ಸುಗಮ ವಾಯುಯಾನದ ಭರವಸೆ ನೀಡಿದ್ದ ಮೋದಿ ವಿಮಾನಗಳ ಹಾರಾಟವನ್ನೇ ನಿಲ್ಲಿಸಿದ್ದಾರೆ: ಕಾಂಗ್ರೆಸ್ ಟೀಕೆ
ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ,ಡಿ.6: ಇಂಡಿಗೋ ವಿಮಾನಗಳ ಹಾರಾಟ ರದ್ದುಗೊಂಡ ಹಿನ್ನೆಲೆಯಲ್ಲಿ ಜನಸಾಮಾನ್ಯರು ತೊಂದರೆಗೀಡಾಗಿರುವ ಬಗ್ಗೆ ಕೇಂದ್ರ ಸರಕಾರವನ್ನು ಕಾಂಗ್ರೆಸ್ ಪಕ್ಷವು ತರಾಟೆಗೆ ತೆಗೆದುಕೊಂಡಿದೆ.ವಾಯುಯಾನವನ್ನು ಸುಗಮಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಅವರು ‘ವಾಯುಯಾನವನ್ನೇ ನಿಲ್ಲಿಸಿಬಿಟ್ಟಿದ್ದಾರೆ’ ಎಂದು ಅದು ಟೀಕಿಸಿದೆ.
ಹಿಂದೆಂದೂ ಸಂಭವಿಸಿರದಂತಹ ಈ ಬಿಕ್ಕಟ್ಟಿನ ಹೊಣೆಗಾರಿಕೆಯನ್ನು ಕೇಂದ್ರ ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ್ ನಾಯ್ಡು ತೆಗೆದುಕೊಳ್ಳುವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇಂಡಿಗೋ ಅವ್ಯವಸ್ಥೆಯು ಆಕಸ್ಮಿಕವೇನೂ ಅಲ್ಲ. ವಾಯುಯಾನ ಕ್ಷೇತ್ರದಲ್ಲಿ ‘ದ್ವಿಸಾಮ್ಯ’ವನ್ನು ಸೃಷ್ಟಿಸಲು ಬಿಜೆಪಿ ನಡೆಸುತ್ತಿರುವ ನಿರಂತರ ಪ್ರಯತ್ನದ ನೇರ ಫಲಿತಾಂಶ ಇದಾಗಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಶಶಿಕಾಂತ್ ಸೆಂಥಿಲ್ ಆಪಾದಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಇಂಡಿಗೋ ವಿಮಾನಗಳ ಹಾರಾಟ ರದ್ದತಿಯು, ದೇಶದ ವಾಯುಯಾನ ಕ್ಷೇತ್ರವನ್ನು ಮೊಣಕಾಲೂರುವಂತೆ ಮಾಡಿದೆ ಎಂದರು.
ವಾಯುಯಾನ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯನ್ನು ದಮನಿಸಲು ಕಟಿಬದ್ಧವಾಗಿರುವ ಬಿಜೆಪಿಯು, ಕೆಲವೇ ಕಾರ್ಪೊರೇಟ್ ಜೊತೆಗಾರರಿಗೆ ಅನುಕೂಲಕರವಾಗುವಂತೆ ಇಡೀ ವಾಯುಯಾನ ಕ್ಷೇತ್ರವನ್ನು ಮರುರೂಪಿಸುತ್ತಿದೆ ಎಂದು ಸೆಂಥಿಲ್ ಆಪಾದಿಸಿದರು.