ನಿವೃತ್ತ ವಿಂಗ್ ಕಮಾಂಡರ್ ಮನೆಯಲ್ಲಿ ಕಳವು
ಬೆಂಗಳೂರು, ಮಾ. 23: ಮನೆಗೆ ಬೀಗ ಹಾಕಿದ್ದನ್ನೇ ಗುರಿಯಾಗಿಸಿಕೊಂಡು ನಿವೃತ್ತ ವಿಂಗ್ ಕಮಾಂಡರೊಬ್ಬರ ಮನೆಯಲ್ಲಿ ಆಭರಣ ಮತ್ತು ನಗದು ಕಳವು ಮಾಡಿರುವ ಪ್ರಕರಣ ಇಲ್ಲಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.
ನಗರದ ತಲಕಾವೇರಿ ಲೇಔಟ್ನಲ್ಲಿ ನಿವೃತ್ತ ವಿಂಗ್ ಕಮಾಂಡರ್ ಎಸ್.ಕೆ.ಮಿತ್ರಾ ಎಂಬವರು ವಾಸವಾಗಿದ್ದು, ನಿವೃತ್ತಿಯ ನಂತರ ಸೆಕ್ಯುರಿಟಿ ಏಜೆನ್ಸಿಯೊಂದನ್ನು ನಡೆಸುತ್ತಿದ್ದರು. ಮಾ. 16 ರಂದು ಕೆಲಸದ ನಿಮಿತ್ತ ನಾಗಪುರಕ್ಕೆ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿದ ಆರೋಪಿಗಳು ಮನೆಯ ಕಿಟಕಿ ಸರಳು ಮುರಿದು ಹಣ, ಆಭರಣ ಕಳವು ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ರಾತ್ರಿ ನಾಗಪುರದಿಂದ ಮಿತ್ರಾ ಮನೆಗೆ ವಾಪಸಾಗಿದ್ದು, ಬೀಗ ತೆಗೆದು ಮನೆಯೊಳಗೆ ಹೋದಾಗ ಬೀರು ಬಾಗಿಲು ತೆರೆದಿರುವುದನ್ನು ಗಮನಿಸಿದಾಗ ಹಣ ಮತ್ತು ಆಭರಣಗಳು ಕಳವು ಆಗಿರುವುದು ಕಂಡುಬಂದಿದೆ. ಈ ಸಂಬಂಧ ಅಮೃತಹಳ್ಳಿ ಠಾಣಾ ಪೊಲೀಸರು ದೂರು ದಾಖಲಿಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.