Uttar Pradesh | ಪೈಪ್ ಒಡೆದ ಆರೋಪದಲ್ಲಿ ಶಾಲೆಯಲ್ಲಿ ದಲಿತ ಬಾಲಕನ ಮೇಲೆ ದೌರ್ಜನ್ಯ: ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ (AI)
ಆಗ್ರಾ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಪೈಪ್ ಒಡೆದ ಆರೋಪದಲ್ಲಿ 8ನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಿಕ್ಷಕ ಮತ್ತು ಶಾಲಾ ಸಮಿತಿ ಸದಸ್ಯ ಥಳಿಸಿದ್ದಲ್ಲದೆ ನಿಂದಿಸಿ ದೌರ್ಜನ್ಯ ಎಸಗಿರುವ ಬಗ್ಗೆ ವರದಿಯಾಗಿದೆ.
ಹಲ್ಲೆಯಿಂದಾಗಿ 14 ವರ್ಷದ ದಲಿತ ಬಾಲಕನ ಬೆನ್ನು ಮತ್ತು ಕೈಕಾಲುಗಳಿಗೆ ಗಾಯಗಳಾಗಿದೆ. ಆತನಿಗೆ ನಡೆದಾಡಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ. ಇದಲ್ಲದೆ ಆರೋಪಿಗಳು ಆತನಿಗೆ ಶಾಲೆಗೆ ಬರದಂತೆ ತಾಕೀತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
“ಮೈನ್ಪುರಿಯ ಕುರವಲಿ ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಶಾಲಾ ಸಮಿತಿ ಸದಸ್ಯ ರಾಜೀವ್ ವರ್ಮಾ ಮತ್ತು ಶಿಕ್ಷಕ ಸುಖ್ಬೀರ್ ಸಿಂಗ್ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಸ್ಥಳೀಯ ಠಾಣೆಯ ಎಸ್ಎಚ್ಒ ಲಲಿತ್ ಭಾಟಿ ತಿಳಿಸಿದ್ದಾರೆ.
"ನನಗೆ ಬಾಯಾರಿಕೆಯಾಗುತ್ತಿತ್ತು, ನಾನು ನೀರು ಕುಡಿಯಲು ಹೋದಾಗ ನೀರಿನ ಟ್ಯಾಂಕ್ ಪೈಪ್ ಮುರಿದಿರುವುದು ಕಂಡು ಬಂದಿದೆ. ಪೈಪ್ ಒಡೆದಿರುವುದಾಗಿ ನನ್ನ ಮೇಲೆ ಆರೋಪ ಹೊರಿಸಲಾಯಿತು. ನಾನು ಪೈಪ್ ಒಡೆದಿಲ್ಲ ಎಂದು ಪದೇ ಪದೇ ಹೇಳಿದೆ. ಆದರೆ ಯಾರೂ ನನ್ನ ಮಾತನ್ನು ಕೇಳಲಿಲ್ಲ. ನನಗೆ ಥಳಿಸಿ ಜಾತಿ ನಿಂದನೆ ಮಾಡಿದರು. ಶಾಲೆಯ ಆವರಣದಲ್ಲಿ ಮತ್ತೆ ಕಂಡರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು" ಎಂದು ಸಂತ್ರಸ್ತ ಬಾಲಕ ಹೇಳಿದ್ದಾನೆ.
"ಪೈಪ್ಗೆ ಮತ್ತೊಬ್ಬ ಬಾಲಕ ಹಾನಿ ಮಾಡಿದ್ದಾನೆ ಮತ್ತು ನಮ್ಮ ಮಗನನ್ನು ಅನ್ಯಾಯವಾಗಿ ಗುರಿಯಾಗಿಸಿಕೊಳ್ಳಲಾಗಿದೆ" ಎಂದು ಬಾಲಕನ ಕುಟುಂಬ ಹೇಳಿಕೊಂಡಿದೆ.
ಬಾಲಕನ ಅಣ್ಣ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ಶಾಲಾ ಸಮಿತಿ ಸದಸ್ಯ ರಾಜೀವ್ ವರ್ಮಾ, "ಇದು ಸುಳ್ಳು ಆರೋಪ, ನಾನು ಘಟನೆಯ ವೇಳೆ ಅಲ್ಲಿ ಇರಲೇ ಇಲ್ಲ. ಶಿಕ್ಷಕರು ಹಾಜರಿದ್ದರಬಹುದು, ನನಗೆ ತಿಳಿದಿಲ್ಲ. ನಾನು ಶೀಘ್ರದಲ್ಲೇ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗುತ್ತೇನೆ. ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.