Maharastra | ಅಜಿತ್ ಪವಾರ್ ಅವರದ್ದು ಅಪಘಾತ ಮಾತ್ರ; ಅದರಲ್ಲಿ ಯಾವುದೇ ರಾಜಕೀಯವಿಲ್ಲ: ಶರದ್ ಪವಾರ್ ಪ್ರತಿಕ್ರಿಯೆ
ಅಜಿತ್ ಪವಾರ್ , ಶರದ್ ಪವಾರ್ | Photo Credit : PTI
ಮುಂಬೈ: ತಮ್ಮ ಸೋದರಳಿಯ ಹಾಗೂ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿನ ಕುರಿತು ವಿಷಾದ ವ್ಯಕ್ತಪಡಿಸಿರುವ ಎನ್ಸಿಪಿ (ಶರದ್ ಬಣ)ದ ವರಿಷ್ಠ ಶರದ್ ಪವಾರ್, ಈ ಅಪಘಾತದ ಹಿಂದೆ ರಾಜಕೀಯ ಪಿತೂರಿ ಅಡಗಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಅಪಘಾತದ ಕುರಿತು ಪ್ರಥಮ ಪ್ರತಿಕ್ರಿಯೆ ನೀಡಿದ ಶರದ್ ಪವಾರ್, ಕೆಲವು ವ್ಯಕ್ತಿಗಳು ಈ ಘಟನೆಯನ್ನು ರಾಜಕೀಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಇದರಲ್ಲಿ ಯಾವುದೇ ರಾಜಕೀಯವಿಲ್ಲ; ಇದು ಕೇವಲ ಅಪಘಾತ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯನ್ನು ರಾಜಕೀಕರಣಗೊಳಿಸದಂತೆ ಜನರಿಗೆ ಅವರು ಮನವಿ ಮಾಡಿದ್ದಾರೆ.
“ಕೆಲವರು ಈ ಘಟನೆಯನ್ನು ರಾಜಕೀಕರಣಗೊಳಿಸಲು ಯತ್ನಿಸುತ್ತಿದ್ದಾರೆ. ಆದರೆ, ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಈ ನಷ್ಟದ ದುಃಖವನ್ನು ಮಹಾರಾಷ್ಟ್ರದಲ್ಲಿರುವ ನಾವು ಬಹುತೇಕ ಎಲ್ಲರೂ ಅನುಭವಿಸುತ್ತಿದ್ದೇವೆ. ದಯವಿಟ್ಟು ಇದನ್ನು ರಾಜಕೀಯ ವಿಷಯವಾಗಿಸಬೇಡಿ” ಎಂದು ಅವರು ವಿನಂತಿಸಿದ್ದಾರೆ.
ಸೋದರಳಿಯನ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಶರದ್ ಪವಾರ್, ಇದು ಮಹಾರಾಷ್ಟ್ರಕ್ಕೆ ದೊಡ್ಡ ನಷ್ಟವಾಗಿದ್ದು, ಅದಕ್ಕೆ ಪರ್ಯಾಯ ಸೃಷ್ಟಿಸುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ.