Uttarakhand | “ಇವನು ಇಂದಿನ ಭಾರತದ ಹೀರೋ”; ʼಮುಹಮ್ಮದ್ ದೀಪಕ್ʼಗೆ ರಾಹುಲ್ ಗಾಂಧಿ ಪ್ರಶಂಸೆ
“ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಸಾಹಸಿ”
ಹೊಸದಿಲ್ಲಿ/ಡೆಹ್ರಾಡೂನ್, ಫೆ.1: ಉತ್ತರಾಖಂಡದ ಕೋಟದ್ವಾರದಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯುವಕ ದೀಪಕ್ ರನ್ನು “ಇವನು ಇಂದಿನ ಭಾರತದ ಹೀರೋ” ಎಂದು ಕರೆದಿದ್ದಾರೆ. ದ್ವೇಷದ ವಾತಾವರಣದಲ್ಲಿ ಮಾನವೀಯತೆ ಹಾಗೂ ಸಹಬಾಳ್ವೆಯ ಸಂದೇಶ ನೀಡಿದ ಯುವಕ ಎಂದು ಅವರನ್ನು ಶ್ಲಾಘಿಸಿದ್ದಾರೆ.
ಕೋಟದ್ವಾರದಲ್ಲಿ ಹಲವು ವರ್ಷಗಳಿಂದ ‘ಬಾಬಾ ಕಟ್ ಪೀಸ್’ ಎಂಬ ಬಟ್ಟೆ ಅಂಗಡಿ ನಡೆಸುತ್ತಿದ್ದ ಮುಸ್ಲಿಂ ವೃದ್ಧ ವ್ಯಾಪಾರಿಯ ಅಂಗಡಿ ಹೆಸರಿನ ವಿಚಾರವಾಗಿ ಕೆಲವರು ತಗಾದೆ ತೆಗೆದಿದ್ದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಂಗಡಿಯ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿ ನಡೆದ ವಾಗ್ವಾದ ಗಮನ ಸೆಳೆದಿತ್ತು.
ಸುತ್ತಮುತ್ತಲಿನ ಜನರೆಲ್ಲಾ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು. ಆದರೆ ಅಲ್ಲಿಗೆ ಬಂದ ದೀಪಕ್ ಎಂಬ ಯುವಕ ಸುಮ್ಮನೆ ಕೂರಲಿಲ್ಲ. ಗುಂಪಿನ ಮಧ್ಯೆ ನುಗ್ಗಿದ ದೀಪಕ್ ನೇರವಾಗಿ ಪ್ರಶ್ನಿಸಿದ. ಹೆಸರು ಬದಲಿಸಲು ನೀವು ಯಾರು? ಈ ದೇಶ ಎಲ್ಲರಿಗೂ ಸೇರಿದ್ದು.
ಅವರ ದಬ್ಬಾಳಿಕೆಗೆ ಹೆದರದ ದೀಪಕ್, ತನ್ನ ಹೆಸರು ಕೇಳಿದಾಗ ಮೊದಲು 'ಮುಹಮ್ಮದ್ ದೀಪಕ್' ಎಂದು ಹೇಳಿ ದ್ವೇಷಿಗಳಿಗೆ ಶಾಕ್ ನೀಡಿದರು. ನನ್ನ ಧರ್ಮ ಮಾನವೀಯತೆ ಎಂದು ಸಾರಿದರು.
ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಸಾಹಸಿ” ಎಂದು ದೀಪಕ್ ರನ್ನು ಬಣ್ಣಿಸಿದ್ದಾರೆ. ಸಂವಿಧಾನ ಮೌಲ್ಯಗಳು ಮತ್ತು ಮಾನವೀಯತೆಯ ಪರವಾಗಿ ಧ್ವನಿ ಎತ್ತಿದ ಯುವಕರಿಗೆ ದೀಪಕ್ ಉದಾಹರಣೆ ಎಂದೂ ಅವರು ತಿಳಿಸಿದ್ದಾರೆ.
ಈ ಹೇಳಿಕೆಯ ನಂತರ ದೀಪಕ್ ನಡೆಗೆ ವಿವಿಧ ವಲಯಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಸೌಹಾರ್ದತೆ ಕುರಿತು ಚರ್ಚೆ ಮತ್ತೊಮ್ಮೆ ವೇಗ ಪಡೆದಿದೆ.