×
Ad

ಬರವಣಿಗೆ ವ್ಯಕ್ತಿತ್ವವನ್ನು ರೂಪಿಸುತ್ತದೆ: ಬಿ.ಎಂ. ರೋಹಿಣಿ

Update: 2023-07-30 17:19 IST

ಮಂಗಳೂರು, ಜು.30: ಸಾಹಿತ್ಯವನ್ನು ಪ್ರೀತಿಸಲು ಕಲಿಯಿರಿ, ಬರವಣಿಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸಮಾಜವನ್ನು ನೋಡುವ ದೃಷ್ಟಿ ಕೋನವನ್ನು ಸಾಹಿತ್ಯದ ರೂಪದಲ್ಲಿ ನಾವು ಕಂಡು ಕೊಳ್ಳಬಹುದು, ಮಹಿಳೆಯರು ಸಾಹಿತ್ಯ ಕ್ಷೇತ್ರವನ್ನು ಬಹು ಬೇಗ ರೂಢಿಸಿಕೊಳ್ಳುತ್ತಾರೆ ಎಂದು ಹಿರಿಯ ಸಾಹಿತಿ ಬಿ. ಎಂ. ರೋಹಿಣಿ ಹೇಳಿದ್ದಾರೆ.

ಅವರು ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಯುವ ಸಿಂಚನ ಸಂಪಾದಕ ಮಂಡಳಿಯ ಆಶ್ರಯದಲ್ಲಿ ರವಿವಾರ ಮಂಗಳೂರು ಉರ್ವ ಸ್ಟೋರ್‌ನ ಯುವವಾಹಿನಿ ಸಭಾಂಗಣದಲ್ಲಿ ನಡೆದ ಬರಹಗಾರರ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದಾವಣಗೆರೆಯ ಉಪನ್ಯಾಸಕ ಫ್ರಾನ್ಸಿಸ್ ಗ್ಸೇವಿಯರ್ ಅವರು ಕೃತಿ ಸಾಮ್ಯತೆ ಹಾಗೂ ಪ್ರಕಾಶನದ ಬಗ್ಗೆ, ಮೂಡಬಿದಿರೆಯ ಆಳ್ವಾ ಸ್‌ನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಅವರು ಬರವಣಿಗೆಯಲ್ಲಿ ಅಧ್ಯಯನಶೀಲತೆಯ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ದರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನಿಶ್ ಪೂಜಾರಿ ವೇಣೂರು ಅವರು ನಮ್ಮ ಮನಸ್ಸಿನ ಗಟ್ಟಿತನ ಹಾಗೂ ಕಲಾತ್ಮಕತೆಯ ಬಗ್ಗೆ ವಿಶೇಷ ಆಟದ ಮೂಲಕ ಮಾಹಿತಿ ನೀಡಿದರು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ. ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುಮಾರು 60 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಅರ್ಹತಾ ಪತ್ರವನ್ನು ವಿತರಿಸಲಾಯಿತು.

ಚೇತನ್ ವರ್ಕಾಡಿ, ಜಯಾರಂ ಕಾರಂದೂರು, ಸಾಧು ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದ್ದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಸುಮಾಕರ ಕುಂಪಲ, ಸಂಯೋಜಕ ಯುವ ಸಿಂಚನದ ಸಂಪಾದಕ ದಿನಕರ್ ಡಿ. ಬಂಗೇರ, ಸಂಪಾದಕ ಬಳಗದ ಸ್ಮಿತೇಶ್ ಬಾರ್ಯ, ರಾಜೇಶ್ ಬಲ್ಯ ಉಪಸ್ಥಿತರಿದ್ದರು.

ಯುವ ಸಿಂಚನದ ಕಾರ್ಯನಿರ್ವಾಹಕ ಸಂಪಾದಕ ಜಗದೀಶ್‌ಚಂದ್ರ ಡಿ. ಕೆ. ಸ್ವಾಗತಿಸಿದರು, ಕಾರ್ಯದರ್ಶಿ ರೋಹಿತ್ ವಂದಿಸಿದರು. ರಶ್ಮಿತಾ ಸನಿಲ್ ಮತ್ತು ಅರ್ಚನಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News