ಎಲ್ಲೆಂದರಲ್ಲಿ ತ್ಯಾಜ್ಯ ಎಸೆದರೆ ಬೀಳುತ್ತೆ ದಂಡ: ನಗರ ಸ್ವಚ್ಛತೆ ಕಡೆಗಣಿಸದಂತೆ ಮನಪಾ ಎಚ್ಚರಿಕೆ
ಮಂಗಳೂರು, ಆ. 23: ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆ ಬದಿ ಎಲ್ಲೆಂದರಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆಯುತ್ತಿರು ವುದನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಮಹಾನಗರ ಪಾಲಿಕೆ ಕಸ ಎಸೆಯುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಿದೆ.
ಬುಧವಾರ ನಗರದ ಮಣ್ಣಗುಡ್ಡ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ರಾಶಿ ಹಾಕಿರುವವರ ಮೇಲೆ ಘನತ್ಯಾಜ್ಯ ನಿರ್ವಹಣೆ ಉಪವಿಧಿ ಉಲ್ಲಂಘನೆ ಪ್ರಕರಣದಡಿ ದಂಡ ವಿಧಿಸಿ 4000 ರೂ. ಮೊತ್ತ್ತವನ್ನು ವಸೂಲಿ ಮಾಡಲಾಗಿರುತ್ತದೆ. ಇನ್ನು ಮುಂದೆ ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಎಚ್ಚರ ವಹಿಸುವಂತೆ ಮನಪಾ ಪ್ರಕಟನೆ ತಿಳಿಸಿದೆ.
ನಗರದ ವಿವಿಧ ಸ್ಥಳಗಳಲ್ಲಿ ತ್ಯಾಜ್ಯಗಳ ಬ್ಲ್ಯಾಕ್ ಸ್ಪಾಟ್ಗಳು ಉಂಟಾಗಿ ನಗರದ ಸೌಂದರ್ಯಕ್ಕೆ ಹಾಗೂ ಸ್ವಚ್ಚತೆಗೆ ದಕ್ಕೆ ಉಂಟಾಗುತ್ತಿದೆ. ಈ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಹಾಗೂ ಸೌಂದರ್ಯಕ್ಕೆ / ಸ್ವಚ್ಚತೆಗೆ ದಕ್ಕೆ ತರು ವವರ ವಿರುದ್ಧ ದಂಡ ವಿಧಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಂಡ ವಿಧಿಸುವ ಪ್ರಕ್ರಿಯೆ ನಡೆಸುತ್ತಿರುವುದಾಗಿ ಮನಪಾ ಪ್ರಕಟನೆ ತಿಳಿಸಿದೆ.