ವೈಯಕ್ತಿಕ ದ್ವೇಷಕ್ಕೆ ವ್ಯಕ್ತಿಯ ಕೊಲೆ: ನಾಲ್ವರು ಆರೋಪಿಗಳ ಸೆರೆ
ಬೆಂಗಳೂರು, ಜ. 15: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣ ಸಂಬಂಧ ಇಲ್ಲಿನ ಹೆಬ್ಬಾಳ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹೆಬ್ಬಾಳದ ಮಹೇಶ್ (35) ಮಂಜುಮಿಥುನ್ (27), ಹರೀಶ್ ಯಾನೆ ತುರ್ರೆ (35) ಹಾಗೂ ಚಿರಂಜೀವಿ (26) ಎಂದು ಗುರುತಿಸಲಾಗಿದೆ.
ಆರೋಪಿಗಳು ಜ.13ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಇಲ್ಲಿನ ಗುಡ್ಡದಹಳ್ಳಿ ಮುಖ್ಯ ರಸ್ತೆ, ಸಾದಹಳ್ಳಿ ಬೈಯ್ಯಣ್ಣ ಲೇಔಟ್ನಲ್ಲಿ ಸತೀಶ್ ಯಾನೆ ಗುಂಡ (32) ಎಂಬವನನ್ನು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸತೀಶ್ ಮತ್ತವನ ಸಹಚರರು ಹಾಗೂ ಬಂಧಿತ ಆರೋಪಿ ಮಹೇಶನ ನಡುವೆ 2011ರಿಂದ ವೈಯಕ್ತಿಕ ದ್ವೇಷವಿದ್ದು, ಆ ಹಿನ್ನೆಲೆಯಲ್ಲಿ ಈ ಹಿಂದೆಯೇ ಕೊಲೆಯತ್ನ ನಡೆಸಿದ್ದರು. ಆ ದ್ವೇಷದಿಂದಲೇ ಸತೀಶ್ ಹತ್ಯೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಇಲ್ಲಿನ ಹೆಬ್ಬಾಳ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.