×
Ad

ಪಿಲಿಕುಳದಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಂಡ ಹುಲಿಮರಿಗಳು

► ಹುಲಿಮರಿಗಳಿಗೆ ನಾಮಕರಣ ► ದತ್ತು ಸ್ವೀಕಾರ

Update: 2025-12-21 19:06 IST

ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರವಿವಾರ ಎರಡು ಹುಲಿ ಮರಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಬಿಡುಗಡೆ ಮಾಡಲಾಯಿತು.

ದ.ಕ. ಜಿಲ್ಲಾಧಿಕಾರಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದರ್ಶನ್ ಎಚ್.ವಿ ಹಾಗೂ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರ್ವಡೆ ವಿನಾಯಕ ಕಾರ್ಬಾರಿ ಅವರು ಜಂಟಿಯಾಗಿ ಸಾರ್ವಜನಿಕ ವೀಕ್ಷಣೆಗೆ ಹುಲಿಮರಿಗಳನ್ನು ಮುಕ್ತಗೊಳಿಸಿದರು.

ಹುಲಿಮರಿಗಳನ್ನು ಕಾರ್ಡಿಯೋಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಇಂಡಿಯಾದ ಸಂಸ್ಥೆಯು ಒಂದು ವರ್ಷದ ಅವಧಿಗೆ ಎಂಟು ಲಕ್ಷ ರೂ.ಗಳಿಗೆ ಇದೇ ಸಂದರ್ಭದಲ್ಲಿ ದತ್ತು ನೀಡಲಾಯಿತು.

ಪಿಲಿಕುಳದಲ್ಲಿ ಜನಿಸಿದ ‘ರಾಣಿ ’ಹೆಣ್ಣುಹುಲಿಯ ಎರಡು ಮರಿ(ಒಂದು ಹೆಣ್ಣು ಮತ್ತು ಒಂದು ಗಂಡು) ಒಂದು ವರ್ಷ ಕಾಲ ಮೃಗಾಲಯದ ಪ್ರತ್ಯೇಕ ಗೂಡಿನಲ್ಲಿ ಸಾಕಲಾಗಿದೆ.

ದತ್ತು ಸ್ವೀಕಾರಕ್ಕೆ ನನಗೆ ಅವಕಾಶ ಕೊಡಿ : ಡಿಸಿ

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ತಮ್ಮ ಬಾಲ್ಯ ಕಾಲವನ್ನು ನೆನಪಿಸಿಕೊಂಡು ಕಾಡಿನ ,ಕಾಡು ಪ್ರಾಣಿಗಳ ಜೊತೆಗಿನ ಒಲವು ಮತ್ತು ಒಡನಾಟ ಸ್ಮರಿಸಿದರು.

ಹುಲಿ ತನ್ನ ನೆಚ್ಚಿನ ಕಾಡುಪ್ರಾಣಿಯಾಗಿದ್ದು, ಮುಂದಿನ ಹುಲಿ ಮರಿಯನ್ನು ದತ್ತು ಸ್ವೀಕರಿಸುವ ಅವಕಾಶವನ್ನು ತಮಗೆ ನೀಡಬೇಕೆಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ವಿನಂತಿಸಿದರು.

*ಟೆನ್ನಿಸನ್ , ಒಲಿವರ್: ಕಾರ್ಡೊಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್‌ನ ಪ್ರಧಾನ ವ್ಯವಸ್ಥಾಪಕ ದಿವಾಕರ್ ಕದ್ರಿ ಅವರು ಹುಲಿಮರಿಗಳನ್ನು ದತ್ತು ಸ್ವೀಕರಿಸಿ, ಹೆಣ್ಣು ಹುಲಿ ಮರಿಗೆ ‘ಟೆನ್ನಿಸನ್’ ಎಂದೂ ಗಂಡು ಹುಲಿ ಮರಿಗೆ ‘ಒಲಿವರ್’ ಎಂದು ನಾಮಕರಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ ವನ್ಯಜೀವಿ ಸಂಘರ್ಷವನ್ನು ಸಮರ್ಪಕವಾಗಿ ನಿಭಾಯಿಸಲು ಮನುಷ್ಯ ಹುಲಿಯ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹುಲಿ ಸಂರಕ್ಷಣೆ ಎಲ್ಲರ ಜವಾಬ್ದಾರಿ ಯಾಗಿದೆ ಎಂದರು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ ಎನ್ ಮಾತನಾಡಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಜೈವಿಕ ಉದ್ಯಾನವನದ ಸಮರ್ಥ ನಿರ್ವಹಣೆಗೆ ಮತ್ತು ಅಭಿವೃದ್ಧಿಗೆ ದಿವಾಕರ್ ಕದ್ರಿಯವರಂತಹ ಸಹೃದಯಿ ಉದ್ಯಮಿಗಳ ಸಹಕಾರ ಹಾಗೂ ಬೆಂಬಲ ಅಗತ್ಯವಿದೆ ಎಂದು ತಿಳಿಸಿದರು

ಕೆನರಾ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಸಿಂಘೈ ,ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿ ಕಾರಿ ಡಾ.ಅಶೋಕ್ ಕೆ.ಆರ್ , ಉಪಸಮಿತಿ ಅಧ್ಯಕ್ಷ ಡಾ.ಶ್ರೀನಿಕೇತನ್ , ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ ಕೆ.ವಿ ರಾವ್, ಕರಕುಶಲ ಗ್ರಾಮದ ಯೋಜನಾಧಿಕಾರಿ ಡಾ.ನಿತಿನ್, ಪಿಲಿಕುಳ ಜೈವಿಕ ಉದ್ಯಾನವನದ ವೈದ್ಯಾಧಿಕಾರಿ ಡಾ.ದಿವ್ಯಾ ಗಣೇಶ, ಸಹಾಯಕ ಇಂಜಿನಿಯರ್ ರಾಕೇಶ್.ಡಿ ಪಿ , ಶೈಕ್ಷಣಿಕ ಅಧಿಕಾರಿ ಸುಚಿತ್ರ .ಎನ್ ಉಪಸ್ಥಿತರಿದ್ದರು.

ಜೈವಿಕ ಉದ್ಯಾನವನದ ನಿರ್ದೇಶಕ ಪ್ರಶಾಂತ್ ಕುಮಾರ್ ಪೈ ಸ್ವಾಗತಿಸಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸಮುದಾಯ ಸಂಘಟಕ ಶಿವರಾಮ್ ನಾಯಕ್ ವಂದಿಸಿದರು. ಜೈವಿಕ ಉದ್ಯಾನವನದ ಜೀವ ಶಾಸ್ತ್ರಜ್ಞ ಪ್ರಶಾಂತ್ ಉಪ್ಪಂಗಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News