ ಜಿಯೋ ಟ್ಯಾಗಿಂಗ್ ಜತೆಗೆ ಮೇಲ್ವಿಚಾರಣೆಯೂ ನಡೆಯಲಿದೆ. ನಗರದ ರಸ್ತೆಗಳ ವಿಭಜಕಗಳಲ್ಲಿಯೂ ಗಿಡಗಳನ್ನು ಬೆಳೆಸಿ ಬಳಕೆಯಾದ ನೀರನ್ನು ಬಳಸಿ ಅವುಗಳ ಪೋಷಣೆಗೆ ಕ್ರಮ ವಹಿಸಲಾಗುವುದು. ಸಮಗ್ರ ಪಾಲುದಾರಿಕೆಯ ಮೂಲಕ ಮುಂದಿನ ಹಂತದಲ್ಲಿ ಆ ಮರಗಳ ನಿರ್ವಹಣೆಯೂ ಮುಂದಿನ ಹಂತದಲ್ಲಿ ಆಗಲಿದೆ. ಎನ್‌ಸಿಸಿ, ಎನ್‌ಎಸ್‌ಎಸ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಕೆಎಸಂಪಿಸಿಬಿ, ಕ್ರೆಡೈ, ಎನ್‌ಜಿಒಗಳು, ನಾಗರಿಕರ ಸಹಭಾಗಿತ್ವದಲ್ಲಿ ಈ ಕಾರ್ಯಗಳು ನಡೆಯಲಿವೆ ಎಂದವರು ಹೇಳಿದರು.

ಕಾರ್ಯಕ್ರಮದ ರುವಾರಿ, 2023ರಲ್ಲಿ ನಗರದ ಮರ ಸಮೀಕ್ಷೆ ನಡೆಸಿರುವ ಡಾ. ಸ್ಮಿತಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಮರಗಳು ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ನಮ್ಮ ಈ ಪೀಳಿಗೆಯು ಹಿಂದಿನಿಂದ ನಮಗೆ ಬಳುವಳಿಯಾಗಿ ಬಂದಿರುವ ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕೆ ಪ್ರಸಕ್ತ ದಿನಗಳಲ್ಲಿ ವಾತಾವರಣದಲ್ಲಿ ಬಿಸಿ ಹವೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಗೆ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಪರಿಸರದ ಮೇಲಿನ ನಮ್ಮ ಋಣವನ್ನು ತೀರಿಸಬೇಕು. ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಿದರೆ ನಾವು ಸಫಲರಾಗುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಮರ ಅಭಿಯಾನದಡಿ ಮರಗಳ ದತ್ತು ಪಡೆಯುವ ಅಧಿಕೃತ ಆ್ಯಪ್‌ಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಡಿಸಿಎಫ್ ಆ್ಯಂಟನಿ ಮರಿಯಪ್ಪ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ, ಸಿಎಫ್‌ಎಎಲ್‌ನ ವಿಜಯ್ ಮೊರಾಸ್, ಡಾ. ಕೆ.ಆರ್. ಚಂದ್ರಶೇಖರ್, ಅರವಿಂದ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

ಸಿಎಫ್‌ಎಎಲ್‌ನ ಸಂಶೋಧನಾ ಸಹಾಯಕಿ ರಶ್ಮಿ ಕೆ. ಕಾರ್ಯಕ್ರಮ ನಿರೂಪಿಸಿದರು.

‘ಎಲ್ಲಾ ವ್ಯವಸ್ಥೆಗಳನ್ನು ಕ್ರೋಢೀಕರಿಸಿಕೊಂಡು ಭವಿಷ್ಯಕ್ಕಾಗಿ ಪ್ರಕೃತಿ ಉಳಿಸಿ ಅದರ ಜತೆ ಬೆಳೆಯಬೇಕಾದ ಅನಿವಾರ್ಯತೆ ನಮ್ಮದು. ಈ ನಿಟ್ಟಿನಲ್ಲಿ ಎಲ್ಲಿ, ಹೇಗೆ ಮರಳನ್ನು ಸಂರಕ್ಷಿಸುವುದು ಹಾಗೂ ಬೆಳೆಸುವುದು ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಲುಪಬೇಕಾಗಿದೆ’ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

‘ಅಮರ’ ನಗರ ಹಸಿರೀಕರಣ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದ್ದು, ಎ. 30ರಿಂದ ವಾರ್ಡ್‌ಗಳ ದತ್ತು ಪ್ರಕ್ರಿಯೆ, ಜೂ. 5ರಂದು ವಿಶ್ವ ಪರಿಸರ ದಿನದಂದು ಗಿಡ ವಿತರಣೆ ಮತ್ತು ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಆ. 15ರಂದು ಒಟ್ಟು ಕಾರ್ಯಕ್ರಮದ ಸಮಗ್ರ ವರದಿಯನ್ನು ಸಲ್ಲಿಸಲಾಗುವುದು ಎಂದು ಡಾ. ಸ್ಮಿತಾ ಹೆಗ್ಡೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News