ಹಿಂಸೆ ಪರಿಹಾರವಲ್ಲ, ಶಾಂತಿ ಕಾಪಾಡಲು ಜಮಾಅತೇ ಇಸ್ಲಾಮಿ ಹಿಂದ್ ಮನವಿ
ಮಂಗಳೂರು: ಕುಡುಪುವಿನಲ್ಲಿ ಅಶ್ರಫ್ ಗುಂಪು ಹತ್ಯೆಯ ಬೆನ್ನಲ್ಲೇ ಇದೀಗ ರೌಡಿ ಶೀಟರ್ ಆಗಿರುವ ಸುಹಾಸ್ ಶೆಟ್ಟಿಯ ಹತ್ಯೆ ನಡೆದಿದೆ. ಈ ಹತ್ಯೆಗಳನ್ನು ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರನ್ನು ಶೀಘ್ರ ಬಂಧನಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿದೆ.
ಇತ್ತೀಚಿನ ದಿನಗಳಲ್ಲಿ ಶಾಂತವಾಗಿದ್ದ ಜಿಲ್ಲೆಯನ್ನು ಈ ಹತ್ಯೆಗಳು ಮತ್ತೊಮ್ಮೆ ಭೀತಿಯಲ್ಲಿ ಕೆಡವಿದೆ. ಹಿಂಸೆಯಿಂದ ಯಾರಿಗೂ ಒಳಿತಾಗುವುದಿಲ್ಲ. ಅಭಿವೃದ್ಧಿಯ ಕಾರಣಕ್ಕಾಗಿ ಸುದ್ದಿಯಲ್ಲಿ ಇರಬೇಕಾದ ಜಿಲ್ಲೆಯೊಂದು ಹತ್ಯೆಯ ಕಾರಣಕ್ಕೆ ಮತ್ತು ಹಿಂಸೆಯ ಕಾರಣಕ್ಕಾಗಿ ಸುದ್ದಿಯಲ್ಲಿರುವುದು ಅತ್ಯಂತ ಖೇದಕರ. ಆದ್ದರಿಂದ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಗಂಭೀರವಾಗಿ ಅವಲೋಕನ ನಡೆಸಬೇಕು. ಜನಪ್ರತಿನಿಧಿಗಳು ಜವಾಬ್ದಾರಿಯಿಂದ ನಡಕೊಳ್ಳಬೇಕಲ್ಲದೆ ಪೊಲೀಸ್ ಇಲಾಖೆ ಧರ್ಮ ಜಾತಿ ನೋಡದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ಒತ್ತಾಯಿಸಿದೆ.
ಧಾರ್ಮಿಕ ಮುಖಂಡರು ಮತ್ತು ಸೌಹಾರ್ದ ಪ್ರೇಮಿಗಳು ಈ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಶಾಂತಿ ಕಾಪಾಡಲು ಪ್ರಯತ್ನಿಸಬೇಕು ಎಂದು ಕರೆ ನೀಡಿರುವ ಜಮಾಅತೆ ಇಸ್ಲಾಮಿ ಹಿಂದ್, ಕೊಲೆಗಾರರಿಗೆ ಧರ್ಮವಿಲ್ಲ. ಕೊಲೆಯೇ ಅವರ ಧರ್ಮ. ಅವರನ್ನು ಯಾವುದೇ ಧರ್ಮದ ಪ್ರತಿನಿಧಿಗಳಂತೆ ನೋಡದೆ ಸಮಾಜಘಾತುಕರಂತೆ ನೋಡುವ ವಿವೇಕವನ್ನು ಎಲ್ಲ ಪ್ರಜ್ಞಾವಂತ ನಾಗರಿಕರೂ ಪ್ರದರ್ಶಿಸಬೇಕು ಎಂದು ಆಗ್ರಹಿಸಿದೆ.