×
Ad

ಯೂಟ್ಯೂಬರ್ ʼಸವುಕ್ಕುʼ ಶಂಕರ್ ಅವರನ್ನು ಮತ್ತೆ ಗೂಂಡಾ ಕಾಯ್ದೆಯಡಿ ವಶಕ್ಕೆ ಪಡೆದ ತಮಿಳುನಾಡು ಪೊಲೀಸರು

Update: 2024-08-13 17:01 IST

ಸವುಕ್ಕು ಶಂಕರ್ | PC : thenewsminute.com

ಚೆನ್ನೈ: ಸವುಕ್ಕು ಶಂಕರ್ ಎಂದೇ ಖ್ಯಾತರಾಗಿರುವ ಯೂಟ್ಯೂಬರ್ ಎ.ಶಂಕರ್ ವಿರುದ್ಧ ಹೇರಲಾಗಿದ್ದ ಗೂಂಡಾ ಕಾಯ್ದೆಯನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದ ಕೆಲವೇ ದಿನಗಳ ಬಳಿಕ ತಮಿಳುನಾಡು ಸರಕಾರ ಮತ್ತೊಮ್ಮೆ ಅವರನ್ನು ಗೂಂಡಾ ಕಾಯ್ದೆಡಿ ವಶಕ್ಕೆ ಪಡೆದಿದೆ. ಗಾಂಜಾ ಹೊಂದಿದ್ದರು ಎಂಬ ಆರೋಪದಲ್ಲಿ ಯೂಟ್ಯೂಬರ್ ಶಂಕರ್ ವಿರುದ್ಧ ಮೇ ತಿಂಗಳಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಥೇನಿ ಜಿಲ್ಲಾಡಳಿತವು ಆಗಸ್ಟ್ 12ರಂದು ಮತ್ತೊಮ್ಮೆ ಗೂಂಡಾ ಕಾಯ್ದೆಯನ್ನು ಅವರ ಮೇಲೆ ಹೇರಿದೆ.

ಆಗಸ್ಟ್ 9ರಂದು ಶಂಕರ್ ವಿರುದ್ಧ ಹೇರಲಾಗಿದ್ದ ಗೂಂಡಾ ಕಾಯ್ದೆಯನ್ನು ವಜಾಗೊಳಿಸಿದ್ದ ಮದ್ರಾಸ್ ಹೈಕೋರ್ಟ್, ‘ಯಾರ ವಿರುದ್ಧವಾದರೂ ಸಾರ್ವಜನಿಕ ಅಡಚಣೆ ಕಾಯ್ದೆಯನ್ನು ಹೇರಿ, ಅವರನ್ನು ವಶಕ್ಕೆ ಪಡೆಯಬೇಕಿದ್ದರೆ, ನೈಜ ಬೆದರಿಕೆ ಅಥವಾ ದೊಡ್ಡ ಪ್ರಮಾಣದ ಶಾಂತಿ ಭಂಗ ಸಾಧ್ಯತೆ ಇರಬೇಕು” ಎಂದು ಅಭಿಪ್ರಾಯ ಪಟ್ಟಿತ್ತು.

ಇದಕ್ಕೂ ಮುನ್ನ, ಮೇ 12ರಂದು ಚೆನ್ನೈ ಪೊಲೀಸ್ ಆಯುಕ್ತ ಸಂದೀಪ್ ರೈ ಅವರ ಆದೇಶದ ಮೇರೆಗೆ ಶಂಕರ್ ವಿರುದ್ಧ ಗೂಂಡಾ ಕಾಯ್ದೆಯನ್ನು ಹೇರಲಾಗಿತ್ತು. ಈ ಕಾಯ್ದೆ ಹೇರಿದ ಮೂರು ವಾರಗಳೊಳಗೆ ಪ್ರಕರಣವನ್ನು ಸಲಹಾ ಮಂಡಳಿ ಎದುರು ಸಲ್ಲಿಸಬೇಕಾಗುತ್ತದೆ. ಈ ಕಾಯ್ದೆಯಡಿಯ ಬಂಧನದ ಆದೇಶವನ್ನು ನ್ಯಾಯಾಲಯವು ವಜಾಗೊಳಿಸುವವರೆಗೂ ಆರೋಪಿಗೆ ಜಾಮೀನು ದೊರೆಯುವುದಿಲ್ಲ.

ಇದರೊಂದಿಗೆ ಪೊಲೀಸ್ ಸಿಬ್ಬಂದಿಗಳ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಶಂಕರ್ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News